i
ಮಕ್ಕಳಿಲ್ಲದ ಪೋಷಕರೇ ಎಚ್ಚರ, ಕಾನೂನು ಬಾಹಿರ ದತ್ತು ಪಡೆಯುವುದು ಶಿಕ್ಷಾರ್ಹ ಅಪರಾಧ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯಾವುದೇ ವ್ಯಕ್ತಿ ಕಾನೂನು ಬಾಹಿರವಾಗಿ ಮಗುವನ್ನು ಅನಧಿಕೃತವಾಗಿ ದತ್ತು ಪಡೆಯುವುದು ಅಥವಾ ಮಾರಾಟ ಮಾಡುವುದು ಕಾನೂನು ರೀತ್ಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ನವದೆಹಲಿಯ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ನಿರ್ದೇಶಕರಾದ ಜಗನ್ನಾಥ್ ದತ್ತಿ ಅವರು ತಿಳಿಸಿದರು.
ಕಬ್ಬನ್ಪಾರ್ಕ್ನ ಬಾಲಭವನದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಅಂತರಾಷ್ಟ್ರೀಯ ದತ್ತು ಮಾಸಾಚರಣೆ” ಅಂಗವಾಗಿ ರಾಜ್ಯ ಮಟ್ಟದ ದತ್ತು ಪಡೆದ ಹಾಗೂ ದತ್ತು ಪಡೆಯಲಿಚ್ಚಿಸುವ ಪೋಷಕರ ಸಭೆ – 2022ನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ – 2015 ಸೆಕ್ಷನ್ 81ರ ಅನ್ವಯ ಮಕ್ಕಳನ್ನು ಅನಧಿಕೃತ ದತ್ತು ಪಡೆಯುವುದು ಹಾಗೂ ಮಾರಾಟ ಮಾಡಿದರೆ 5 ವರ್ಷಗಳವರೆಗಿನ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1ಲಕ್ಷ ದಂಡದ ಶಿಕ್ಷಗೆ ಒಳಪಡುತ್ತಾರೆ. ಮಕ್ಕಳ ಸಂಸ್ಥೆಗಳು, ಆಸ್ಪತ್ರೆ, ನರ್ಸಿಂಗ್ ಹೋಂ, ಹೆರಿಗೆ ಆಸ್ಪತ್ರೆ ಸಿಬ್ಬಂದಿಗಳಿಂದ ಇಂತಹ ಕಾನೂನು ಬಾಹಿರ ದತ್ತು ಪ್ರಕರಣ ಕಂಡುಬಂದಲ್ಲಿ 3ವರ್ಷಗಳಿಗೆ ಕಡಿಮೆ ಇಲ್ಲದ ಹಾಗೂ 7ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಕಾರಾಗೃಹ ಶಿಕ್ಷೆಗೆ ಒಳಪಡುತ್ತಾರೆ ಎಂದು ತಿಳಿಸಿದರು.
ದತ್ತು ಪಡೆಯಲು ನಿರೀಕ್ಷಿತ ದತ್ತು ಪೋಷಕರು ಮಾನಸಿಕವಾಗಿ, ದೈಹಿಕವಾಗಿ ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಸಬಲರಿರಬೇಕು. ಯಾವುದೇ ಜೀವಕ್ಕೆ ಮಾರಕವಾಗಿರುವ ಖಾಯಿಲೆಯನ್ನು ಹೊಂದಿರಬಾರದು, ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಬಾರದು. ಯಾವುದೇ ರೀತಿಯಲ್ಲಿ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಬಾರದು.
ಯಾವುದೇ ನಿರೀಕ್ಷಿತ ದತ್ತು ಪೋಷಕರು ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೇ ಮತ್ತು ಜೈವಿಕ ಮಕ್ಕಳನ್ನು ಹೊಂದಿದ್ದರೂ ಸಹ ದತ್ತು ಪಡೆಯಬಹುದಾಗಿದೆ. ವಿವಾಹಿತರಾಗಿದ್ದಲ್ಲಿ ದಂಪತಿಗಳಿಬ್ಬರಿಂದಲೂ ಒಪ್ಪಿಗೆ ಅಗತ್ಯ. ಅವಿವಾಹಿತ, ವಿಚ್ಛೇದಿತ, ವಿಧವಾ ಸ್ತ್ರೀ ಯಾವುದೇ ಲಿಂಗದ ಮಗುವನ್ನು ಕಾನೂನು ರೀತ್ಯಾ ದತ್ತು ಪಡೆದುಕೊಳ್ಳಬಹುದು. ಅವಿವಾಹಿತ, ವಿಚ್ಛೇದಿತ, ವಿಧವಾ ಪುರುಷರಿಗೆ ಹೆಣ್ಣು ಮಗುವನ್ನು ದತ್ತು ನೀಡಲಾಗುವುದಿಲ್ಲ ಎಂದು ತಿಳಿಸಿದರು.
ನಿರೀಕ್ಷಿತ ದತ್ತು ಪೋಷಕರು ಕನಿಷ್ಠ 2ವರ್ಷಗಳ ಸ್ಥಿರ / ಉತ್ತಮ ಸಾಂಸಾರಿಕ ಜೀವನ ನಡೆಸಿರಬೇಕು. ದತ್ತು ಪಡೆಯಲು ನೋಂದಣಿ ಮಾಡಿದ ದಿನಾಂಕದಿಂದ ಅನ್ವಯಿಸುವಂತೆ ಅಂದರೆ 2ವರ್ಷದೊಳಗಿನ ಮಕ್ಕಳನ್ನು ದತ್ತು ಪಡೆಯಲು ಗರಿಷ್ಠ ವಯೋಮಿತಿ 85 ವರ್ಷಗಳು, ಏಕಪೋಷಕರಾಗಿದ್ದಲ್ಲಿ 40ವರ್ಷಗಳು. 2 ವರ್ಷ ಮೇಲ್ಪಟ್ಟು 4ವರ್ಷದೊಳಗಿನ ಮಕ್ಕಳನ್ನು ದತ್ತು ಪಡೆಯಲು 90ವರ್ಷಗಳು, ಏಕ ಪೋಷಕರಾಗಿದ್ದಲ್ಲಿ 45 ವರ್ಷಗಳು ನಿಗಧಿಪಡಿಸಲಾಗಿದೆ ಎಮದು ತಿಳಿಸಿದರು.
ಸಂಬಂಧಿಗಳಲ್ಲಿ ದತ್ತು (step parent) ಪಡೆಯುವ ವಿಚಾರಗಳಲ್ಲಿ ಗರಿಷ್ಠ ಸಂಯೋಜಿತ ವಯಸ್ಸು ಅನ್ವಯಿಸುವುದಿಲ್ಲ. 2 ಮತ್ತು ಹೆಚ್ಚಿನ ಜೈವಿಕ ಮಕ್ಕಳನ್ನು ಹೊಂದಿರುವವರು ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಮತ್ತು Hard to Place ಮಕ್ಕಳನ್ನು ಮಾತ್ರ ದತ್ತು ಪಡೆಯಲು ಅರ್ಹರಿರುತ್ತಾರೆ. ನಿರೀಕ್ಷಿತ ದತ್ತು ಪೋಷಕರು ತಮ್ಮ ಗೃಹ ಅಧ್ಯಯನ ವರದಿಯನ್ನು ಪ್ರತಿ 3 ವರ್ಷಗಳಿಗೊಮ್ಮೆ ಮರು ಮೌಲ್ಯೀಕರಿಸಬೇಕು ಎಂದು ತಿಳಿಸಿದರು.
ಕರ್ನಾಟಕದ ಬೆಂಗಳೂರಿನಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ.ನಾಗಣ್ಣಗೌಡ ಅವರು ಮಾತನಾಡಿ, ಮಕ್ಕಳ ಅಭಿರುಚಿಗೆ ತಕ್ಕಂತೆ ತಂದೆ – ತಾಯಿಗಳು ಪ್ರೋತ್ಸಾಹ ನೀಡುವುದರ ಜೊತೆಗೆ ಮಕ್ಕಳಿಗೆ ಸಿಗುವ ಸವಲತ್ತು, ಮಾಹಿತಿ, ಸಂಪನ್ಮೂಲಗಳು ಸಮರ್ಪಕವಾಗಿ ತಲುಪುವಂತಾಗಬೇಕು ಎಂದು ತಿಳಿಸಿದರು.
ಮಕ್ಕಳ ರಕ್ಷಣೆಗೆ ಮಹತ್ವ ನೀಡುವ ಉದ್ದೇಶದಿಂದ ಈ ಮಾಹೆಯನ್ನು ಬಳಸಲಾಗುತ್ತಿದ್ದು, ನವೆಂಬರ್ 14 ರಂದು ರಾಷ್ಟ್ರೀಯ ಮಕ್ಕಳ ದಿನಾಚರಣೆ, ನವೆಂಬರ್ 18 ರಂದು ಮಕ್ಕಳ ಮೇಲಿನ ದೌರ್ಜನ್ಯ ವಿರೋಧ ದಿನಾಚರಣೆ ಹಾಗೂ ನವೆಂಬರ್ 20ರಂದು ವಿಶ್ವ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಎಲ್ಲರೂ ಮಕ್ಕಳ ರಕ್ಷಣೆಗೆ ಕಟಿಬದ್ಧರಾಗಿ ಕಂಕಣ ತೊಡಬೇಕು, ಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ರಕ್ಷಣೆ ನೀಡಬೇಕು. ಕಾನೂನು ಬದ್ದವಾಗಿ ಮಕ್ಕಳಿಗೆ ರಕ್ಷಣೆ ನೀಡಬೇಕು ಎಂದು ತಿಳಿಸಿದರು. “ಜನನಿ ಜನ್ಮಿಶ್ಚಃ” ತಾಯಿಯು ದೇವರಿಗೆ ಸಮಾನ, ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಗು ಹೆತ್ತವರಿಗೆ ಹೇಗೆ ಸಮಾನವಾಗಿರುವುದೋ ಅದೇ ರೀತಿ ದತ್ತು ಪಡೆದ ಮಕ್ಕಳೂ ಸಹ ಆಯಾ ಪೋಷಕರಿಗೆ ಸಮಾನವಾಗಿರುವುದು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಬೇಕು. ಮಕ್ಕಳ ಅಭಿರುಚಿಗಳನ್ನು ಅರ್ಥ ಮಾಡಿಕೊಂಡು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಇತ್ತೀಚೆಗೆ ಮಕ್ಕಳಿಗೆ ಸಿಗುವ ಸವಲತ್ತುಗಳು ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಗಮನವಹಿಸಿ ಮಕ್ಕಳಿಗೆ ಸಿಗುವ ಸವಲತ್ತುಗಳನ್ನು ನೇರವಾಗಿ ಮಕ್ಕಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ವಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕರಾದ ಪಲ್ಲವಿ ಅಕುರಾತಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಾದ ಚಂದ್ರಕಾಂತ್ ಎಂ.ವಿ, ರಾಜ್ಯ ದತ್ತು ಸಂಪನ್ಮೂಲ ಕೇಂದ್ರದ ನಿರ್ದೇಶಕರು ಡಾ.ಕೆ.ಎನ್.ಅನುರಾಧಾ, ವಿಕಲಚೇತನ ಆಯೋಗದ ನಿರ್ದೇಶಕರು ಕೆ.ಎಸ್.ಲತಾಕುಮಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವರ ಆಪ್ತಕಾರ್ಯದರ್ಶಿಗಳಾದ ನಂದನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಚಂದ್ರಶೇಖರ್, ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕರಾದ ಕೆ.ಹಲಿಮಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿಗಳು ಉಪಸ್ಥಿತದಿದ್ದರು.