i
ಜಿಲ್ಲೆಯ 6 ಕ್ಷೇತ್ರಗಳಲ್ಲಿ ಸ್ಪರ್ಧೆ-ರಾಜ್ಯಾಧ್ಯಕ್ಷ ಮಂಜಪ್ಪ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಪಕ್ಷವನ್ನು ಸದಸ್ಯತ್ವ ಅಭಿಯಾನದ ಮೂಲಕ ಸಂಘಟಿಸಲಾಗುತ್ತದೆ ಎಂದು ಸಮಾಜವಾದಿ ಪಾರ್ಟಿ ರಾಜ್ಯಾಧ್ಯಕ್ಷ ಎನ್.ಮಂಜಪ್ಪ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತದಿಂದ ಸಾಮಾನ್ಯ ಜನರು ಬದುಕುವಂತಿಲ್ಲ. ನಲವತ್ತು ಪರ್ಸೆಂಟ್ ಕಮೀಷನ್, ಭ್ರಷ್ಟಾಚಾರವನ್ನು ವಿರೋಧಿಸಿ ಈ ತಿಂಗಳ ಕೊನೆಯಲ್ಲಿ ಬಸವಕಲ್ಯಾಣದಿಂದ ಬೆಂಗಳೂರುವರೆಗೆ 750 ಕಿ.ಮೀ. ಸೈಕಲ್ ಜಾಥ ನಡೆಸುತ್ತೇವೆ. ತುಮಕೂರು,ಚಿತ್ರದುರ್ಗ, ಬೆಂಗಳೂರು, ರಾಯಚೂರು, ಗುಲ್ಬರ್ಗದಲ್ಲಿ ಸಮಾಜವಾದಿ ಸಮಾವೇಶವನ್ನು ಮಾಡಲಾಗುವುದೆಂದು ಹೇಳಿದರು.
1993 ಡಿಸೆಂಬರ್ನಲ್ಲಿ ರಾಜ್ಯಕ್ಕೆ ಕಾಲಿಟ್ಟ ಸಮಾಜವಾದಿ ಪಕ್ಷ ಮೂವತ್ತು ವರ್ಷಗಳಿಂದಲೂ ಅನೇಕ ಎಡರು ತೊಡರುಗಳ ನಡುವೆ ಸಾಗುತ್ತಿದೆ. ನಮ್ಮ ಪಕ್ಷದಿಂದ ಶಾಸಕರುಗಳು, ಸಚಿವರು, ಸಂಸದರುಗಳಾಗಿದ್ದಾರೆ. ಮುಲಾಯಂಸಿಂಗ್ ಯಾದವ್ ಕಟ್ಟಿ ಬೆಳೆಸಿದ ಪಕ್ಷದ ತತ್ವ ಸಿದ್ದಾಂತಗಳ ಮೇಲೆ ಅನೇಕ ನಾಯಕರುಗಳು ರಾಜ್ಯದಲ್ಲಿ ಅಧಿಕಾರ ನಡೆಸಿದ್ದಾರೆ. ಜೆ.ಹೆಚ್.ಪಟೇಲ್, ಎಸ್.ಬಂಗಾರಪ್ಪ ಇವರುಗಳು ಸಮಾಜವಾದಿ ಸಿದ್ದಾಂತಗಳ ಮೇಲೆ ರಾಜಕಾರಣ ಮಾಡಿದವರು. ರಾಜ್ಯಾಧ್ಯಕ್ಷನಾಗಿ ನಾನು ಜವಾಬ್ದಾರಿ ತೆಗೆದುಕೊಂಡು ಒಂದು ವರ್ಷ ಮೂರು ತಿಂಗಳಾಯಿತು. ಎಲ್ಲಾ ಜಿಲ್ಲೆಗಳಲ್ಲಿ ಸಮಿತಿ ರಚಿಸಿದ್ದೇನೆ. ಡಿ.15 ರೊಳಗೆ ಸಮಿತಿಗಳನ್ನು ಪುನರ್ ರಚಿಸಲಾಗುವುದು. ಬೇರೆ ಪಕ್ಷದಿಂದ ಯಾರಾದರೂ ನಮ್ಮ ಪಕ್ಷಕ್ಕೆ ಸೇರಲು ಬರುವುದಾದರೆ ಮುಕ್ತ ಅವಕಾಶವಿದೆ ಎಂದು ತಿಳಿಸಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಕ್ಕಾಗಿ ರಾಜ್ಯದ 39 ಕ್ಷೇತ್ರಗಳನ್ನು ಆಯ್ಕೆ
ಮಾಡಿಕೊಂಡಿದ್ದೇನೆ. ಆ ಪೈಕಿ 16-17 ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಎಲ್ಲಿ ನಮ್ಮ ಪಕ್ಷಕ್ಕೆ ಶಕ್ತಿ ಜನರ ಬೆಂಬಲ ಇದೆಯೋ ಅಲ್ಲಿ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲಾಗುವುದು. ಚಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರಗಳಿಂದಲೂ ನಮ್ಮ ಪಕ್ಷ ಸ್ಪರ್ಧಿಸಲಿದೆ ಎಂದರು.
ಹನ್ನೆರಡನೆ ಶತಮಾನದಲ್ಲಿಯೇ ಸಮಾಜವಾದಿ ಹುಟ್ಟುಕೊಂಡಿತು. ಉತ್ತರಪ್ರದೇಶ ಬಿಟ್ಟರೆ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷ ನೆಲೆ ಕಂಡುಕೊಂಡಿದೆ. ಹಾಗಾಗಿ ಪಕ್ಷವನ್ನು ರಾಜ್ಯದಲ್ಲಿ ಬಲಿಷ್ಠವಾಗಿ ಕಟ್ಟಬೇಕೆಂಬುದು ನಮ್ಮ ಉದ್ದೇಶ. ಹೋರಾಟದ ರೂಪದಲ್ಲಿ ಪಕ್ಷ ಬೆಳೆಸುತ್ತೇವೆಂದು ನುಡಿದರು.
ಸಮಾಜವಾದಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಸಮಿತಿ ಸದಸ್ಯ ಜಗದೀಶ್ ಹೆಚ್.ಎನ್.ಡಾ.ಎನ್.ಧನಕೋಟಿ, ಡಾ.ಯಶೋಧರ ಜಿ.ಎನ್, ಡಾ.ಸುರೇಶ್ ಎನ್. ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.