i
ರಾಜ್ಯದಲ್ಲೇ ಮಾದರಿ, ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಇ ಸ್ವತ್ತು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮನೆ ಬಾಗಿಲಿಗೆ ಇ ಸ್ವತ್ತು ನೀಡುವ ವ್ಯವಸ್ಥೆ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿನೂತನ ಕಾರ್ಯಕ್ರಮಕ್ಕೆ ಗ್ರಾಮೀಣ ಭಾಗದ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತಗುತ್ತಿದೆ. ಗ್ರಾಮೀಣ ಭಾಗದವರಿಗೆ ವಿಳಂಬವಿಲ್ಲದೆ ಸರ್ಕಾರದ ಸೇವೆ ಇನ್ನು ಮುಂದೆ ಮನೆ ಬಾಗಿಲಿಗೆ ದೊರೆಯುತ್ತಿದ್ದು ಈ ಯೋಜನೆಯನ್ನು ಜಿಲ್ಲೆಯಾದ್ಯಂತ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಇಂತಹ ಮಹತ್ವದ ಕಾರ್ಯ ಯೋಜನೆಗೆ ಚಾಲನೆ ಸಿಕ್ಕಿದ್ದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ ಎಸ್ ದಿವಾಕರ್ ಅವರ ಪರಿಶ್ರಮದಿಂದಾಗಿ ಅವರ ಸಮ್ಮುಖದಲ್ಲಿ ಮನೆ ಬಾಗಿಲಿಗೆ ಇ -ಸ್ವತ್ತು ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಇತ್ತೀಚೆಗೆ ಗ್ರಾಮ ಪಂಚಾಯ್ತಿಯಲ್ಲಿ ಇ-ಸ್ವತ್ತು ವಿತರಣೆ ಮಾಡುವಾಗ ಅನಾವಶ್ಯಕ ವಿಳಂಬ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಅಲ್ಲದೆ ಈ ಕುರಿತು ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದವು. ಇದಕ್ಕೆ ತಿಲಾಂಜಲಿ ನೀಡುವ ಕಾರ್ಯ ಮಾಡಲಾಗಿದೆ.
ಆಯಾಯ ಗ್ರಾಮ ಪಂಚಾಯ್ತಿಯ ಎಲ್ಲಾ ಸಿಬ್ಬಂದಿಗಳು ಆ ಭಾಗದಲ್ಲಿ ಬರುವಂತಹ ಎಲ್ಲಾ ನಿವಾಸಿಗಳ ದಾಖಲೆಗಳನ್ನು 10 ರಿಂದ 15 ದಿನಗಳ ಮೊದಲು ಅರ್ಜಿ ಪಡೆದು, ನಿಯಮಾನುಸಾರ ಪರಿಶೀಲಿಸಿ ಎಲ್ಲಾ ತೆರಿಗೆಯನ್ನು ಪಾವತಿಸಿದ ನಂತರ, ಮನೆ ಮನೆಗೆ ಖುದ್ದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇ-ಸ್ವತ್ತು ವಿತರಣೆಗೆ ಕ್ರಮ ವಹಿಸಲು ಯೋಜನೆ ಸಿದ್ಧಪಡಿಸಲಾಗಿತ್ತು. ಅದರಂತೆ, ಚಿತ್ರದುರ್ಗ ತಾಲೂಕಿನ ಮಠದ ಕುರುಬರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಿನಾಡು ಗ್ರಾಮ ಹಾಗೂ ಎಂ.ಆರ್.ಕಾಲೋನಿಯ 80ಕ್ಕೂ ಹೆಚ್ಚು ನಿವಾಸಿಗಳಿಗೆ ಆಸ್ತಿಯ ಇ-ಸ್ವತ್ತು ಪ್ರಮಾಣ ಪತ್ರಗಳನ್ನು ನಿವಾಸಿಗಳ ಮನೆ ಬಾಗಿಲಿಗೆ ಹೋಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ವಿತರಣೆ ಮಾಡಿದರು.
ಸಾರ್ವಜನಿಕರ ಅಭಿಪ್ರಾಯ…..
ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಇ-ಸ್ವತ್ತು ಪ್ರಮಾಣ ಪತ್ರ ಬೇಗ ಪಡೆಯಲು ತುಂಬಾ ಕಷ್ಟವಾಗುತ್ತಿತ್ತು. ಆದರೆ ಮನೆ ಬಾಗಿಲಿಗೆ ಬಂದು ಇ-ಸ್ವತ್ತು ವಿತರಣೆಗೆ ಕ್ರಮ ವಹಿಸಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
ಗ್ರಾಮ ಪಂಚಾಯ್ತಿ ಅಧ್ಯಕ್ಷರು/ಸದಸ್ಯರು ಮಾತನಾಡಿ, ಪಂಚಾಯ್ತಿಗಳಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ವಿಳಂಬ ನೀತಿಯಿಂದ ಗ್ರಾಮ ಪಂಚಾಯಿತಿಗಳನ್ನು ನೋಡುವ ದೃಷ್ಟಿಕೋನವೇ ಬದಲಾಗಿದ್ದು, ಈಗ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. 15 ದಿನಗಳಲ್ಲಿ ಸುಮಾರು 4 ಲಕ್ಷ ತೆರಿಗೆ ಸಂಗ್ರಹವಾಗಿದ್ದು, ತೆರಿಗೆಯನ್ನು ಜನರು ತಾವೇ ಸ್ವತ: ಬಂದು ಪಾವತಿಸಿರುತ್ತಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ, ಜನಪ್ರತಿನಿಧಿಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.