i
ಚಿತ್ರದುರ್ಗ ಕೈಗಾರಿಕಾ ಹಬ್ ಗೆ ಭೂಮಿ ನೀಡಲು ಕೋಟಿ ಪರಿಹಾರ ಕೇಳಿದ ರೈತರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿರುವ ಚಿತ್ರದುರ್ಗ ಕೈಗಾರಿಕಾ ಹಬ್ ಸ್ಥಾಪನೆ ಮಾಡಲು 1150 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು ರೈತರಿಂದ ಭೂಮಿ ಪಡೆಯಲು ಶುಕ್ರವಾರ ಕರೆಯಲಾಗಿದ್ದ ಸಭೆಯಲ್ಲಿ ಮಾರುಕಟ್ಟೆ ದರದಂತೆ ಪ್ರತಿ ಎಕರೆಗೆ ಒಂದು ಕೋಟಿ ರೂ. ಪರಿಹಾರ ನೀಡಿದರೆ ಮಾತ್ರ ಭೂಮಿ ನೀಡುವುದಾಗಿ ರೈತರು ಪಟ್ಟು ಹಿಡಿದ ಘಟನೆ ಜರುಗಿದೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಕರೆದಿದ್ದ ರೈತರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಕಡಿಮೆ ಬೆಲೆಗೆ ಬಿಲ್ ಕುಲ್ ಭೂಮಿ ನೀಡಲು ರೈತರು ನಿರಾಕರಿಸಿದರು.
ಮಾರುಕಟ್ಟೆ ಮೌಲ್ಯದಂತೆ ಎಲ್ಲ ರೈತರಿಗೂ ಅಂದರೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಜಮೀನುಗಳು ಸೇರಿದಂತೆ ಓಬೇನಹಳ್ಳಿ ಸರ್ವೆ ನಂಬರ್ ಗಳ ಜಮೀನುಗಳಿಗೂ ಅಷ್ಟೇ ಪ್ರಮಾಣದ ಪರಿಹಾರ ನೀಡಬೇಕು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಮೇಟಿಕುರ್ಕೆ ಗ್ರಾಮದಲ್ಲಿ ಪ್ರತಿ ಎಕರೆ ಭೂಮಿ ಬೆಲೆ 50-60 ಲಕ್ಷಕ್ಕೆ ಹೋಗಿದೆ. ಇದಕ್ಕೆ ಮೂರು ಪಟ್ಟು ಪರಿಹಾರ ನೀಡಿದರೆ 1.50 ಕೋಟಿ ಮೀರಲಿದೆ. ಹಾಗಾಗಿ ನಮಗೆ ಕೋಟಿ ರೂ.ಕೊಟ್ಟರೆ ಸಾಕು ನಾವೆಲ್ಲ ಭೂಮಿ ನೀಡುತ್ತೇವೆ ಎಂದು ಬಹುತೇಕ ರೈತರು ಸಭೆಯಲ್ಲಿ ಮಾಹಿತಿ ನೀಡಿದರು. ಇದರಲ್ಲಿ ತಾರತಮ್ಯ ಮಾಡಬಾರದು. ಜೊತೆಯಲ್ಲಿ ಜಮೀನಿನಲ್ಲಿರುವ ಗಿಡ, ಗೆಂಟೆ, ಬೋರ್ ವೆಲ್, ಮನೆ ಮತ್ತು ಇತರೆ ಬೆಳೆ ಪರಿಹಾರವನ್ನು ಪ್ರತ್ಯೇಕವಾಗಿ ನೀಡಬೇಕು ಎಂದು ರೈತರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಕೋಟಿ ರೂ.ನೀಡಲು ನನ್ನ ಕೈಯಲ್ಲಿಲ್ಲ, ರೈತರ ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಿಳಿಸುತ್ತೇನೆ. ನನ್ನ ಹಂತದಲ್ಲಿ ಪ್ರತಿ ಎಕರೆಗೆ 37 ಲಕ್ಷದ ವರೆಗೆ ಭೂ ಪರಿಹಾರ ನೀಡಲು ಸಾಧ್ಯವಿದೆ. ನಿಮ್ಮ ಬೇಡಿಕೆಗೆ ಸರ್ಕಾರವೇ ಅನುಮತಿ ನೀಡಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದಿದ್ದಾಗ ಜಿಲ್ಲಾಧಿಕಾರಿಗಳ ಮುಂದಿನ 10 ದಿನಗಳ ವರೆಗೆ ಸಭೆಯನ್ನು ಮುಂದೂಡಿದರು.
ಚಿತ್ರದುರ್ಗ-ಹಿರಿಯೂರು ಮಧ್ಯ ಭಾಗದ ಮೇಟಿಕುರ್ಕೆ ಗ್ರಾಮದಲ್ಲಿ 783 ಎಕರೆ ಮತ್ತು ಕರಿಯೋಬೇನಹಳ್ಳಿ ಗ್ರಾಮದಲ್ಲಿ 373 ಎಕರೆ ಭೂಸ್ವಾಧೀನ ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ(ಕೆಐಎಡಿಬಿ) ಜಾಗ ಗುರುತಿಸಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಅಧಿಸೂಚನೆ ಹೊರಡಿಸಿತ್ತು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಕುಮಾರ್ ಅವರು ರಾಜ್ಯಪಾಲರ ಆದೇಶಾನುಸಾರ ದಿನಾಂಕ-೧೪-೦೬-೨೦೨೨ ರಂದು ೧೯೬೬ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ಕಲಂ೩(೧)ರ ಅಧಿಸೂಚನೆ ಹೊರಡಿಸಿದ್ದರು.
ಅಷ್ಟೇ ಅಲ್ಲ ಮೇಟಿಕುರ್ಕೆ ಗ್ರಾಮದ ಸರ್ವೆ ನಂಬರ್ ೭೩/೧ ರಿಂದ ಆರಂಭಿಸಿ ೧೩೪/೧ ತನಕ ಹಾಗೂ ಸರ್ವೆ ನಂಬರ್ ೨೫೯ ಸೇರಿದಂತೆ ಸುಮಾರು ೭೮೩ ಎಕರೆ ಮತ್ತು ಹಿರಿಯೂರು ತಾಲೂಕಿನ ಕರಿಯೋಬೇನಹಳ್ಳಿಯ ಸರ್ವೆ ನಂಬರ್ ೫೪/೧ ರಿಂದ ಆರಂಭಿಸಿ ೭೩/೪ರ ತನಕ ಒಟ್ಟು ೩೭೩ ಎಕರೆ ಜಮೀನುಗಳನ್ನು ಕೈಗಾರಿಕಾ ಪ್ರದೇಶವೆಂದು ಪ್ರಸ್ತುತ ಕಾಯ್ದೆಯ ಅನ್ವಯ ಘೋಷಣೆ ಮಾಡಲಾಗಿದೆ.