i
BJP 130 ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ-ಸಿಎಂ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಭಾರತೀಯ ಜನತಾ ಪಕ್ಷ ಸಂಪೂರ್ಣ ಬಹುಮತ ಅಂದರೆ 130 ಸ್ಥಾನಗಳನ್ನು ಗಳಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ತುಮಕೂರಿನ ಸಿದ್ದಗಂಗಾ ಮಠದ ಬಳಿ, ಮಾಧ್ಯದವರೊಂದಿಗೆ ಮಾತನಾಡಿದರು.
ಈಗಾಗಲೇ ಅಮಿತ್ ಶಾ ಅವರು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಎಂದು ಹೇಳಿದ್ದಾರೆ. ಅದರರ್ಥ ಕೇವಲ ಮುಖ್ಯಮಂತ್ರಿಯಲ್ಲ, ನಮ್ಮ ಸಂಪೂರ್ಣ ತಂಡ ಪಕ್ಷ, ಹಾಗೂ ಸರ್ಕಾರದ ಎಲ್ಲಾ ಪ್ರಮುಖರು ಸೇರಿ ಶ್ರಮಿಸುತ್ತೇವೆ. ಚುನಾವಣೆ ಎನ್ನುವುದು ಎಲ್ಲರೂ ಸೇರಿ ಮಾಡಬೇಕು ಎನ್ನುವ ಸತ್ಯದ ಅರಿವಿನಿಂದ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲಾಗುವುದು–ವಿಜಯ ಸಂಕಲ್ಪ ಯಾತ್ರೆ ಇಡೀ ರಾಜ್ಯದಲ್ಲಿ ಆಗುತ್ತಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದ ಇಂಡಿ ತಾಲ್ಲೂಕಿನಲ್ಲಿ ನಡೆಯುವ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೂಡ ಮತ್ತೊಂದೆಡೆ ಭಾಗವಹಿಸುತ್ತಿದ್ದಾರೆ. ಪಕ್ಷದ ಪ್ರಮುಖರೆಲ್ಲರೂ ವಿವಿದೆಡೆ ಭಾಗವಹಿಸುತ್ತಿದ್ದಾರೆ. ಮನೆ ಮನೆಗೆ ಅಭಿಯಾನ ಕೈಗೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಹಾಗೂ ಸಾಧನೆಗಳ ಬಗ್ಗೆ ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಬೆಂಕಿಲ್ಲದೆ ಹೊಗೆಯಾಡುವುದಿಲ್ಲ– ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಉರುಳಿಸಲು ಕಾಂಗ್ರೆಸ್ ಮುಖಂಡರಿಗೆ 500 ಕೋಟಿ ನೀಡಲಾಗಿದೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರು ಆಪಾದನೆ ಮಾಡಿರುವ ಬಗ್ಗೆ ಮಾತನಾಡಿ, ಕಾಂಗ್ರೆಸ್ ನವರೆ ಇದಕ್ಕೆ ಉತ್ತರ ಕೊಡಬೇಕು. ಕಾಂಗ್ರೆಸ್ ನವರ ಆಪಾದನೆಗೆ ಕಾಂಗ್ರೆಸ್ ನವರೇ ಸ್ಪಷ್ಟೀಕರಣ ನೀಡಬೇಕು. ಈ ಬಗ್ಗೆ ಖುಷಿಯಾಗುವ ಪ್ರಶ್ನೆಯಿಲ್ಲ. ನಾವು ಗೆಲ್ಲುವುದು ನಮ್ಮ ಶಕ್ತಿಯ ಆಧಾರದ ಮೇಲೆ, ಇನ್ನೊಬ್ಬರ ದುರ್ಬಲತೆಯ ಮೇಲೆ ಅಲ್ಲ. ಕಾಂಗ್ರೆಸ್ ಅಧ್ಯಕ್ಷರೇ ಇದನ್ನು ಹೇಳುವಾಗ ಕಾಂಗ್ರೆಸ್ ನವರು ಇದನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ ಅನಿಸುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸ್ಪಷ್ಟೀಕರಣ ನೀಡಬೇಕು. ಬೆಂಕಿಲ್ಲದೆ ಹೊಗೆಯಾಡುವುದಿಲ್ಲ ಎಂದರು.
ಸುದ್ದಿಗಾರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಸಚಿವ ಮಾಧುಸ್ವಾಮಿ ಯವರು ವೈಯಕ್ತಿಕ ಕಾರಣಗಲಿಂದ ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದರು.