i
ದಲಿತ ಸಮುದಾಯಗಳ ಸ್ವಾಮೀಜಿಗಳ ಗೌಪ್ಯ ಸಭೆ, ಮುಖ್ಯಮಂತ್ರಿ ಹುದ್ದೆಗೆ ನಿರ್ಣಯ…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
2023ರ ವಿಧಾನಸಭಾ ಚುನಾವಣೆ 6 ತಿಂಗಳು ಬಾಕಿ ಇರುವಂತೆ ರಾಜಕೀಯವಾಗಿ ಸಭೆ ಸಮಾರಂಭ, ಸಮಾವೇಶ ನಡೆಯುವುದು ವಾಡಿಕೆ. ಆದರೆ ದಲಿತ ಸಮುದಾಯಗಳು ಎಚ್ಚೆತ್ತುಕೊಂಡು ಈ ಬಾರಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎನ್ನುವ ಬೇಡಿಕೆಯೊಂದಿಗೆ ಗೌಪ್ಯ ಸಭೆ ಮಾಡುವ ಮೂಲಕ ಮೂರು ರಾಜಕೀಯ ಪಕ್ಷಗಳಿಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಬೇಡಿಕೆ ಇಟ್ಟು ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಲು ನಿರ್ಣಯ ಮಾಡಿರುವುದು ಅತ್ಯಂತ ಉತ್ತಮವಾದ ತೀರ್ಮಾನವಾಗಿದೆ.
ಬೆಳಗಾವಿಯ ವಿದ್ಯಾನಗರದಲ್ಲಿರುವ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರ ನಿವಾಸಕ್ಕೆ ಎಸ್ ಸಿ, ಎಸ್ ಟಿ ಸಮುದಾಯದ ವಿವಿಧ ಪೀಠಗಳ ಏಳು ಮಠಾಧೀಶರು ಸೋಮವಾರ ಭೇಟಿ ನೀಡಿ ಗೌಪ್ಯ ಸಭೆ ನಡೆಸಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಡಲಾಗಿದೆ.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಚಿತ್ರದುರ್ಗ ಶಿವಶರಣ ಮಾದಾರಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮೈಸೂರು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಚಿತ್ರದುರ್ಗ ಬಂಜಾರ ಗುರುಪೀಠದ ಸಂತ ಸೇವಾಲಾಲ ಸ್ವಾಮೀಜಿ, ಚಿತ್ರದುರ್ಗ ಮೇದಾರ ಕೇತೇಶ್ವರ ಗುರುಪೀಠದ ಶ್ರೀ ಬಸವಪ್ರಭು ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಗಳು ಬೆಳಗಾವಿಗೆ ಭೇಟಿ ನೀಡಿ ಸಭೆ ನಡೆಸಿದ್ದಾರೆ.
ನಮ್ಮಲ್ಲಿರುವ ಎಲ್ಲ ರೀತಿಯ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವುದು ಸೇರಿದಂತೆ ಪರಿಶಿಷ್ಟ ಜಾತಿಯ 101 ಉಪ ಜಾತಿ, ಪರಿಶಿಷ್ಟ ಪಂಗಡದ 50 ಉಪ ಜಾತಿಯವರು ಸೇರಿದರೆ ರಾಜ್ಯದಲ್ಲಿ 2 ಕೋಟಿಗೂ ಅಧಿಕ ಜನಸಂಖ್ಯೆ ಆಗಲಿದೆ. ನಮ್ಮಲ್ಲಿರುವ ಒಗ್ಗಟ್ಟು ಇಲ್ಲದೆ ಗುಂಪು ಗುಂಪುಗಳಾಗಿ ಚದುತ್ತಿರುವುದರಿಂದಾಗಿ ಇದುವರೆಗೆ ದಲಿತ ಸಮುದಾಯಗಳಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ. ಈಗ ಎಲ್ಲ ದಲಿತ ಜಾತಿಯವರೂ ಒಂದಾಗಿ ಮಠಾಧೀಶರು ಹೇಳಿದವರಿಗೇ ಮತ ಹಾಕಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ರಾಜ್ಯ ರಾಜಕೀಯದಲ್ಲಿ ದಲಿತ ಸಮುದಾಯಗಳು ಒಗ್ಗೂಡಿದರೆ ಚಿತ್ರಣವೇ ಬದಲಾಗಲಿದೆ. ರಾಜ್ಯಾದ್ಯಂತ 51 ಕ್ಷೇತ್ರಗಳು ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಿದ್ದು ಆ ಪೈಕಿ 36 ಪರಿಶಿಷ್ಟ ಜಾತಿಗೆ, 15 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಇದರ ಜೊತೆಗೆ ಇನ್ನೂ 58 ಕ್ಷೇತ್ರಗಳಲ್ಲಿ ಪರಿಶಿಷ್ಟರೇ ಗೆಲ್ಲುವ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕುವಾರು ಸಮಾವೇಶ ಮಾಡಿ, ಆ ಕ್ಷೇತ್ರಗಳನ್ನೂ ಗೆಲ್ಲಲು ಸಿದ್ಧತೆ ಮಾಡಬೇಕು ಇದಕ್ಕಾಗಿ ಎಲ್ಲರೂ ಒಗ್ಗೂಡಬೇಕು ಎಂದು ಚರ್ಚಿಸಿ ನಿರ್ಣಯ ಕೈಗೊಲಾಯಿತು ಎನ್ನಲಾಗಿದೆ. ಸದ್ಯ ಮಾಧ್ಯಮದವರನ್ನ ದೂರ ಇಟ್ಟು ಗೌಪ್ಯ ಸಭೆ ಮಾಡಲಾಗಿದೆ.