i
ಪದವಿ ಜೊತೆಗೆ ಕಂಪ್ಯೂಟರ್ ಕಲಿತರೆ ಉದ್ಯೋಗ ಗ್ಯಾರಂಟಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪದವಿ ಜೊತೆಗೆ ಕಂಪ್ಯೂಟರ್ ನಂತಹ ಕೌಶಲ್ಯ ಶಿಕ್ಷಣ ಕಲಿತಾಗ ಉದ್ಯೋಗ ಗ್ಯಾರಂಟಿ ದೊರೆಯುವುದರ ಜೊತೆಯಲ್ಲಿ ಬದುಕಿಗೆ ಉಪಯೋಗವಾಗಲಿದೆ ಎಂದು ಎಸ್.ಜೆ.ಎಂ. ಮಹಿಳಾ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಬಸವರಾಜಪ್ಪ ವಿದ್ಯಾರ್ಥಿಗಳಿಗೆ ತಿಳಿಸಿದರು.
ನೆಹರು ಯುವ ಕೇಂದ್ರ, ಪ್ರಿಯದರ್ಶಿನಿ ಮಹಿಳಾ ಮಂಡಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಬಸವೇಶ್ವರ ಟಾಕೀಸ್ ಸಮೀಪವಿರುವ ಸಿಲಿಕಾನ್ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಬೇಸಿಕ್ ಕಂಪ್ಯೂಟರ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಕ್ಷೇತ್ರವು ಕಂಪ್ಯೂಟರೀಕರಣವಾಗಿರುವುದರಿಂದ ಶಿಕ್ಷಣದ ಜೊತೆ ಕಂಪ್ಯೂಟರ್ ಅಗತ್ಯವಾಗಿ ಕಲಿಯಬೇಕಿದೆ. ದೇಶ ತಾಂತ್ರಿಕತೆಯಲ್ಲಿ ಮುಂದುವರೆಯುತ್ತಿದೆ. ಶಿಕ್ಷಣಕ್ಕೆ ತಕ್ಕಂತೆ ಕೆಲಸಗಳು ಸಿಗುವುದು ಕಷ್ಟ. ಸೆಮಿಸ್ಟರ್ ಪದ್ದತಿಯಿಂದ ಗುಣಾತ್ಮಕ ಶಿಕ್ಷಣ ಕಡಿಮೆಯಾಗುತ್ತಿದೆ. ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಸಮಯದ ಅಭಾವವಿದೆ. ಮಕ್ಕಳ ಭವಿಷ್ಯಕ್ಕಿಂತ ಮುಖ್ಯವಾಗಿ ಬೇಗನೆ ಪರೀಕ್ಷೆಯನ್ನು ಮುಗಿಸಬೇಕೆಂಬ ಆತುರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿದ್ದಾರೆ. ಹಾಗಾಗಿ ಸ್ಪರ್ಧಾತ್ಮಕ ವಿಷಯಗಳಲ್ಲಿ ಮಕ್ಕಳು ತೇರ್ಗಡೆಯಾಗುವುದು ಕಷ್ಟವಾಗಿದೆ ಎಂದು ಹೇಳಿದರು.
ವಿಷಯದ ಆಳ ಮಕ್ಕಳಲ್ಲಿ ಇಲ್ಲ. ಶಿಕ್ಷಣದ ನಂತರ ಉದ್ಯೋಗಕ್ಕೆ ತೊಡಗಿಸಿಕೊಳ್ಳಬೇಕಾದರೆ ಕಂಪ್ಯೂಟರ್ ಜ್ಞಾನ ಇರಲೇಬೇಕು. ಕಾಟಾಚಾರಕ್ಕೆ ಯಾವುದನ್ನೂ ಕಲಿಯಬೇಡಿ. ಶ್ರದ್ದೆಯಿಟ್ಟು ತರಬೇತಿಯಲ್ಲಿ ಪಾಲ್ಗೊಳ್ಳಿ ಎಂದರು.
ಕಂಪ್ಯೂಟರ್ ತರಬೇತುದಾರ ಜಾವಿದ್ ಮಾತನಾಡಿ ಪದವಿಯ ಜೊತೆ ಕೌಶಲ್ಯ ಬೇಕೆ ಬೇಕು. ಯಾವುದೇ ವಿಚಾರದಲ್ಲಾಗಲಿ ನಕಾರಾತ್ಮಕ ಆಲೋಚನೆಗಳನ್ನು ತಲೆಯಲ್ಲಿಟ್ಟುಕೊಳ್ಳಬಾರದು. ಜಾತಿ ಬೇಧ, ಕಲರ್ನಿಂದ ಜೀವನದಲ್ಲಿ ಮುಂದೆ ಬರಬೇಕಾಗಿಲ್ಲ. ಪ್ರತಿಭೆ, ಜ್ಞಾನ, ಕೌಶಲ್ಯದಿಂದ ಮಾತ್ರ ಬದುಕು ಕಟ್ಟಿಕೊಳ್ಳಬಹುದು. ಒಂದೆ ವಿಷಯಕ್ಕೆ ಸೀಮಿತವಾಗಿರಬಾರದು. ಕಲಿಕೆ ನಿರಂತರವಾಗಿರಬೇಕು. ಕಷ್ಟಪಟ್ಟು ಪರಿಶ್ರಮದಿಂದ ಕೆಲಸ ಮಾಡಿದಾಗ ಮಾತ್ರ ಹಣ ಮತ್ತು ಒಳ್ಳೆಯ ಹೆಸರು ಸಂಪಾದಿಸಬಹುದು. ಅನುಭವ ಮುಖ್ಯ. ಮೊದಲು ಆತ್ಮವಿಶ್ವಾಸ ಬೆಳೆಸಿಕೊಳ್ಳಿ ಎಂದು ಕಂಪ್ಯೂಟರ್ ತರಬೇತುದಾರರಿಗೆ ತಿಳಿಸಿದರು.
ಸಿಲಿಕಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ಮುಖ್ಯಸ್ಥ ಡಿ.ಗೋಪಾಲಸ್ವಾಮಿ ನಾಯಕ, ವ್ಯವಸ್ಥಾಪಕ ಸೋಮಶೇಖರ್ ವೇದಿಕೆಯಲ್ಲಿದ್ದರು.