i
ಬೃಹತ್ ಬ್ಯಾಂಕ್ ಖಾತೆ ತೆರೆಯುವ ಮೇಳ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಗುಂಪುಗಳ ಯೋಜನೆಯನ್ನು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ 15 ರಿಂದ 29 ವರ್ಷ ವಯೋಮಿತಿಯೊಳಗಿನ ಯುವಕರು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ 10 ರಿಂದ 20 ಸದಸ್ಯರನ್ನು ಒಳಗೊಂಡ 02 ಗುಂಪುಗಳನ್ನು ರಚನೆ ಮಾಡಿ ಆರ್ಥಿಕ ಚಟುವಟಿಕೆಯನ್ನು ಕೈಗೊಂಡು ಸದೃಢರಾಗಲು ಉದ್ದೇಶಿಸಲಾಗಿದೆ.
ಈ ಯುವಕರ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ಚಟುವಟಿಕೆಯನ್ನು ಪ್ರಾರಂಭಿಸಲು ಆ್ಯಂಕರ್ ಬ್ಯಾಂಕ್ ಮೂಲಕ ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಮತ್ತು ಗುಂಪಿನ ವಹಿವಾಟು ನಡೆಸಲು ಅನುಕೂಲವಾಗುವಂತೆ ಮಾಡಲು ದಿನಾಂಕ 23-11-2022 ಮತ್ತು 24-11-2022, 2 ದಿನಗಳಂದು ಆಯಾ ಜಿಲ್ಲೆಯ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಗುಂಪುಗಳಿಗೆ ಮಾತ್ರ “ಬೃಹತ್ ಬ್ಯಾಂಕ್ ಖಾತೆ ತೆರೆಯುವ ಮೇಳ” ವನ್ನು ಆಯೋಜಿಸಲಾಗಿದೆ.
ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಗುಂಪು ಯೋಜನೆ ಅಡಿಯಲ್ಲಿ ಈಗಾಗಲೇ ರಚನೆ ಆಗಿರುವ ಮತ್ತು ರಚನೆ ಆಗಬೇಕಾಗಿರುವ ಗುಂಪುಗಳು ಬ್ಯಾಂಕ್ ಖಾತೆ ಅರ್ಜಿ ನಮೂನೆ, ಗುಂಪಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತರೆಯಲು ಸಭಾ ನಡವಳಿ, ಗುಂಪಿನ ಪದಾಧಿಕಾರಿಗಳ ಕೆ.ವೈ.ಸಿ ದಾಖಲೆ ಹಾಗೂ ಆಯಾ ಗ್ರಾಮ ಪಂಚಾಯತಿಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ದೃಢೀಕರಣ ಪತ್ರದ ಮೂಲ ದಾಖಲೆಗಳೊಂದಿಗೆ ನಗರಿ ಮೇಳದಲ್ಲಿ ಖುದ್ದಾಗಿ ಭಾಗವಹಿಸಿ ಬ್ಯಾಂಕ್ ತೆರೆಯುವ ಮೂಲಕ ಯೋಜನೆಯ ಯಶಸ್ಸಿಗೆ ಸಹಕಾರ ನೀಡಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.