i
ಗಂಡಸು-ಹೆಂಗಸು ತನಕ್ಕೆ ಸವಾಲ್ ಹಾಕಿದ ನಗರಸಭೆ ಸದಸ್ಯರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಗಾಂಧಿ ವೃತ್ತದಲ್ಲಿನ ನಗರಸಭೆ ಮಾಲೀಕತ್ವದ ಜಾಗದಲ್ಲಿ ನೂತನವಾಗಿ ಕಟ್ಟಡ ನಿರ್ಮಾಣ ಮಾಡುವ ಕಟ್ಟಡದ ಮಾಹಿತಿ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ವಿಚಾರ ಸೇರಿದಂತೆ ಸಭಾ ನಡವಳಿಯಲ್ಲಿ ನಿಯಮ ಉಲ್ಲಂಘನೆಯಾಗದಂತೆ ಕಾನೂನು ರೀತ್ಯ ಕ್ರಮ ಕೈಗೊಳ್ಳುವ ವಿಷಯಗಳ ಕುರಿತ ಮಾಹಿತಿ ನೀಡದೇ ಚರ್ಚೆ ಮಾಡುವ ಸಂದರ್ಭದಲ್ಲಿ ಮತ್ತು 2023-24ನೇ ಸಾಲಿನ ಆಯವ್ಯಯ ಮಂಡನೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧಿ ಸದಸ್ಯರುಗಳ ಮಧ್ಯ ಗಂಡಸು ತನ-ಹೆಂಗಸು ತನ ಎನ್ನುವ ಶಬ್ದಗಳ ಬಳಕೆ ನಿರಂತರವಾಗಿ ಎಗ್ಗಿಲ್ಲದೆ ನಡೆಯಿತು.
ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಮೌನಕ್ಕೆ ಶರಣಾಗಬೇಕಾಯಿತು. ಕೆಲ ಸದಸ್ಯರು ಸದನದ ಬಾವಿಗೆ ಇಳಿದು ತೋಳೆರಿಸಿ ಮಾತನಾಡುತ್ತಿದ್ದರು. ಮತ್ತೆ ಕೆಲ ಸದಸ್ಯರು ಗಲಾಟೆ ಸುಮ್ಮನಾಗಿಸಲು ಪ್ರಯತ್ನ ಮಾಡುತ್ತಿದ್ದರು. ಎರಡು ಕಡೆಯ ಸದಸ್ಯರುಗಳು ನಿರಂತರವಾಗಿ ವಾಗ್ದಾಳಿ ಮಾಡುತ್ತಿದ್ದರು. ಹಿರಿಯ ಸದಸ್ಯರಾದ ಸರ್ದಾರ್, ಗೊಪ್ಪೆ ಮಂಜುನಾಥ್ ಮತ್ತಿತರರು ಸದನಕ್ಕೆ ಗೌರವ ಕೊಡುವ ಕಾರ್ಯ ಮಾಡುವಂತೆ ಒತ್ತಾಯಿಸುತ್ತಿದ್ದರು. ಮತ್ತೊಬ್ಬ ಸದಸ್ಯ ಶ್ರೀನಿವಾಸ್ ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದರು. ಇದರ ಮಧ್ಯ ಸದಸ್ಯ ವೆಂಕಟೇಶ್ ಗಂಡಸುತನ ಹೆಂಗಸುತನ ಎನ್ನುವ ಪದ ಬಳಕೆ ಮಾಡಬಾರದು, ನೀವುಗಳೆಲ್ಲ ಹಿರಿಯ ಸದಸ್ಯರಿದ್ದೀರಿ, ಶಾಂತವಾಗಿ ವರ್ತಿಸಿ ಎಂದು ಮನವಿ ಮಾಡಿಕೊಂಡ ಪ್ರಸಂಗ ಜರುಗಿತು. ಆದರೂ ಕೆಲ ಸದಸ್ಯರು ಕ್ಯಾರೇ ಎನ್ನದೆ ಗಲಾಟೆ ಮಾಡುತ್ತಲೇ ಇದ್ದರು.
27ನೇ ವಾರ್ಡ್ ಸದಸ್ಯೆ ಸುಮಿತಾ ಈರುಳ್ಳಿ ರಘು ಮಾತನಾಡಿ, ಕಳೆದ 2 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಕನಿಷ್ಠ ಒಂದೇ ಒಂದು ಕಾಮಗಾರಿಯನ್ನು ನನ್ನ ವಾರ್ಡ್ ನಲ್ಲಿ ಮಾಡಿಲ್ಲ, ಏಕೆ ನನ್ನ ವಾರ್ಡ್ ಸದಸ್ಯರು ಕಂದಾಯ ಕಟ್ಟುತ್ತಿಲ್ಲವೇ, ತೆರಿಗೆ ಕಟ್ಟುತ್ತಿಲ್ಲ, ಏಕೆ ತಾರತಮ್ಯ ಮಾಡುತ್ತಿದ್ದೀರಿ, ಕೂಡಲೇ ಸಾಮಾನ್ಯ ನಿಧಿಯಲ್ಲಿ ನನ್ನ ವಾರ್ಡ್ ನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಮಗಾರಿ ಕೈಗೊಳ್ಳುವ ಕಡತ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದು ಬಂದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಇಂಜಿನಿಯರ್ ಕಿರಣ್ ಕುಮಾರ್ ಸಭೆಗೆ ಮಾಹಿತಿ ನೀಡುತ್ತಿದ್ದಂತೆ, ಜಿಲ್ಲಾಧಿಕಾರಿಗಳಿಂದ ಕಡತ ಬರಲು 2 ತಿಂಗಳು ಬೇಕಾ ಎಂದು ಸದಸ್ಯೆ ಸುಮಿತಾ ಈರುಳ್ಳಿ ರಘು ಆಕ್ರೋಶ ವ್ಯಕ್ತ ಪಡಿಸಿದರು.
ನನ್ನದು ಎಸ್ಸಿ ಕಾಲೋನಿ, ಸ್ಲಂ ಬೇರೆ ಇದೆ, ಒಂದು ಕೊಳವೆ ಬಾವಿ ಕೊರೆಸಿಕೊಡಿ ಎಂದು 4 ಸಭೆಗಳಲ್ಲಿ ಬೇಡಿಕೊಂಡಿದ್ದೇನೆ, ಏಕೆ ನಮ್ಮ ಮಾತು ನಿಮಗೆ ಕೇಳುವುದಿಲ್ಲವೇ ಎಂದು 26ನೇ ವಾರ್ಡ್ ಸದಸ್ಯ ಸೈಪುದ್ದೀನ್ ಆಕ್ರೋಶ ವ್ಯಕ್ತ ಪಡಿಸಿದರು.
ಪೌರಾಯುಕ್ತ ಎನ್.ಸತೀಶ್ ರೆಡ್ಡಿ, ನಗರಸಭೆ ಅಧ್ಯಕ್ಷತೆ ತಿಪ್ಪಮ್ಮ, ಉಪಾಧ್ಯಕ್ಷೆ ಶ್ರೀದೇವಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ವ್ಯವಸ್ಥಾಪಕಿ ಬಿ.ಆರ್.ಮಂಜುಳ ಸೇರಿದಂತೆ ಇತರೆ ಸದಸ್ಯರು ಪಾಲ್ಗೊಂಡಿದ್ದರು.