i
ಮದುವೆ ಆಗುವ ಹೆಣ್ಣು ಮಕ್ಕಳಿಗೆ 10 ಲಕ್ಷ ಪ್ರೋತ್ಸಾಹ ಧನ ನೀಡಿ-ಹಸಿರು ಪ್ರತಿಷ್ಠಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತಾಪಿ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ, ಯುವಕ ರೈತರನ್ನು ಮದುವೆಯಾಗುವಂತ ಹೆಣ್ಣು ಮಕ್ಕಳಿಗೆ ಸರ್ಕಾರ 10 ಲಕ್ಷ ಪ್ರೋತ್ಸಾಹ ಧನದ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಹಸಿರು ಪ್ರತಿಷ್ಠಾನ ಅಧ್ಯಕ್ಷ ಕೆ.ಜಿ ಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೈತ ಕುಟುಂಬದ ಯುವಕರಿಗೆ ರೈತರು ಸೇರಿದಂತೆ ಯಾರೊಬ್ಬರು ಹೆಣ್ಣು ನೀಡುತ್ತಿಲ್ಲ, ಈ ಪರಿಸ್ಥಿತಿ ಆತಂಕಕ್ಕೆ ಕಾರಣವಾಗಿದೆ. ಮದುವೆ ಆಗಲಿಲ್ಲ ಎಂದರೆ ರೈತ ಮಕ್ಕಳು ಹುಟ್ಟುವಳಿ ಆಗುವುದಾದರು ಹೇಗೆ, ಮುಂದೆ ರೈತಾಪಿ ಕೆಲಸ ಮಾಡಲು ಒಂದೇ ಒಂದು ನರಪಿಳ್ಳೆ ಸಿಗುವುದಿಲ್ಲ, ಹಾಗಾಗಿ ಹೆಣ್ಣು ಮಕ್ಕಳ ಜೀವನ ಭದ್ರತೆಗಾಗಿ ಸರ್ಕಾರ ಕೂಡಲೇ 10 ಲಕ್ಷ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ದೇಶದ ಬೆನ್ನೆಲುಬು ರೈತ ಎಂದು ಬೊಬ್ಬೆ ಹೊಡೆಯುವ ರಾಜಕಾರಣಿಗಳು ಗ್ರಾಮೀಣ ಯುವ ಕೃಷಿಕರ ಬಗ್ಗೆ ಚಿಂತಿಸಿ, ಚರ್ಚಿಸಿ, ಪರಿಹಾರ ನೀಡಬೇಕು. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಮಂತ್ರಿ ಮಹೋದಯರು , ಶಾಸಕರು ಗ್ರಾಮೀಣ ಪ್ರದೇಶದ ರೈತಾಪಿ ಯುವಕರ ಬದುಕಿನ ಬಗ್ಗೆ ಗಮನಹರಿಸಿ ವಿಧಾನ ಮಂಡಲದ ಅವೇಶನದಲ್ಲಿ ಚರ್ಚಿಸಿ, ಯೋಜನೆ ರೂಪಿಸಿ ರೈತಾಪಿ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಷರತ್ತು ಬದ್ಧವಾಗಿ 10 ಲಕ್ಷ ರೂ.ಗಳ ಪ್ರೋತ್ಸಾಹ ಧನದ ವಿಶೇಷ ಪ್ಯಾಕೇಜ್ನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.
ಕೆಲ ಭಾಗಗಳಲ್ಲಿ ರೈತ ಕುಟುಂಬದ ಯುವಕರು ಆರ್ಥಿಕವಾಗಿ ಸದೃಢರಾಗಿದ್ದರೂ ಕೂಡ ಯುವತಿಯರು ಉದ್ಯೋಗಸ್ಥ ಯುವಕರನ್ನು ಮಾತ್ರ ಮದುವೆಯಾಗಲು ಇಚ್ಛಿಸುತ್ತಾರೆ. ಹೀಗಿರುವಾಗ ರೈತರು ಕೃಷಿ ಕೈಬಿಟ್ಟು ಉದ್ಯೋಗ ಅರಸಿಕೊಂಡು ನಗರ ಪ್ರದೇಶ ಸೇರಿದರೆ ಆಹಾರ ಉತ್ಪಾದನೆ ಯಾರು ಮಾಡಬೇಕು, ದೇಶ ಭವಿಷ್ಯ ಏನು ಎಂದು ಅವರು ಪ್ರಶ್ನಿಸಿದರು.
ರೈತಾಪಿ ಯುವಕರನ್ನು ಕಾಡುತ್ತಿರುವ ಮದುವೆ ಎನ್ನುವ ಸಾಮಾಜಿಕ ಪಿಡುಗಿಗೆ ಪರಿಹಾರ ರೂಪಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಸಿರು ಪ್ರತಿಷ್ಠಾನದ ರೇಣುಕಾ ಭಕ್ತರಹಳ್ಳಿ ಕಾರ್ಯಾಧ್ಯಕ್ಷ ಪಿ.ಕೆ.ಕುಮಾರ್, ಗೌರವಾಧ್ಯಕ್ಷ ಎ.ಎಸ್. ಗೋವಿಂದೇಗೌಡ, ಕೋಶಾಧ್ಯಕ್ಷ ಕೆ.ವೇಣುಗೋಪಾಲ್, ಕಾರ್ಯದರ್ಶಿ ಬಿ.ರವೀಶ್ ಗೌಡ , ಒಕ್ಕಲಿಗ ಸಂಘದ ನಿರ್ದೇಶಕ ಡಾ.ಟಿ.ಹೆಚ್.ಅಂಜನಪ್ಪ ಇದ್ದರು.