i
ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದಿದ್ದರೆ ಚುನಾವಣೆಗೆ ನಿಲ್ಲುವುದು ಖಚಿತ…
ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ಹೊಸಪೇಟೆಯ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾದ ಮಹಮ್ಮದ್ ಇಮಾಮ್ ನಿಯಾಜಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತವಾಗಿದೆ.
200 ಪರ್ಸೆಂಟ್ ಹೈಕಮಾಂಡ್ ನನಗೆ ಪಕ್ಷದ ಟಿಕೆಟ್ ನೀಡುತ್ತದೆ ಎಂಬ ಭರವಸೆ ಇದೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಟಿಕೆಟ್ ಸಿಗದಿದ್ದರೆ ಚುನಾವಣೆಗೆ ನಿಲ್ಲುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ ಮಹಮ್ಮದ್ ಇಮಾಮ್ ನಿಯಾಜಿ ಘೋಷಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈಗಾಗಲೇ ಎರಡು ಸಲ ನನಗೆ ಪಕ್ಷದ ಟಿಕೆಟ್ ಕೈತಪ್ಪಿದೆ. ಆದರೂ ಪಕ್ಷ ಸಂಘಟನೆಗೆ ಶ್ರಮಿಸಿರುವೆ. ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಹತ್ತು ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಏಳು ಕ್ಷೇತ್ರಗಳು ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಾಗಿವೆ. ವಿಜಯನಗರ ಕ್ಷೇತ್ರ ಸೇರಿದಂತೆ ಮೂರು ಸಾಮಾನ್ಯ ಕ್ಷೇತ್ರಗಳಿವೆ. ವಿಜಯನಗರದಲ್ಲಿ 73000 ಮುಸ್ಲಿಂ ಮತದಾರರಿದ್ದಾರೆ. ಇತರೆ ಅಲ್ಪಸಂಖ್ಯಾತರ ಮತಗಳು ಸೇರಿದರೆ ಒಂದು ಲಕ್ಷವರೆಗೆ ಆಗುತ್ತವೆ, ಆಗಾಗಿ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಬೇರು ಮಟ್ಟದಿಂದ ಮೇಲೆ ಬಂದಿರುವ ನಾನು ನಗರಸಭೆ ಸದಸ್ಯ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಾಕಷ್ಟು ಬಲ ಪಡಿಸಿದ್ದೇನೆ. ಇಮಾಮ್ ಬುಕ್ ಆಗ್ತಾರೆ ಎನ್ನುವುದು ಸುಳ್ಳು. ಎಲ್ಲರಿಗೂ ದಾನ ಧರ್ಮ ಮಾಡುವ ಮನೆತನ ನಮ್ಮದು. ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ನಾನು ಏನೆಂಬುದು ಎಲ್ಲರಿಗೂ ಗೊತ್ತಿದೆ. ಯಾರೂ ಕೂಡ ನನ್ನನ್ನು ಖರೀದಿಸಲು ಆಗುವುದಿಲ್ಲ ಎಂದರು.
ಮುಖಂಡರಾದ ಎಂ.ಸಿ. ವೀರಸ್ವಾಮಿ, ಹನುಮಂತಪ್ಪ, ಕೋರಿ ಶಿವರಾಮ, ಸತ್ಯನಾರಾಯಣ, ವೆಂಕಪ್ಪ, ಅಣ್ಣಾಮಲೈ ಸುದ್ದಿಗೋಷ್ಠಿಯಲ್ಲಿದ್ದರು.