i
ಎಸ್ಟಿ ಮೀಸಲಾತಿಗಾಗಿ ಎರಡು ಲಕ್ಷ ಕಾಡುಗೊಲ್ಲರೊಂದಿಗೆ ಪಾದಯಾತ್ರೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ, 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ, ಎಲ್ಲಾ ರಾಜಕಾರಣಿಗಳೂ ಸಮುದಾಯ ಬಳಸಿಕೊಳ್ಳುತ್ತಾರೆ. ಆದರೆ ನ್ಯಾಯ ಕೊಡಿಸುತ್ತಿಲ್ಲ, ನಾವು ಯಾರನ್ನೂ ನೆಚ್ಚಿಕೊಳ್ಳುವುದು ಬೇಡ ನಾವೇ ಎಲ್ಲರೂ ಒಗ್ಗಟ್ಟಾಗಿ ಕಾಡುಗೊಲ್ಲ ಎಸ್ಟಿ ಮೀಸಲಾತಿ ಪಡೆದುಕೊಳ್ಳೋಣ ಎಂದು ಮಾಜಿ ಜಿಪಂ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಎಸ್ಟಿ ಮೀಸಲಾತಿ ಹೋರಾಟಕ್ಕಾಗಿ ಕಾಡುಗೊಲ್ಲರ ತಾಲೂಕು ಮಟ್ಟದ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾವು ಮೀಸಲಾತಿ ಪಡೆಯಲು ಕಾಲ ಸನ್ನಿಹಿತವಾಗಿದೆ. ಸುಮಾರು ಎರಡು ಲಕ್ಷ ಜನಸಂಖ್ಯೆಯೊಂದಿಗೆ ವಿಧಾನಸೌಧದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಲ್ಲರೂ ಸಿದ್ಧರಾಗಿ ಎಂದು ಕರೆ ನೀಡಿದರು.
ನಾವು ಯಾರ ಬಗ್ಗೆಯೂ ಚರ್ಚೆ ಆಗಲಿ ಅಥವಾ ಮಾತಾಡುವುದು ಆಗಲಿ ಬೇಡ ನಮ್ಮದು ಒಂದೇ ಉದ್ದೇಶ ಅದು ಮೀಸಲಾತಿ ಹೋರಾಟ ಮಾತ್ರ ಆಗಿರಬೇಕು ಎಂದು ತಿಳಿಸಿದರು. ನೀವು ಯಾವುದೇ ರಾಜಕೀಯ ಪಕ್ಷದಲ್ಲಿ ಇರಲಿ ತೊಂದರೆ ಇಲ್ಲ ಆದರೆ ಸಮುದಾಯ ಅಂತ ಬಂದಾಗ ಎಲ್ಲರೂ ಒಂದಾಗಿ ಹೋರಾಡೋಣ ಎಂದು ಹೇಳಿದರು. ನಮ್ಮ ಗೊಲ್ಲರಹಟ್ಟಿ ಗಳಿಗೆ ಯಾವುದೇ ರೀತಿಯ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ, ಹಟ್ಟಿಗಳ ಪರಿಸ್ಥಿತಿ ನೋಡಿದರೆ ನಮಗೆ ಕಣ್ಣೀರು ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಜಿಪಂ ಸದಸ್ಯ ಸಿಬಿ ಪಾಪಣ್ಣ ಮಾತನಾಡಿ ಇಂದಿನ ದಿನಮಾನಗಳಲ್ಲಿ ಗೊಲ್ಲರಹಟ್ಟಿಗಳ ಚಿತ್ರಣವನ್ನು ಯಾರು ಬೇಕಾದರೂ ಕಂಡು ಹಿಡಿಯುತ್ತಾರೆ. ಯರಬಳ್ಳಿ ಗೊಲ್ಲರಹಟ್ಟಿಯೊಳಗೆ ಹೋಗಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ಆ ಮಟ್ಟದಲ್ಲಿ ರಸ್ತೆಯಲ್ಲಿ ಗಿಡ ಗಂಟೆಗಳು ಬೆಳೆದು ನಿಂತಿವೆ. ನಮ್ಮ ಕಾರುಗಳು ಒಳಗಡೆ ಹೋಗಲು ಹರಸಾಹಸ ಪಡಬೇಕಾಯಿತು. ನಮ್ಮ ಸಮುದಾಯ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಸಿದ್ದೇಶ್ ಯಾದವ್ ಮಾತನಾಡಿ ಅತಿ ಶೀಘ್ರದಲ್ಲೇ ತುಮಕೂರಿನಲ್ಲಿ ಗೌಡ ಪೂಜಾರಿಗಳ ರಾಜ್ಯ ಮಟ್ಟದ ಸಮಾವೇಶ ನಡೆಸಲಾಗುವುದು. ನಂತರ ಚಿತ್ರದುರ್ಗದಲ್ಲಿ ಎಸ್ಟಿ ಮೀಸಲಾತಿ ಮತ್ತೊಂದು ಬೃಹತ್ ಸಮಾವೇಶ ನಡೆಯಲಿದೆ. ಇದಕ್ಕೆ ಸಮುದಾಯ ಒಗ್ಗೂಡಬೇಕು ಎಂದು ತಿಳಿಸಿದರು.
ಪದಾಧಿಕಾರಿಗಳ ಆಯ್ಕೆ: ಜಿಲ್ಲಾ ಕಾಡುಗೊಲ್ಲ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಜಿಪಂ ಸದಸ್ಯ ಸಿಬಿ ಪಾಪಣ್ಣ, ಪ್ರಭು ಯಾದವ್, ಹರೀಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಹಿರಿಯೂರು ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷರಾಗಿ ಪಿಆರ್. ದಾಸ್, ಗೌರವ ಅಧ್ಯಕ್ಷರಾಗಿ ಆಲದಮರದ ಹಟ್ಟಿ ರಂಗಯ್ಯ, ಕಾರ್ಯಾಧ್ಯಕ್ಷರಾಗಿ ಬಬ್ಬೂರು ಹೇಮಂತ್ ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಸಮಾಜ ಮುಖಂಡರಾದ ಕೆ ಟಿ ತಿಪ್ಪೇಸ್ವಾಮಿ, ಗೀತಾ ನಂದಿನಿ ಗೌಡ, ಶ್ರಣವಣಗೆರೆ ತಿಪ್ಪೇಸ್ವಾಮಿ, ಮಹಾಲಿಂಗಪ್ಪ, ಮೂಡಲಗಿರಿಯಪ್ಪ, ರಾಜ್ ಕುಮಾರ್, ಯತೀಶ್, ಗುಯಿಲಾಳ್ ನಾಗರಾಜಯ್ಯ, ಕೃಷ್ಣ ಪೂಜಾರಿ, ಕೇಂದ್ರ ಸಚಿವವರ ಆಪ್ತ ಸಹಾಯಕ ಉಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.