i
ಬಿಜೆಪಿ-ಕಾಂಗ್ರೆಸ್ ಮುಖಂಡರು ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ತುರುವೇಕೆರೆ:
ವಿಧಾನಸಭಾ ಚುನಾವಣೆ ಸಮೀಪ ಆಗುತ್ತಿದ್ದಂತೆ ಪಕ್ಷಾಂತರಿಗಳ ಪರ್ವ ಹೆಚ್ಚಾಗುತ್ತಿದ್ದು ತುರುವೇಕೆರೆ ತಾಲೂಕಿನ ಹಲವು ಗ್ರಾಮಗಳ ನೂರಾರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತ್ಯಜಿಸಿ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಎಂ.ಟಿ.ಕೃಷ್ಣಪ್ಪ ನವರ ಸಮ್ಮುಖ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ತುರುವೇಕೆರೆ ತಾಲೂಕಿನಲ್ಲಿ ಬಸ್ ನಿಲ್ದಾಣ, ಕೋರ್ಚ್, ವಾಣಿಜ್ಯ ಸಂಕೀರ್ಣ, ಹಲವಾರು ವಿದ್ಯಾ ಕೇಂದ್ರಗಳನ್ನು ಪ್ರಾರಂಭಿಸಿದ್ದು ಜನಮಾನಸದಲ್ಲಿ ಉಳಿದಿದೆ, ಅಲ್ಲದೆ ಕುಮಾರಸ್ವಾಮಿಯವರು ಜನರ ನಾಡಿಮಿಡಿತ ಅರಿತು ಮಾಡಿದ ಆಡಳಿತ, ರೈತರ ಸಾಲ ಮನ್ನಾ ಹಾಗೂ ಹಲವಾರು ಕಾರ್ಯಕ್ರಮಗಳನ್ನು ಮೆಚ್ಚಿ ತಾಲೂಕಿನ ಸಾವಿರಾರು ಯುವಕರು ಜೆಡಿಎಸ್ಗೆ ಸೇರ್ಪಡೆಯಾಗುತ್ತಿದ್ದಾರೆ. ಎಂದು ಎಂ.ಟಿ.ಕೃಷ್ಣಪ್ಪ ಹೇಳಿದರು.
ಬಿಜೆಪಿ ತ್ಯಜಿಸಿದ ಯುವ ಮುಖಂಡ ಸಂಪತ್ ಮಾತನಾಡಿ, ಕ್ಷೇತ್ರದ ಹಾಲಿ ಶಾಸಕರು ಅಭಿವೃದ್ಧಿಯ ಕಡೆ ಚಿಂತನೆ ಮಾಡುತ್ತಿಲ್ಲ, ಇದು ನಮಗೆ ಸೇರಿದಂತೆ ಕ್ಷೇತ್ರದಲ್ಲಿ ಸಾಕಷ್ಟು ಬೇಸರ ತರಿಸಿದೆ. ಬಿಜೆಪಿ ಪಕ್ಷ ಸಂಘಟನೆಗೆ ಸಾಕಷ್ಟುದುಡಿದಿದ್ದರೂ ಕಾರ್ಯಕರ್ತರನ್ನು ಸೌಜನ್ಯಕ್ಕೂ ವಿಶ್ವಾಸಕ್ಕೆ ತೆಗೆದುಕೊಳ್ಳದ ಶಾಸಕರ ನಡೆ ಖಂಡಿಸಿ ಪಕ್ಷ ತ್ಯಜಿಸಲು ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಬಾಣಸಂದ್ರ ರಮೇಶ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಎಸ್.ದೇವರಾಜು, ಪರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ರೇಣುಕಯ್ಯ, ಪಟ್ಟಣ ಪಂಚಾಯ್ತಿ ಸದಸ್ಯ ಎನ್.ಆರ್.ಸುರೇಶ್, ಬಡಾವಣೆ ಶಿವು, ಮಿಲ್ ಸುರೇಶ್, ತಂಡಗ ನಂಜುಂಡೇಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.