i
ನವೆಂಬರ್-1 ರಿಂದ ಪಂಚರತ್ನ ರಥಯಾತ್ರೆಗೆ ಚಾಲನೆ, ಅಂದೇ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ-ಎಚ್.ಡಿ.ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್ ಪಕ್ಷ ಸಂಘಟನೆ ಮತ್ತು 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷ ಈಗಿನಿಂದಲೇ ತಯಾರಿ ನಡೆಸಿದ್ದು ಅಂದರ ಅಂಗವಾಗಿ ನವೆಂಬರ್ 1 ರಂದು ಪಂಚರತ್ನ ಯೋಜನೆ ಪ್ರಾರಂಭ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಬೆಂಗಳೂರಿನಲ್ಲಿ ಅವರು ಮಾಧ್ಯಮಗಳ ಜತೆ ಮಾತನಾಡಿ, ನವೆಂಬರ್-1 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಲಾಗುವುದು. ಅದಕ್ಕೂ ಮೊದಲು ಅಂದರೆ ಅಕ್ಟೋಬರ್-27ರ ಗುರುವಾರ ಬೆಳಗ್ಗೆ ಬೆಂಗಳೂರಿನ ಗವಿಗಂಗಾಧರ ದೇವಸ್ಥಾನದಲ್ಲಿ ಒಂದು ರಥಕ್ಕೆ ಪೂಜೆ ನಡೆಸಲಾಯಿತು ಎಂದು ಕುಮಾರಸ್ವಾಮಿ ತಿಳಿಸಿದರು.
ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು 1994ರಲ್ಲಿ ಕುರುಡುಮಲೆಯಿಂದಲೇ ಚುನಾವಣಾ ಪ್ರಚಾರ ಆರಂಭ ಮಾಡಿದ್ದರು. ಆಗ ಅವರು ಅಮೋಘ ಬಹುಮತ ಗಳಿಸಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದರು. ಈಗ ನಾವೂ ಅಲ್ಲಿಂದಲೇ ಪಂಚರತ್ನ ರಥಯಾತ್ರೆ ಆರಂಭ ಮಾಡುತ್ತಿವುದರ ಜೊತೆಯಲ್ಲೇ ನವೆಂಬರ್ 1ರಂದೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.
ನವೆಂಬರ್ 1ರಂದೇ ಮುಂದಿನ ವಿಧಾನಸಭೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಾರ್ವಜನಿಕ ಸಮಾರಂಭದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಆವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ನವೆಂಬರ್ 1 ರಿಂದ 5ರವರೆಗೆ ಕೋಲಾರ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯಲಿದೆ. ನ.6 ರಿಂದ 10 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, 11 ರಿಂದ 13 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ, 14 ರಿಂದ 23 ರವರೆಗೆ ತುಮಕೂರು ಜಿಲ್ಲೆ, 24 ರಿಂದ 30 ರವರೆಗೆ ಹಾಸನ ಜಿಲ್ಲೆಯಲ್ಲಿ, ಡಿಸೆಂಬರ್ 1 ರಂದು ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಡಿಸೆಂಬರ್ 2 ರಿಂದ 5 ರವರೆಗೆ ರಾಮನಗರ ಜಿಲ್ಲೆಯಲ್ಲಿ ರಥಯಾತ್ರೆ ಸಂಚಾರ ಮಾಡಲಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ಒಟ್ಟು 35 ದಿನಗಳ ಕಾಲ ನಡೆಯುವ ಮೊದಲ ಹಂತದ ರಥ ಯಾತ್ರೆಯಲ್ಲಿ ಅನೇಕ ಹಳ್ಳಿ, ಪಟ್ಟಣಗಳನ್ನು ತಲುಪುತ್ತೇವೆ. ಉದ್ಯೋಗ, ಶಿಕ್ಷಣ, ನೀರಾವರಿ, ಕೃಷಿ, ಆರೋಗ್ಯ, ಮಹಿಳಾ ಮತ್ತು ಯುವಜನ ಸಬಲೀಕರಣ ಕುರಿತಂತೆ ರೂಪಿಸಿರುವ ಪಂಚರತ್ನ ಯೋಜನೆ ಇದಾಗಿದೆ. ಹೊಸ ವರುಷದ ಜನವರಿ ತಿಂಗಳಲ್ಲಿ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪೂಜೆ ನಡೆಸಿ ಆ ಭಾಗದಲ್ಲಿ ಪಂಚರತ್ನ ರಥಯಾತ್ರೆ ಆರಂಭ ಮಾಡಲಾಗುವುದು.ಮುಖ್ಯವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದೊಡ್ಡ ಸಮಾವೇಶ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಜನವರಿ ನಂತರ ಜಿಟಿ ದೇವೇಗೌಡರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕ್ರಮಗಳಿಗೂ ನಮ್ಮ ಕಾರ್ಯಕ್ರಮಗಳಿಗೂ ವ್ಯತ್ಯಾಸ ಇದೆ. ಯಾವ ನಾಯಕರ ಬಗ್ಗೆಯೂ ನಾವು ಟೀಕೆ ಮಾಡಲ್ಲ. ನಮ್ಮದು ನಿಂದನಾ ಯಾತ್ರೆ ಅಲ್ಲ. ಜನರಿಗೆ ನಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತೇವೆ. ಭಾರತ್ ಜೋಡೋ ಕಾರ್ಯಕ್ರಮದ ಬಗ್ಗೆ ಯಾವುದೇ ಆತಂಕ ಇಲ್ಲ. ನಮ್ಮ ರಥಯಾತ್ರೆ ವಿನೂತನವಾಗಿ ಇರಲಿದೆ. ಅಭಿವೃದ್ಧಿಗೆ ಪೂರಕವಾಗಿ ಇರಲಿದೆ. ಒಟ್ಟು 120 ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತೇವೆ. ಮಾರ್ಚ್ 15 ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ನವೆಂಬರ್ 1ರಿಂದಲೇ ಪಂಚರತ್ನ ರಥಯಾತ್ರೆ ಆರಂಭ ಮಾಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ನಾನು ಭಾಗವಹಿಸುವುದು ಕಷ್ಟ. ಈ ಬಗ್ಗೆ ವಿಧಾನ ಸಭಾಧ್ಯಕ್ಷರಿಗೆ ಮಾಹಿತಿ ನೀಡುತ್ತೇನೆ. ನನ್ನ ಪರವಾಗಿ ನಮ್ಮ ಪಕ್ಷದ ಶಾಸಕರು ಅಧಿವೇಶನದಲ್ಲಿ ಭಾಗವಹಿಸುತ್ತಾರೆ. ಸಮಯ ಬಹಳ ಕಡಿಮೆ ಇದೆ. ಚುನಾವಣೆಗೂ ಸಿದ್ದರಾಗಬೇಕಿದೆ. ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ನಾನು ಹೆಚ್ಚು ತೊಡಗಿಸಿಕೊಳ್ಳುತ್ತೇನೆ. ನಮ್ಮ ಎಲ್ಲ ಶಾಸಕರಿಗೆ ಭಾಗವಹಿಸಲು ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹಾಜರಿದ್ದರು.