i
ಜಾನಪದ ಕಲೆ ಉಳಿಸಿ, ಬೆಳೆಸಿ– ನಿರ್ದೇಶಕ ಡಾ.ಹೆಚ್.ವಿಶ್ವನಾಥ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಂಬಿಕೆ, ಅಪನಂಬಿಕೆ, ಮೂಢನಂಬಿಕೆ ಮೀರಿ ನಂಬಿಕೆಗಳ ಆಧಾರದ ಮೇಲೆ ಬದುಕಿರುವಂತಹದು ಜಾನಪದ. ಜಾನಪದ ಮನೆಯ ಮದ್ದು. ಇಂತಹ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಹೆಚ್.ವಿಶ್ವನಾಥ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿಯ ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಸೌರಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸೋಬಾನೆ ಪದ, ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ, ಸಣ್ಣಾಟ, ದೊಡ್ಡಾಟ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳಿದ್ದು, ನಮ್ಮ ಪಾರಂಪರಿಕ ಕಲೆ, ಸಂಸ್ಕøತಿಯನ್ನು ಉಳಿಸುವ ಜೊತೆಗೆ ನಾಡು-ನುಡಿಯನ್ನು ಸಂರಕ್ಷಿಸುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದೆ ಎಂದರು.
ಸರ್ಕಾರದಿಂದ ಕಲಾವಿದರಿಗೆ ಹಲವು ಸೌಲಭ್ಯಗಳಿದ್ದು, ಅವುಗಳನ್ನು ಸದ್ಭಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಮಾತನಾಡಿ, ಜಿಲ್ಲೆಯಲ್ಲಿ ಜನಪರ ಉತ್ಸವ, ಗಿರಿಜನ ಉತ್ಸವ, ಚಿಗುರು, ಸಾಂಸ್ಕೃತಿಕ ಸೌರಭ, ಯುವ ಸೌರಭ ಮೊದಲಾದ ಕಾರ್ಯಕ್ರಮಗಳ ಮೂಲಕ ಕಲಾವಿದರಿಗೆ ವೇದಿಕೆ ದೊರಕಿಸಿಕೊಡಲಾಗುತ್ತಿದೆ. ಕಲೆ. ಸಂಸ್ಕøತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳ ಮುದಗೊಳಿಸಿದ ಯುವ ಸೌರಭ: ಯುವ ಸೌರಭ ಕಾರ್ಯಕ್ರಮದ ಅಂಗವಾಗಿ ಸುಗಮ ಸಂಗೀತ, ಜನಪದ ಗೀತೆ, ಸಮೂಹ ನೃತ್ಯ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳ ಮನಸೂರೆಗೂಂಡಿತು. ಯುವ ಸೌರಭ ಕಾರ್ಯಕ್ರಮದ ಅಂಗವಾಗಿ ಮೊಳಕಾಲ್ಮುರಿನ ನುಂಕೇಶ್ ಮತ್ತು ತಂಡದವರಿಂದ ಸುಗಮ ಸಂಗೀತ, ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದ ಗಂಗಾಧರ್ ಮತ್ತು ತಂಡದಿಂದ ಜನಪದ ಗೀತೆಗಳು, ಚಿತ್ರದುರ್ಗ ಇಂದು ಮತ್ತು ತಂಡದಿಂದ ಸಮೂಹ ನೃತ್ಯ, ಹೊಳಲ್ಕೆರೆಯ ಅರವಿಂದ್ ಮತ್ತು ತಂಡದವರಿಂದ ಅರೆವಾದ್ಯ, ಹೊಸದುರ್ಗದ ಚಂದ್ರಶೇಖರ್ ಮತ್ತು ತಂಡದವರಿಂದ ಡೊಳ್ಳು ಕುಣಿತ ಹಾಗೂ ಮದಕರಿಪುರದ ಪವನ್ ಕುಮಾರ್ ಮತ್ತು ತಂಡದವರಿಂದ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಹೆಚ್.ಜೆ.ವಿಜಯ್ ಕುಮಾರ್, ಮದಕರಿ ನಾಯಕ ಸೇರಿದಂತೆ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಿಬ್ಬಂದಿ ಇದ್ದರು.