i
ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸುವುದು ಅಗತ್ಯ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾನೂನು ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕೆಂದು ನ್ಯಾಯವಾದಿ ದಿಲ್ಷಾದ್ ಉನ್ನಿಸಾ ತಿಳಿಸಿದರು.
ರಿದ್ದಿ ಫೌಂಡೇಷನ್ ವತಿಯಿಂದ ತೆರೆಯಲಾಗಿರುವ ಆಪ್ತ ಸಮಾಲೋಚನ ಕೇಂದ್ರವನ್ನು ಸ್ಟೇಡಿಯಂ ರಸ್ತೆಯಲ್ಲಿರುವ ಭಾರತ ಸೇವಾದಳದ ಕಟ್ಟಡದಲ್ಲಿನ ಡಾ.ನಾ.ಸು.ಹರ್ಡೆಕರ್ ಭವನದಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಒಳಿತು ಮಾಡುವ ಕೆಲಸವನ್ನು ರಿದ್ದಿ ಫೌಂಡೇಷನ್ ನಿಸ್ವಾರ್ಥ, ಆತ್ಮಪರಿಶುದ್ದತೆಯಿಂದ ಮಾಡುತ್ತಿರುವುದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಸ್ವಸಹಾಯ ಸಂಘಗಳ ಮೂಲಕ ಹಳ್ಳಿಗಳಿಗೂ ಇಂತಹ ಕಾರ್ಯಕ್ರಮಗಳು ತಲುಪಬೇಕು. ಧರ್ಮ ಜಾತಿಗಳಿಂದ ಮಾನವೀಯತೆಗೆ ಗೌರವ ಇಲ್ಲದಂತಾಗಿದೆ. ಶಾಂತಿ ಸೌರ್ಹಾಧತೆ ಎಲ್ಲಾ ಜಾತಿ ಧರ್ಮದವರಿಗೂ ಬೇಕು. ಮಕ್ಕಳಿಂದ ಹಿಡಿದು ವೃದ್ದರವರೆಗೂ ಒಂದಲ್ಲ ಒಂದು ರೀತಿಯ ತೊಂದರೆಯನ್ನು ಅನುಭವಿಸುತ್ತಿರುವುದರಿಂದ ನೆರವಿಗೆ ಎಲ್ಲರೂ ಮುಂದೆ ಬರಬೇಕೆಂದು ಮನವಿ ಮಾಡಿದರು.
ಕರ್ನಾಟಕ ಶಾಂತಿ ಮತ್ತು ಸೌರ್ಹಾಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ಕುಮಾರ್ ಮಾತನಾಡಿ ಮಾನಸಿಕ ಖಿನ್ನತೆ, ಕೌಟುಂಬಿಕ
ದೌರ್ಜನ್ಯಕ್ಕೊಳಗಾಗುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಾಗಾಗಿ ಆಪ್ತ ಸಮಾಲೋಚನೆ ಎಲ್ಲರಿಗೂ ಅತ್ಯಗತ್ಯವಾಗಿದೆ. ಕಾನೂನು ಚೌಕಟ್ಟಿನಲ್ಲಿ ಆಗಬೇಕು. ಮಹಿಳೆಯರಲ್ಲಿ ಕಾನೂನು ಅರಿವಿದ್ದಾಗ ಮಾತ್ರ ಅನ್ಯಾಯ, ದೌರ್ಜನ್ಯಗಳು ನಡೆದಾಗ ನ್ಯಾಯ ಪಡೆಯಬಹುದು ಎಂದು ಹೇಳಿದರು.
ಪತ್ರಕರ್ತ ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿ ಕಾನೂನು ಹಾಗೂ ಆಧ್ಯಾತ್ಮ ಒಟ್ಟಿಗೆ ಸೇರಿ ಆಪ್ತ ಸಮಾಲೋಚನೆ ಕುರಿತು ಕಾರ್ಯಕ್ರಮ ಮಾಡುತ್ತಿರುವುದು ಅದ್ಬುತ. ಅನ್ಯಾಯ, ದೌರ್ಜನ್ಯ, ಶೋಷಣೆ, ಹಲ್ಲೆ, ವರದಕ್ಷಿಣೆ ಕಿರುಕುಳಕ್ಕೆ ಒಳಗಾದಾಗ ಎಲ್ಲವನ್ನು ಮೆಟ್ಟಿ ನಿಲ್ಲಬೇಕಾದರೆ ಮಹಿಳೆಗೆ ಮೊದಲು ಕಾನೂನು ಅರಿವು ಇರಬೇಕು. ಅದಕ್ಕಾಗಿ ಆಪ್ತ ಸಮಾಲೋಚನೆ ತುಂಬಾ ಪ್ರಯೋಜನಕಾರಿಯಾಗಲಿದೆ. ಮೊಬೈಲ್, ಫೇಸ್ಬುಕ್, ವಾಟ್ಸ್ಪ್ಗಳಿಂದ ಮಾನವ ಸಂಬಂಧಗಳೆ ನಶಿಸುತ್ತಿದೆ. ಸದಾ ಒತ್ತಡದ ಜೀವನದಲ್ಲಿರುವ ಮಾನವನ ಬದುಕು ಯಾಂತ್ರಿಕರಣವಾಗುತ್ತಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು.
ಪೊಲೀಸ್ ಅಧಿಕಾರಿ ರೇವತಿ, ಹೆಚ್.ಎಸ್.ಕೆ.ಸ್ವಾಮಿ, ಚೇತನ್, ರಂಗಸ್ವಾಮಿ, ರಿದ್ದಿ ಫೌಂಡೇಷನ್ನ ಶೋಭ, ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.