i
ರಾಜ್ಯಮಟ್ಟದ ಚುನಾವಣಾ ರಸಪ್ರಶ್ನೆ ವಿಜೇತರಿಗೆ ಅಭಿನಂದನೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಕರ್ನಾಟಕವತಿಯಿಂದ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರ ಚುನಾವಣಾ ಭಾಗವಹಿಸುವಿಕೆ (SVEEP) ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ ಪ್ರಥಮ ಸ್ಥಾನ, ಉತ್ತರ ಕನ್ನಡ ಜಿಲ್ಲೆ ದ್ವೀತಿಯ ಹಾಗೂ ವಿಜಯನಗರ ಜಿಲ್ಲೆ ತೃತೀಯ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸಮಾದಾನಕರ ಬಹುಮಾನ ಪಡೆದಿವೆ.
ರಾಜ್ಯದ 25,000 ಮತದಾರರ ಸಾಕ್ಷರತಾ ಸಂಘಗಳ (ELCs) ಮೂಲಕ ಶಾಲಾ/ಕಾಲೇಜುಗಳಲ್ಲಿ ನಡೆಸಿದ ಪ್ರಾಥಮಿಕ ಹಂತದಲ್ಲಿ ಕನ್ನಡ ಪ್ರಬಂಧ, ಇಂಗ್ಲೀಷ್ ಪ್ರಬಂಧ, ಡ್ರಾಯಿಂಗ್ ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ರಾಜ್ಯಾದ್ಯಾಂತ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಲಾ ಮತ್ತು ಕಾಲೇಜು ಹಂತಗಳಲ್ಲಿ ನಾಲ್ಕೂ ಸ್ಪರ್ಧೆಗಳಲ್ಲಿ ಆಯ್ಕೆಯಾದ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದ ವಿಜೇತ ತಲಾ ಇಬ್ಬರು ವಿದ್ಯಾರ್ಥಿಗಳನ್ನು ತಾಲ್ಲೂಕು ಮಟ್ಟಕ್ಕೆ ಆಯ್ಕೆ ಮಾಡಲಾಗಿತ್ತು. ನಂತರ, ಅಲ್ಲಿ ಗೆದ್ದವರನ್ನು ಜಿಲ್ಲಾ ಮಟ್ಟಕ್ಕೆ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ವಿಜೇತರಾದವರನ್ನು ವಲಯಗಳನ್ನಾಗಿ ವಿಂಘಡಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗಿತ್ತು.
ಪ್ರೌಢಶಾಲಾ ಮಟ್ಟದ ರಸಪ್ರಶ್ನೆ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ವಲಯಗಳಾಗಿ ವಿಂಗಡಿಸಿ ದೂರದರ್ಶನ ಚಂದನ ವಾಹಿನಿಯಲ್ಲಿ ಅತ್ಯಂತ ಖ್ಯಾತಿ ಪಡೆದಿರುವ ‘ಥಟ್ ಅಂತಾ ಹೇಳಿ’ ಕಾರ್ಯಕ್ರಮದಲ್ಲಿ ಅಂತಿಮ ಸುತ್ತಿನ ರಸಪ್ರಶ್ನೆ ನಡೆಸಿ ವಿಜೇತರನ್ನು ಘೋಷಿಸಲಾಯಿತು.
ಪ್ರಸ್ತುತ ಕಾರ್ಯಕ್ರಮ ಜನವರಿ 25 ರಂದು ನಡೆಯಲಿರುವ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಜನವರಿ 19, 20, 23, 24 ಮತ್ತು 25 ರಂದು ಒಟ್ಟು 5 ದಿನಗಳ ಕಾಲ ರಾತ್ರಿ 9:30 ರಿಂದ 10 ಗಂಟೆಯವರೆಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಭಾರತ ಚುನಾವಣಾ ಆಯೋಗದ ವತಿಯಿಂದ ಮತದಾರರ ಜಾಗೃತಿ ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಭವಿಷ್ಯದ ಮತದಾರರು ಮತ್ತು ಯುವ ಮತದಾರರಾದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿಗಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಶಾಲಾ/ಕಾಲೇಜು/ ವಿಶ್ವವಿದ್ಯಾಲಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಪೋತ್ಸಾಹ ನೀಡುತ್ತಿರುವ ಶಿಕ್ಷಕ ವೃಂದಕ್ಕೆ ಮುಖ್ಯ ಚುನಾವಣಾಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ಹಾಗೂ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.