i
ಡಿ.ಆರ್.ಡಿ.ಓ. ಅಧಿಕಾರಿಗಳ ಕಿರುಕುಳ ಖಂಡಿಸಿ ಪ್ರತಿಭಟನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಳ್ಳಕೆರೆ ತಾಲ್ಲೂಕಿನ ಡಿ.ಆರ್.ಡಿ.ಓ. ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲಾಸಿಕ್ ಫೆಸಿಲಿಟಿಸ್ ಸರ್ವಿಸ್ ಸಂಸ್ಥೆಯಲ್ಲಿ ಗಾರ್ಡ್ನ್ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಹದಿನಾರು ಮಂದಿ ಏಕಾಏಕಿ ನಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.
ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಒಬ್ಬ ಸೂಪರ್ವೈಸರ್ ಹಾಗೂ ಹದಿನೈದು ಜನ ಕೂಲಿಕಾರರಿಗೆ ಯಾವುದೆ ಕಾರಣ ನೀಡದೆ ಕೆಲಸದಿಂದ ತೆಗೆದು ಹಾಕಿ ಹೊಸಬರನ್ನು ನೇಮಕ ಮಾಡಿಕೊಂಡಿರುವುದರಿಂದ ನಮ್ಮನ್ನೆ ನಂಬಿ ಬದುಕುತ್ತಿರುವ ಕುಟುಂಬಗಳು ಬೀದಿ ಬಿದ್ದಂತಾಗಿ ಒಂದು ಒತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಲಾಸಿಕ್ ಫೆಸಿಲಿಟಿಸ್ ಸರ್ವಿಸ್ ಸಂಸ್ಥೆಗೂ ನಮಗೂ ಸಂಬಂಧವಿಲ್ಲದಿದ್ದರೂ ವಿನಾ ಕಾರಣ ಕೆಲಸದಿಂದ ತೆಗೆದಿದ್ದಾರೆ. ಕೇಳಿದರೆ ಎ.ಟಿ.ಆರ್ ಅಧಿಕಾರಿಗಳಾದ ಶರವಣ್ಣನ್, ಮಹೇಶ್ಬಾಬು ಇವರುಗಳು ಉಡಾಫೆ ಉತ್ತರ ನೀಡುತ್ತ ದೌರ್ಜನ್ಯ ವೆಸಗುತ್ತಿದ್ದಾರೆಂದು ಆರೋಪಿಸಿದರು.
ಕೆಲಸ ಕಳೆದುಕೊಂಡಿರುವ ನಿರಂಜನ್, ತಿಪ್ಪೇಸ್ವಾಮಿ, ಅಧಿಮೂರ್ತಿ, ತುಡುಮಜ್ಜ, ಈ.ತಿಪ್ಪೇಸ್ವಾಮಿ, ಪಿ.ಮಂಜುನಾಥ, ಗುರುಮೂರ್ತಿ, ಹೇಮಣ್ಣ, ರವಿಚಂದ್ರ, ರಾಧಮ್ಮ, ನೀಲಮ್ಮ, ಶಿಲ್ಪಮ್ಮ, ಸರೋಜಮ್ಮ, ರಾಹುಲ್, ಶಿವರಾಜ್ ಇವರುಗಳು ಜಿಲ್ಲಾಡಳಿತಕ್ಕೆ ತಮ್ಮ ಅಳಲು ತೋಡಿಕೊಂಡು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.