i
ರಾಜಕೀಯದಲ್ಲಿ ದಿಢೀರ್ ಬದಲಾವಣೆ ಜೆಡಿಎಸ್ ಅಧ್ಯಕ್ಷರ ರಾಜೀನಾಮೆ…
ಚಂದ್ರವಳ್ಳಿ ನ್ಯೂಸ್, ಹುಣಸೂರು:
ಹುಣಸೂರು ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಹಳ್ಳಿ ಸೋಮಶೇಖರ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಕಚೇರಿ ಆವರಣದಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಪಕ್ಷದ ಅಧ್ಯಕ್ಷನಾಗಿ ನೇಮಕಗೊಂಡು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕರ್ತವ್ಯ ನಿರ್ವಹಿಸಿದ್ದೇನೆ. 2018ರ ಉಪ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಪಕ್ಷದಿಂದ ಟಿಕೆಟ್ ನೀಡಿದ್ದ ಕಾರಣ ಸ್ಪರ್ಧಿಸಿ ಉತ್ತಮ ಮತಗಳನ್ನು ಪಡೆದಿದ್ದೇನೆ. ಪಕ್ಷ ಮೂರು ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದ ಸಂದರ್ಭದಲ್ಲಿ ತಾಲೂಕಿನಲ್ಲಿ ಪಕ್ಷದ ಸಂಘಟನೆ ಮಾಡಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂಬರುವ 2023ರ ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆ ಹುಸಿಗೊಳಿಸಿದ್ದಾರೆ. ಕಡೆ ತನಕ ದುಡುಕಬೇಡ, ನಿಧಾನಿಸು ಎಂದು ಹೇಳುತ್ತಲೇ ನನಗೆ ಮೋಸ ಮಾಡಿದ್ದಾರೆ. ಕೋಟ್ಯಾಂತರ ರೂ. ಖರ್ಚು ಮಾಡಿ ಪಕ್ಷ ಸಂಘಟಿಸಿದ್ದ ನನಗೆ ಪಕ್ಷವು ನ್ಯಾಯ ನೀಡಲಿಲ್ಲ. ಹಾಗಾಗಿ ನಾನು ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆಂದರು.
ನಗರಸಭಾ ಸದಸ್ಯ ಶರವಣ ಮಾತನಾಡಿ, ಜೆಡಿಎಸ್ ಕುಮಾರಸ್ವಾಮಿ ನೇತೃತ್ವದಲ್ಲಿ 2023 ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಈ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡೋಣ. ನೀವು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.
ಮುಖಂಡ ಸತೀಶ್ ಪಾಪಣ್ಣ ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷ ನಿಮಗೆ ಒಳ್ಳೆಯ ಸ್ಥಾನವನ್ನೇ ಕಲ್ಪಿಸಲಿದೆ. ಎಲ್ಲರೂ ಒಗ್ಗಟ್ಟಾಗಿ ದುಡಿಯೋಣವೆಂದರು. ಆದರೂ ತಮ್ಮ ನಿರ್ಧಾರ ಬದಲಿಸದ ಸೋಮಶೇಖರ್ ಪಕ್ಷದ ಕಚೇರಿಯಲ್ಲಿ ರಾಜೀನಾಮೆ ಪತ್ರ ನೀಡಿ ಹೊರನಡೆದರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ಶ್ರೀನಾಥ್, ಸಿರಾಜ್, ರಾಧಾ, ರಾಣಿ ಪೆರುಮಾಳ್, ಮುಖಂಡರಾದ ಚಿಕ್ಕಹುಣಸೂರು ಗೋವಿಂದೇಗೌಡ, ವಾಸು, ಮಹಿಳಾ ಘಟಕದ ಅಧ್ಯಕ್ಷೆ ಯಶೋಧಮ್ಮ, ನಗರಾಧ್ಯಕ್ಷೆ ಚಂದ್ರಮ್ಮ ಇದ್ದರು.