i
ಹಿರಿಯ ಬಿಜೆಪಿಗರಿಗೆ ಆತಂಕ, ನಾಲ್ಕೈದು ಸಲ ಗೆದ್ದವರಿಗೆ ಟಿಕೆಟ್ ಇಲ್ಲ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತೋ ಇಲ್ಲವೇ ಎಂಬ ಚಿಂತೆ ಬೇಡ. ಪಕ್ಷ ಸಂಘಟಿಸಲು ಮುಂದಾಗಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿರುವುದು ಹಲವು ಹಿರಿಯ ನಾಯಕರಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಪ್ರಶಿಕ್ಷಣ ಶಿಬಿರದಲ್ಲಿ ಬಿ.ಎಲ್.ಸಂತೋಷ್ ಈ ರೀತಿಯ ಹೇಳಿಕೆ ನೀಡಿದ್ದರಿಂದಾಗಿ ಹಿರಿಯರು, ಸಚಿವರು ಮತ್ತು ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆಯೇ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಯೋಚಿಸಿ, ಚಿಂತಿಸಿ ಸಾಕಷ್ಟು ಅಳೆದುತೂಗಿ ಬಿ.ಎಲ್.ಸಂತೋಷ್ ಮಾತನಾಡುತ್ತಾರೆ. ಅವರು ನೀಡುವಂತ ಹೇಳಿಕೆಗಳು ಭವಿಷ್ಯದಲ್ಲಿ ಅನುಷ್ಠಾನಕ್ಕೆ ಬರುತ್ತಿವೆ. ಅವರು ಭವಿಷ್ಯದ ಚುನಾವಣೆಗೆ ಸಾಕಷ್ಟು ಬದಲಾವಣೆ ಮಾಡುವ ಸಾಧ್ಯತೆ ಬಿಜೆಪಿ ವರಿಷ್ಠರಲ್ಲಿ ಇದ್ದಂತೆ ಕಾಣುತ್ತಿದೆ ಎನ್ನುವುದು ರಾಜಕೀಯ ಲೆಕ್ಕಾಚಾರಗಳಾಗಿದೆ.
ಸಂತೋಷ್ ನೀಡಿರುವ ಹೇಳಿಕೆಗೂ ಗುಜರಾತ್-ಕರ್ನಾಟಕ ವಿಧಾನಸಭೆಗೆ ತಾಳೆ ಹಾಕಲಾಗುತ್ತಿದೆ. ಗುಜರಾತ್ ಚುನಾವಣೆಯಲ್ಲಿ ಅನೇಕ ಹಿರಿಯ ನಾಯಕರಿಗೆ ಟಿಕೆಟ್ ನೀಡಿಲ್ಲ, ಸುಮಾರು 30ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ಕೊಡದೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕ ಚುನಾವಣೆ ನಡೆಯಲಿದೆ ಎನ್ನುವ ಮಾತುಗಳು ಬಿಜೆಪಿಯಲ್ಲೇ ಕೇಳಿ ಬಂದಿದೆ. ಆದ್ದರಿಂದ ಟಿಕೆಟ್ ಕಳೆದುಕೊಳ್ಳುವ ಆತಂಕದಲ್ಲಿ ಬಿಜೆಪಿ ಹಿರಿಯ ನಾಯಕರು, ಕೆಲ ಸಚಿವರು, ಶಾಸಕರಿದ್ದಾರೆ ಎನ್ನಲಾಗಿದೆ.