i
ಪ್ರಾಣ ಕೊಟ್ಟೇವು ಸದಾಶಿವ ಆಯೋಗದ ವರದಿ ಜಾರಿಗೆ ಬಿಡುವುದಿಲ್ಲ-ಭೋವಿ ಸ್ವಾಮೀಜಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನ್ಯಾಯಮೂರ್ತಿ ಸದಾಶಿವ ಆಯೋಗವು ಒಳಮೀಸಲಾತಿಗೆ ಸಂಬಂಧಿಸಿದಂತೆ ಸಲ್ಲಿಸಿದ ವರದಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಅವಕಾಶ ನೀಡಬಾರದು. ಪರಿಶಿಷ್ಟ ಜಾತಿ ಪಟ್ಟಿಯಿಂದ ಕೆಲ ಎಸ್ಸಿ ಜಾತಿಗಳನ್ನು ಹೊರಗಿಟ್ಟು, ಮೀಸಲಾತಿ ಸೌಲಭ್ಯ ತಪ್ಪಿಸುವ ಹುನ್ನಾರ ಆಯೋಗದ ವರದಿಯಲ್ಲಿ ಅಡಗಿದೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಭೋವಿ ಗುರುಪೀಠದಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ನಡೆದ ಜಿಲ್ಲಾ ಜನ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸದಾಶಿವ ಆಯೋಗದ ವರದಿ ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳಿಗೆ ಮರಣ ಶಾಸನ ಆಗಿದೆ. ಪರಿಶಿಷ್ಟ ಜಾತಿ ಪಟ್ಟಿಯ 101 ಜಾತಿಗಳಲ್ಲಿ ಗೊಂದಲವನ್ನುಂಟು ಮಾಡಿದೆ. ಸದಾಶಿವ ಆಯೋಗದ ವರದಿ ಸಾರ್ವಜನಿಕ ಚರ್ಚೆ ನಡೆಯುವ ಅಗತ್ಯವಿದೆ. ವರದಿ ಬಹಿರಂಗಪಡಿಸದೇ ಯಥಾವತ್ತಾಗಿ ಅನುಷ್ಠಾನಕ್ಕೆ ಮುಂದಾದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಅಕ್ಷರ ಜ್ಞಾನ ಇಲ್ಲದ ಭೋವಿ, ಲಂಬಾಣಿ ಸೇರಿದಂತೆ ಮತ್ತಿತರೆ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೆಲ ಸಮುದಾಯಗಳನ್ನು ಹೊರಗಿಟ್ಟರೆ ಬದುಕು ದುಸ್ತರವಾಗಲಿದೆ. ಒಂದು ಸಮುದಾಯದ ಒತ್ತಡ ಹಾಗೂ ಕೆಲ ರಾಜಕಾರಣಿಗಳ ಅಭಿಪ್ರಾಯಕ್ಕೆ ಮಣಿದು ಸರ್ಕಾರ ಆತುರದ ನಿರ್ಧಾರ ಕೈಗೊಳ್ಳಬಾರದು. ವರದಿ ಕುರಿತುಸಾಧಕ, ಬಾಧಕ ಪರಿಶೀಲಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಬೇಕಿದೆ. ಪ್ರಾಣ ಕೊಟ್ಟೇವು ಸದಾಶಿವ ಆಯೋಗದ ವರದಿ ಜಾರಿಗೆ ಬಿಡುವುದಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಬೇಕಿದೆ. ಜ.10ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚು ಜನರು ಭಾಗವಹಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಲಂಬಾಣಿ ಸಮುದಾಯದ ಮುಖಂಡ ರಾಘವೇಂದ್ರ ಮಾತನಾಡಿ ಕೇಂದ್ರ
ಸಚಿವ ಎ.ನಾರಾಯಣಸ್ವಾಮಿ ಹಾಗೂ ರಾಜ್ಯ ಸಚಿವ ಗೋವಿಂದ ಕಾರಜೋಳ ಅವರು ಆಯೋಗದ ವರದಿಯ ಮೇಲೆ ಪ್ರಭಾವ ಬೀರಿದ್ದು ಈ ವರದಿ ಚರ್ಚೆಯಾದರೆ ಪರ ವಿರೋಧದ ನಡುವೆ ಸತ್ಯಾಂಶ ಬಹಿರಂಗವಾಗಲಿದೆ ಎಂದು ತಿಳಿಸಿದರು.
ಭೋವಿ ಸಮಾಜದ ಮುಖಂಡ ಆನಂದಪ್ಪ ಮಾತನಾಡಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಇತರೆ ಸಮುದಾಯಗಳ ಹಿತಕ್ಕಾಗಿ ಸದಾಶಿವ ಆಯೋಗದ ವರದಿ ಜಾರಿಯಾಗಂತೆ ತಡೆಯಬೇಕಿದೆ. ಸಮುದಾಯದ ಹೋರಾಟಕ್ಕೆ ಬೆಂಬಲ ನೀಡದ ರಾಜಕಾರಣಿಗಳನ್ನು ಬಹಿಷ್ಕರಿಸುವ ಅಗತ್ಯವಿದೆ ಎಂದು ಕರೆ ನೀಡಿದರು.
ಭೋವಿ ಸಮಾಜದ ಮುಖಂಡ ರವಿ ಮಾಕಳಿ ಮಾತನಾಡಿ, ಸದಾಶಿವ ಆಯೋಗದ ವರದಿ ಜಾರಿಯಾಗದಂತೆ ತಡೆಯಬೇಕಿದೆ. ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪರಿಶಿಷ್ಟ ಜಾತಿಗಳ ಶಕ್ತಿ ಪ್ರದರ್ಶನ ಆಗಬೇಕಿದೆ ಎಂದು ಕರೆ ನೀಡಿದರು.
ಲಂಬಾಣಿ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಸದಾಶಿವ ಆಯೋಗದ ವರದಿ ಜಾರಿಯಾದರೆ ಲಂಬಾಣಿ ಸೇರಿದಂತೆ ಹಲವು ಜಾತಿಗಳಿಗೆ ಸಂಕಷ್ಟ ಉಂಟಾಗುತ್ತದೆ. ಸಮುದಾಯದ ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ 13 ವರ್ಷ ಕಳೆದಿದೆ. ವರದಿಯ ವಿರುದ್ಧ ದಶಕದಿಂದ ಹೋರಾಟ ನಡೆಸಲಾಗುತ್ತಿದೆ. ಬೆಳಗಾವಿ ಅಧಿವೇಶನದ ಬಳಿಕ ವರದಿಯನ್ನು ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿರುವುದು ಖಂಡನೀಯ. ಎಡಗೈ ಸಮುದಾಯದ ರಾಜಕೀಯ ಪ್ರಭಾವಕ್ಕೆ ಸರ್ಕಾರ ಮಣಿದಿರುವಂತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭೋವಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ಮಂಜುನಾಥ್, ಲೋಕೇಶ್ ನಾಯ್ಕ್, ಇಂದ್ರಜೀತ್ ನಾಯ್ಕ್, ನಾಗೇಂದ್ರ ನಾಯ್ಕ್, ಆನಂತ ನಾಯ್ಕ್, ಪ್ರಕಾಶ್ ರಾಮದಾಸ್ ನಾಯ್ಕ್ ಇದ್ದರು.