i
ವೀರಶೈವ-ಲಿಂಗಾಯತರು ತಲೆ ತಗ್ಗಿಸುವಂತೆ ಮಾಡಿದ ಶಿವಮೂರ್ತಿ ಮುರುಘಾ ಶರಣರು ಅಲ್ಲ: ಗೊಡಬನಾಳು ಶಿವಮೂರ್ತಯ್ಯ ಅಷ್ಟೇ..
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇವರು “ಡಾ.ಶಿವಮೂರ್ತಿ ಮುರುಘಾ ಶರಣ”ರು ಅಲ್ಲ: “ಗೊಡಬನಾಳು ಶಿವಮೂರ್ತಯ್ಯ ಅಷ್ಟೇ” ಅದೇ ಹೆಸರನಲ್ಲಿ ಕರೆಯಬೇಕು, ಮುರುಘಾ ಮಠದ ಹೆಸರು ಬಳಸಬಾರದು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಉಳಿಸಿ ಹೋರಾಟ ಸಮಿತಿ ಚಿತ್ರದುರ್ಗ ಇವರು ಬಹಿರಂಗ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮನವಿ ಮಾಡಿದ್ದು ಈಗ ಆ ಮನವಿ ಪತ್ರ ವೈರಲ್ ಆಗಿದೆ.
ಮಾನ್ಯರೇ,
ಚಿತ್ರದುರ್ಗದ ಇತಿಹಾಸ ಪ್ರಸಿದ್ಧ ಚಿನ್ಮೂಲಾದ್ರಿ ಬೃಹನ್ಮಠ ಈಗ ನಿತ್ಯ ಸುದ್ದಿಯಲ್ಲಿದೆ. ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು ಅಲಿಯಾಸ್ ಶಿವಮೂರ್ತಯ್ಯ ಬಿನ್ ಲೇಟ್ ಗುರುಮೂರ್ತಯ್ಯ ತಾಯಿ ಲೇಟ್ ಮುರಿಗೆಮ್ಮ, ಚಿತ್ರದುರ್ಗ ತಾಲ್ಲೂಕು ಕಸಬಾ ಹೋಬಳಿ ಗೊಡಬನಾಳು ಗ್ರಾಮದ ನಿವಾಸಿಯಾದ 64 ವರ್ಷದ ವೃದ್ಧ ಶಿವಮೂರ್ತಯ್ಯ, ಇವರ ಆಧಾರ್ ಕಾರ್ಡ್ ನಂಬರ್ 448780377950 ಇದ್ದು ಸದ್ಯ ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ) ಕಾಯ್ದೆ, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅನುಸಾರ ವಿವಿಧ ಕಲಂಗಳಡಿ ಗುರುತರ ಅಪರಾಧಗಳನ್ನು ಎಸಗಿದ್ದಾರೆಂಬ ಕಾರಣಕ್ಕೆ ಆರೋಪಿಯಾಗಿರುತ್ತಾರೆ.
ಇವರು ತಮ್ಮದೇ ಶ್ರೀಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಹಲವು ಅಪ್ರಾಪ್ತ ಬಾಲಕಿಯರ ಮೇಲೆ ಹತ್ತಾರು ವರ್ಷಗಳಿಂದ ನಿರಂತರ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಸಿದ ಗಂಭೀರ ಆರೋಪಗಳನ್ನು ಹೊತ್ತು ಜೈಲು ಪಾಲಾಗಿರುವ ಕ್ರಿಮಿನಲ್ ಪೀಠಾಧಿಪತಿ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.
2022ರ ಸೆಪ್ಟೆಂಬರ್ 1ರಂದು ಇವರನ್ನು ಪೊಲೀಸರು ಶ್ರೀಮಠದಲ್ಲೇ ಬಂಧಿಸಿದ್ದು ಆವತ್ತಿನಿಂದಲೂ ಅವರು ಜೈಲಿನಲ್ಲಿ ಬಂದಿ (ವಿಚಾರಣಾಧೀನ ಬಂದಿ ಸಂಖ್ಯೆ: 2261) ಆಗಿ ಸದ್ಯ ಚಿತ್ರದುರ್ಗ ಉಪ ಬಂದೀಖಾನೆಯಲ್ಲಿ ದಿನ ಎಣಿಸುತ್ತಿದ್ದು ಜಾಮೀನು ಪಡೆಯಲು ಹರಸಾಹಸದ ಕಾನೂನು ಸಮರ ನಡೆಸುತ್ತಿದ್ದಾರೆ.
ಮೇಲ್ನೋಟಕ್ಕೆ ಇವರು ಅಪರಾಧ ಎಸಗಿದ್ದಾರೆ ಎಂದು ಕಂಡುಬಂದಿರುವ ಕಾರಣ ಚಿತ್ರದುರ್ಗ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಈಗಾಗಲೇ ಇವರಿಗೆ ಸ್ಪಷ್ಟವಾಗಿ ಜಾಮೀನು ನಿರಾಕರಿಸಿದೆ.
“ಗೊಡಬನಾಳು ಶಿವಮೂರ್ತಯ್ಯ” ಕಾವಿಧಾರಿಯಾಗಲು ಅರ್ಹರೆಂದು ಪರಿಗಣಿಸುವ ಕಾಲಕ್ಕೆ ಮತ್ತು ದೀಕ್ಷಾ ಬೋಧನೆ ಪಡೆದಾಗ, ಇವರು ಭವಿಷ್ಯದಲ್ಲಿ ಯಾವತ್ತೂ ಮಠದ ಚಾರಿತ್ರ್ಯಕ್ಕೆ ಯಾವುದೇ ರೀತಿಯ ಭಂಗ ತರುವುದಿಲ್ಲ ಎಂಬ ನಿರೀಕ್ಷಣೆ ಎಲ್ಲರಲ್ಲಿ ಇತ್ತು. ಆದರೆ, ಆ ನಿರೀಕ್ಷೆ ಮತ್ತು ವಿಶ್ವಾಸಗಳು ಈಗ ಭಂಗಗೊಂಡಿವೆ. ಹೀಗಾಗಿ, ಇನ್ನು ಮುಂದೆಯೂ ನಾವು ಅವರನ್ನು ಅದೇ ಸ್ಥಾನದಲ್ಲಿ ನೋಡುವುದು ಹುಚ್ಚು ಕಲ್ಪನೆಯಾಗುತ್ತದೆ. ನಮಗೆ ನಾವೇ ಮಾಡಿಕೊಳ್ಳುವ ದ್ರೋಹವೂ ಆಗುತ್ತದೆ. ಹೀಗಾಗಿ, ಈ ಸಂದರ್ಭದಲ್ಲಿ ಅಂತಹವರನ್ನು ಸ್ಮರಿಸಿಕೊಳ್ಳುವ ನಮ್ಮ ರೀತಿಯೂ ಪರಿವರ್ತನೆಗೊಳ್ಳುವುದು ಸರಿ ಮತ್ತು ಸಮಂಜಸ.
ಇವರು ಶ್ರೀಮಠದ ಹೆಸರನ್ನು ಮತ್ತು ಗೌರವವನ್ನು ಮಲಿನಗೊಳಿಸಿದ ಅಪಕೀರ್ತಿ ಹೊಂದಿದವರಾಗಿದ್ದು ಇವರನ್ನು ಇನ್ನು ಮುಂದೆ ಮಾಧ್ಯಮದವರು ಹಾಗೂ ಇತರರು “ಡಾ.ಶಿವಮೂರ್ತಿ ಮುರುಘಾ ಶರಣರು” ಎಂದು ಸಂಬೋಧನೆ ಮಾಡದೆ “ಗೊಡಬನಾಳು ಶಿವಮಮೂರ್ತಯ್ಯ” ಎಂದೇ ಸಂಬೋಧಿಸಬೇಕು ಹಾಗೂ ಬರೆಯಬೇಕು.
ಈ ರೀತಿ ಮಾಡುವಂತೆ ಕೇಳುವ ಹಕ್ಕು ಎಲ್ಲ ಸದ್ಭಕ್ತರಿಗೆ ಇದೆ. ಕಾರಣ ಇವರು ಮಠದ ಮರ್ಯಾದೆಯನ್ನು ಮಣ್ಣುಪಾಲು ಮಾಡಿದ್ದು ಸಮಸ್ತ ವೀರಶೈವ – ಲಿಂಗಾಯತ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದವರಾಗಿದ್ದಾರೆ.
ಆದ್ದರಿಂದ, ದಯವಿಟ್ಟು ಇನ್ನು ಮುಂದೆ ಇವರನ್ನು, “ಗೊಡಬನಾಳು ಶಿವಮೂರ್ತಯ್ಯ” ಎಂದೇ ಕರೆಯಬೇಕು ಮತ್ತು ಬರೆಯಬೇಕು. ಸಾಧ್ಯವಾದರೆ ಈ ಬಗ್ಗೆ ಭಕ್ತರು ಕೋರ್ಟ್ ನಲ್ಲಿ ಸಿವಿಲ್ ದಾವೆ ಹಾಕಿ ಕಾನೂನು ಹೋರಾಟ ನಡೆಸಿ ಇದನ್ನು ಭವಿಷ್ಯದಲ್ಲಿ ಚಾಲ್ತಿಗೆ ತರಬೇಕು ಎಂದು ಈ ಮೂಲಕ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಉಳಿಸಿ ಹೋರಾಟ ಸಮಿತಿ ಮನವಿ ಮಾಡಿದೆ.