i
ಕುರಿ ಸತ್ತರೆ ಸೂಕ್ತ ಪರಿಹಾರ ದೊರೆಯಲಿದೆ-ಶಾಸಕ ಪೂರ್ಣಿಮಾ….
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕುರಿ ಮೇಕೆ ಆಕಸ್ಮಿಕವಾಗಿ ಸತ್ತರೆ ಸೂಕ್ತ ಪರಿಹಾರ ದೊರೆಯಲಿದ್ದು ರೈತರಿಗೆ ಹೆಚ್ಚಿನ ಆದಾಯ ತರುವ ಕುರಿ ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಹಿರಿಯೂರು ತಾಲೂಕು ಕಳವಿಬಾಗಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಯರಬಳ್ಳಿ ಇಲ್ಲಿ ಏರ್ಪಡಿಸಿದ್ದ 69ನೇ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ರವರು ಉದ್ಘಾಟಿಸಿ ಮಾಡಿ ಮಾತನಾಡಿದರು. ಈ ಮೊದಲು ಕುರಿ ಸತ್ತರೆ ಯಾವುದೇ ರೀತಿಯ ಪರಿಹಾರ ದೊರೆಯುತ್ತಿರಲಿಲ್ಲ, ಆದರೆ ತಾವುಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಿಡಿಲು, ಮಳೆ ಇತರೆ ರೋಗಗಳಿಂದ ಕುರಿ ಮೇಕೆಗಳು ಸತ್ತರೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದರಿಂದಾಗಿ ಮುಖ್ಯಮಂತ್ರಿಗಳು ಜಾನುವಾರುಗಳಿಗೆ ಸಿಗುವಂತೆ ಕುರಿ ಮೇಕೆಗಳು ಸತ್ತರ ಪರಿಹಾರ ಹಣ ನೀಡಲು ಆದೇಶಿಸಿ ರೈತರ ಬಾಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆಂದು ಶಾಸಕರು ತಿಳಿಸಿದರು.
ಇದೇ 22 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಾಣಿ ವಿಲಾಸ ಸಾಗರಕ್ಕೆ ಬಾಗಿನ ಅರ್ಪಿಸಲು ಬರುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ ಪ್ರತಾಪಸಿಂಹ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಶ್ಮಿ, ಶಿಮುಲ್ ನಿರ್ದೇಶಕ ಯಶವಂತರಾಜು, ವೀರಭದ್ರ ಬಾಬು, ಮುಖಂಡರಾದ ಜಿನಕಲ್ ಬಸವರಾಜು, ರಾಜಣ್ಣ, ಸಿದ್ದೇಶ್, ಮುಂತಾದವರು ಉಪಸ್ಥಿತರಿದ್ದರು.