i
ವಿವಿ ಸಾಗರಕ್ಕೆ ಬರುವ ಒಳ ಹರಿವಿನಲ್ಲಿ ಇಳಿಕೆ, ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲಿ…
ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಾಣಿವಿಲಾಸ ಸಾಗರ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ತಾಲೂಕಿನಲ್ಲಿ ಮುಂಗಾರು ಮಳೆ ಅಗತ್ಯಕ್ಕಿಂತ ಜಾಸ್ತಿ ಬಂದಿದೆ. ಆದರೆ ಕಳೆದ ಎರಡು ತಿಂಗಳಿಂದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಬಂದಿಲ್ಲದ ಕಾರಣ ಹಾಗೂ ವಾಣಿ ವಿಲಾಸ ಜಲಾಶಯ ಭರ್ತಿಯಾಗಿ ಕೋಡಿ ಮೂಲಕ 1621 ಕ್ಯೂಸೆಕ್ ನೀರು ಹರಿದು ಹೊರ ಹೋಗುತ್ತಿದೆ. ಈ ನೀರಿನಲ್ಲಿ ವಿವಿ ಸಾಗರ ಬಲ ಮತ್ತು ಎಡದಂಡೆ ಕಾಲುವೆಗಳ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ವಿವಿ ಸಾಗರ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 60 ಹಳ್ಳಿಗಳಿಗೆ ನೀರು ಹರಿಯುತ್ತಿದ್ದು ವಿವಿ ಸಾಗರದ ನೀರಿನ ಲಭ್ಯತೆ ಸಾಕಷ್ಟಿದ್ದು ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ಇದರ ಬಗ್ಗೆ ಗಮನ ಹರಿಸಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕಾಗಿದೆ.
ಇದರಿಂದ ಹಿಂಗಾರು ಮತ್ತು ಬೇಸಿಗೆ ಅವಧಿಗೆ ಖುಷ್ಕಿ ಜಮೀನಿನಲ್ಲಿರುವ ಬಾಳೆ, ಅಡಿಕೆ, ತೆಂಗು ಇತ್ಯಾದಿ ತೋಟಗಾರಿಕೆ ಫಸಲು ಒಣಗುತ್ತಿವೆ. ಪೋಲಾಗಿ ಹರಿದು ಸಮುದ್ರ ಸೇರುತ್ತಿರುವ ನೀರನ್ನು ರೈತರ ಜಮೀನುಗಳಿಗೆ ಹರಿಸಿದರೆ ಅಂತರ್ಜಲ ಮಟ್ಟ ವೃದ್ಧಿಯಾಗುವುದರ ಜೊತೆಯಲ್ಲಿ ಪೋಲಾಗುತ್ತಿರುವ ನೀರನ್ನು ರೈತರು ತಮ್ಮ ತೋಟಗಳಿಗೆ ಹರಿಸಿಕೊಂಡು ಉತ್ತಮ ಫಸಲು ಬೆಳೆಯಲಿದ್ದಾರೆ.
ಡ್ಯಾಂಭರ್ತಿ ನೀರು ಪೋಲು ಬೇಡಃ
ವಾಣಿ ವಿಲಾಸ ಸಾಗರ 89 ವರ್ಷಗಳ ನಂತರ 2ನೇ ಬಾರಿಗೆ ಕೋಡಿ ಬಿದ್ದು ಕಳೆದ ಎರಡೂವರೆ ತಿಂಗಳಿಂದ ಕೋಡಿ ಮೂಲಕ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಹೊರ ಹೋಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ದಿನಾಂಕ 14-11-2022ರ ಸೋಮವಾರ ಬೆಳಿಗ್ಗೆ 789 ಕ್ಯೂಸೆಕ್ ನೀರಿನ ಒಳ ಹರಿವು ಇದ್ದು 1621 ಕ್ಯೂಸೆಕ್ ನೀರು ಕೋಡಿ ಮೂಲಕ ಹರಿದು ಹೊರ ಹೋಗುತ್ತಿದೆ.
ಎಡ ಮತ್ತು ಬಲ ಕಾಲುವೆಗಳ ಮೂಲಕ ತಲಾ 400 ಕ್ಯೂಸೆಕ್ ನೀರನ್ನು ಹರಿಸಿ ಉಳಿಕೆಯಾಗುವ ನೀರನ್ನು ವೇದಾವತಿ ನದಿ ಪಾತ್ರದ ಮೂಲಕ ಹರಿಸಲಿ. ಕಾಲುವೆಗಳಿಗೆ ನೀರು ಹರಿಸುವುದರಿಂದ ಅಗತ್ಯ ಇರುವ ರೈತರು ತಮ್ಮ ಜಮೀನುಗಳಿಗೆ ನೀರು ಕಟ್ಟಿಕೊಳ್ಳಲಿದ್ದಾರೆ. ಒಂದು ವೇಳೆ ರೈತರಿಗೆ ನೀರು ಅಗತ್ಯ ಇಲ್ಲದಿದ್ದರೂ ಕಾಲುವೆಗಳ ಮೂಲಕ ಮತ್ತೆ ವೇದಾವತಿ ನದಿ ಪಾತ್ರಕ್ಕೆ ನೀರು ಹರಿಯಲಿದೆ. ಇದರಿಂದ ಯಾರಿಗೂ ನಷ್ಟವಾಗುವುದಿಲ್ಲ. ಅಲ್ಲದೆ ವಾಣಿ ವಿಲಾಸ ಜಲಾಶಯದ ಬುಡದಿಂದ ಆರಂಭವಾಗಿ ವಾಣಿ ವಿಲಾಸ ಪುರ, ಭರಮಗಿರಿ, ಕುರುಬರಹಳ್ಳಿ, ಕೂನಿಕೆರೆ, ಮಾಯಸಂದ್ರ, ಹುಚ್ಚವ್ವನಹಳ್ಳಿ, ಲಕ್ಕವ್ವನಹಳ್ಳಿ ಹಿರಿಯೂರು ನಗರದ ತನಕ ಬಹುತೇಕ ದೊಡ್ಡ ದೊಡ್ಡ ಕಪ್ಪು ಬಣ್ಣದ ಹೆಬ್ಬಂಡೆಗಳಿವೆ. ಈ ಭಾಗದಲ್ಲಿ ಎಷ್ಟು ಕೊಳವೆ ಬಾವಿ ಕೊರೆದರೂ ನೀರು ಬರುವುದಿಲ್ಲ, ಜೊತೆಗೆ ಕಾಲುವೆಯಲ್ಲಿ ನೀರು ಹರಿಸುವುದರಿಂದ ಹೆಬ್ಬಂಡೆಗಳ ಸಂದುಗೊಂದುಗಳಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ವೃದ್ಧಿಸಲಿದೆ. ಅಲ್ಲದೆ ಕಾಲುವೆಯ ಎರಡು ಬದಿಗಳ ಜಮೀನುಗಳಿಗೆ ಅಗತ್ಯ ನೀರು ಲಭ್ಯವಾಗಲಿದೆ. ಹೀಗಾಗಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಕೂಡಲೇ ವಾಣಿ ವಿಲಾಸ ಸಾಗರದ ಎಡ ಮತ್ತು ಬಲ ದಂಡೆಯ ಕಾಲುವೆಗಳಲ್ಲಿ ನೀರು ಹರಿಸಲು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.
ವಿವಿ ಸಾಗರ ಡ್ಯಾಂ ಭರ್ತಿಯಾಗಿರುವುದರಿಂದ ಜಿಲ್ಲೆಯ ಬಹುತೇಕ ರೈತರು ಅಡಿಕೆ ಫಸಲು ಬೆಳೆಯಲು ಮುಂದಾಗಿದ್ದಾರೆ. ಇದು ರೈತರ ಮೊಗದಲ್ಲಿ ಹೊಸ ಚೈತನ್ಯದ ಭರವಸೆ ಮೂಡಿಸಿದೆ. ಮಧ್ಯ ಕರ್ನಾಟಕದ ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಸೇರಿದಂತೆ ಉಳಿದ ಐದು ತಾಲೂಕುಗಳಲ್ಲೂ ಜಲಮೂಲ ವೃದ್ಧಿಸಿದ್ದು ರೈತರು ಹರ್ಷ ಚಿಕಿತರಾಗಿದ್ದಾರೆ.
ಜಲಾಶಯ ಭರ್ತಿಯಾಗಿದ್ದು ಹೆಚ್ಚಿನ ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ರೈತರು ಲಾಭದಾಯಕ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ತಾಲೂಕು ಮತ್ತು ಜಿಲ್ಲಾಡಳಿತ ಇದಕ್ಕೆ ಉತ್ತೇಜನ ನೀಡಬೇಕಾಗಿದೆ. ಈಗಾಗಲೇ ರೈತರು ತಮ್ಮ ಜಮೀನುಗಳಲ್ಲಿ ಅಡಿಕೆ, ತೆಂಗು, ದಾಳಿಂಬೆ, ಬಾಳೆ ಸೇರಿದಂತೆ ಮತ್ತಿತರರ ಬೆಳೆಗಳನ್ನು ನಾಟಿ ಮಾಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿದ್ದು ಜಿಲ್ಲೆ ಮತ್ತು ಹಿರಿಯೂರು ತಾಲೂಕಿನ ಚಿತ್ರಣ ಬದಲಾಗಿ ಅರೆ ಮಲ್ನಾಡಾಗಿ ರೂಪಾಂತರಗೊಳ್ಳುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ.
ಸತತವಾಗಿ ಎರಡೂವರೆ ತಿಂಗಳಿಂದ ವೇದಾವತಿ ನದಿ ಪಾತ್ರದಲ್ಲಿ ಡ್ಯಾಂ ಭರ್ತಿಯಾದ ನೀರು ಕೋಡಿ ಮೂಲಕ ಹರಿಯುತ್ತಿರುವುದರಿಂದಾಗಿ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಾಗಿರುವುದು ಒಂದು ಕಡೆಯಾದರೆ, ಕೆಲವು ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಹೊರ ಹರಿಯುತ್ತಿವೆ.
ಅಲ್ಲದೇ ಅಚ್ಚುಕಟ್ಟೆ ಪ್ರದೇಶ, ನದಿ ಪಾತ್ರದ ಕೆರೆಗಳು, ಚೆಕ್ ಡ್ಯಾಂಗಳು ಸಹ ಭರ್ತಿಯಾಗಿವೆ.
ನಷ್ಟಕ್ಕಿಂತ ಲಾಭವೇ ಜಾಸ್ತಿ- ವಾಣಿ ವಿಲಾಸ ಸಾಗರದ ಎಡ ಮತ್ತು ಬಲ ಕಾಲುವೆಗಳಲ್ಲಿ ನೀರು ಹರಿಸುವುದರಿಂದ ನಷ್ಟಕ್ಕಿಂತ ಲಾಭವೇ ಜಾಸ್ತಿಯಾಗಲಿದೆ. ಡ್ಯಾಂ ಭರ್ತಿಯಾಗಿದ್ದು ನಿತ್ಯ ಸಾವಿರಕ್ಕೂ ಹೆಚ್ಚಿನ ಕ್ಯೂಸೆಕ್ ನೀರು ಹೊರ ಹೋಗುತ್ತಿದ್ದು ಇಂತಹ ನೀರನ್ನು ಕಾಲುವೆಗಳ ಮೂಲಕ ಹರಿಸಿದರೆ ಯಾರಿಗೂ ನಷ್ಟವಾಗುವುದಿಲ್ಲ. ಒಂದು ವೇಳೆ ವಿವಿ ಸಾಗರಕ್ಕೆ ಹರಿದು ಬರುತ್ತಿರುವ ಒಳ ಹರಿವು ಸಂಪೂರ್ಣ ಸ್ಥಗಿತವಾದರೆ ಆಗ ಡ್ಯಾಂನಲ್ಲಿರುವ ನೀರನ್ನೇ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಬೇಕಾಗುತ್ತದೆ. ಆಗ ಡ್ಯಾಂ ನೀರು ಕಡಿಮೆಯಾಗಲಿದೆ. ಹಾಗಾಗಿ ಭರ್ತಿಯಾಗಿ ಹರಿದು ಸಮುದ್ರ ಸೇರುತ್ತಿರುವ ನೀರನ್ನೇ ರೈತರಿಗೆ ಹರಿಸಿದರೆ ಡ್ಯಾಂ ನೀರು ಕಡಿಮೆಯಾಗುವುದಿಲ್ಲ. ಕುಡಿಯುವ ನೀರಿನ ಸಮಸ್ಯೆಯೂ ಕಾಡುವುದಿಲ್ಲ, ಕಾಲುವೆಗಳ ಎಡ ಮತ್ತು ಬಲ ಬದಿಯ ಹಳ್ಳಿಗಳಲ್ಲಿನ ಜಮೀನುಗಳ ರೈತರಿಗೂ ಇದರಿಂದ ಅನುಕೂಲವಾಗಲಿದೆ. ಹಾಗಾಗಿ ಜಿಲ್ಲಾಡಳಿತ ತುರ್ತು ನಿರ್ಧಾರ ತೆಗೆದುಕೊಂಡು ಕಾಲುವೆಗಳ ಮೂಲಕ ಕೋಡಿ ನೀರು ಹರಿಸಿದರೆ ಸೂಕ್ತವಾಗಿರುತ್ತದೆ.