i
ತಿಪ್ಪಾರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಇಲ್ಲ ಪಕ್ಷ ಉಚ್ಛಾಟನೆ ಮಾಡಲಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಾಸಕ ತಿಪ್ಪಾರೆಡ್ಡಿ ವಿರುದ್ಧ ಗುತ್ತಿಗೆದಾರರು ಲಂಚದ ಆಪಾದನೆ ಮಾಡಿದ್ದಾರೆ. ಗುತ್ತಿಗೆದಾರರ ಪರ ನಿಲ್ಲಲು ಕಾಂಗ್ರೆಸ್ ಪಕ್ಷದ ವತಿಯಿಂದ ಜ.23 ರಂದು ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಗುತ್ತಿಗೆದಾರ ಮಂಜುನಾಥ್ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು, ಇದು ಸಾಧ್ಯವಾಗದಿದ್ದಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರಿಂದ ಸಮಗ್ರ ತನಿಖೆಗೆ ಒಳ ಪಡಿಸಬೇಕು ಎಂದು ಷಣ್ಮುಖಪ್ಪ ಆಗ್ರಹ ಮಾಡಿದರು.
ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಒಬ್ಬರ ವಿರುದ್ಧವೇ ಗುತ್ತಿಗೆದಾರರು ಆಪಾದನೆ ಮಾಡಿಲ್ಲ, 14 ಶಾಸಕರು, 4 ಮಂದಿ ಸಚಿವರ ವಿರುದ್ಧ ಗುತ್ತಿಗೆದಾರರು ಆಪಾದನೆ ಮಾಡಿದ್ದಾರೆ. ಈ ಎಲ್ಲ ಆಪಾದನೆಗಳ ಕುರಿತು ಲೋಕಾಯುಕ್ತಕ್ಕೆ ಸಂತ್ರಸ್ತರು ದೂರು ನೀಡಬೇಕು, ಕಾಂಗ್ರೆಸ್ ಪಕ್ಷ ಗುತ್ತಿಗೆದಾರರ ಬೆನ್ನಿಗೆ ನಿಂತು ಹೋರಾಟ ಮಾಡಲಿದೆ ಎಂದು ತಿಳಿಸಿದರು.
ಶಾಸಕರಿಗೆ ಹಣ ಕೊಟ್ಟಿರುವವರು ಯಾವುದೇ ರೀತಿಯ ಭಯಕ್ಕೆ ಒಳಗಾಗಬಾರದು, ಕಾಂಗ್ರೆಸ್ ಪಕ್ಷ ನಿಮ್ಮ ಬೆನ್ನಿಗೆ ಇದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಗಾಂಧಿ ವೃತ್ತದಿಂದ ತಿಪ್ಪಾರೆಡ್ಡಿ ಭ್ರಷ್ಟಾಚಾರ ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು 2 ಗಂಟೆ ತನಕ ಉಗ್ರ ಪ್ರತಿಭಟನೆ ನಡೆಸಲಿದೆ, ಗುತ್ತಿಗೆದಾರರು, ಆಶ್ರಯ ಮನೆಗಾಗಿ ಹಣ ನೀಡಿರುವ ಸತ್ಯ ಹೊರಬರಬೇಕು ಎಂದು ಷಣ್ಮುಖಪ್ಪ ಆಗ್ರಹ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಪೀರ್ ಮಾತನಾಡಿ, ಜಿ.ಎಚ್.ತಿಪ್ಪಾರೆಡ್ಡಿ ಅವರ ಮೇಲೆ ಭ್ರಷ್ಟಾಚಾರ ಆರೋಪ ಬಂದಿದ್ದು ಕೂಡಲೇ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇದು ಸಾಧ್ಯವಾಗದಿದ್ದಲ್ಲಿ ಬಿಜೆಪಿ ಪಕ್ಷವು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಮೂಲಕ ಮೋದಿ ಹೇಳಿದಂತೆ ನಾವು ಭ್ರಷ್ಟಾಚಾರದ ವಿರುದ್ಧ ಇದ್ದೇವೆಂದು ತಾಬೀತು ಮಾಡಲಿ ಎಂದು ಸವಾಲ್ 90 ಲಕ್ಷ ರೂ.ಲಂಚ ನೀಡಿದ್ದೇನೆಂದು ಗುತ್ತಿಗೆದಾರ ಮಂಜುನಾಥ್ ಆರೋಪಿಸಿದ್ದಾರೆ. ಈ ಆರೋಪ ಸುಳ್ಳು ಎಂದು ಶಾಸಕರು ಸಾಬೀತು ಮಾಡಬೇಕು, ಇಲ್ಲವಾದರೆ ಸ್ವತಃ ಶಾಸಕ ತಿಪ್ಪಾರೆಡ್ಡಿ ಮತ್ತು ಅವರಿಗೆ ಮತ ನೀಡಿದ ಮತದಾದರರಿಗೆ ಇದೊಂದು ಕಪ್ಪು ಚುಕ್ಕೆ ಎಂದು ತಾಜ್ ಪೀರ್ ಹೇಳಿದರು.
ಗುತ್ತಿಗೆದಾರರು ಮಾಡಿರುವ ಆರೋಪದ ಜೊತೆಯಲ್ಲಿ ಆಶ್ರಯ ಮನೆ ಹಂಚಿಕೆ ಮಾಡಲು 2 ಲಕ್ಷ ರೂ.ತನಕ ಶಾಸಕರಿಗೆ ನೀಡಿದ್ದೇವೆಂದು ಸಂತ್ರಸ್ತರು ಹೇಳಿದ್ದಾರೆ. ಹಾಗಾಗಿ ಇದೆಲ್ಲ ಸುಳ್ಳುವ ಎಂದು ಶಾಸಕರು ಸಾಬೀತು ಮಾಡುವ ತನಕ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹ ಮಾಡಿದರು.
ಭ್ರಷ್ಟಾಚಾರದ ಆಪಾದನೆಗೆ ಒಳಗಾದವರು ಶಾಸಕ ತಿಪ್ಪಾರೆಡ್ಡಿ ಸೇರಿದಂತೆ ಯಾರೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೂ ಜಿಲ್ಲಾ ಕಾಂಗ್ರೆಸ್ ತನ್ನ ಇತಿಮಿತಿಯಲ್ಲಿ ಖಂಡಿಸುವುದರ ಜೊತೆಯಲ್ಲಿ ಪಕ್ಷ ಸೇರ್ಪಡೆಗೆ ವಿರೋಧ ಮಾಡಲಿದೆ, ಇದರಲ್ಲಿ ರಾಜೀ ಇಲ್ಲ ಎಂದು ತಾಜ್ ಪೀರ್ ಹೇಳಿದರು.
ವಿಧಾನ ಪರಿಷತ್ ಮಾಜಿ ಶಾಸಕ ರಘುಆಚಾರ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ, ಹಾಲಸ್ವಾಮಿ, ಸಂಪತ್ ಕುಮಾರ್, ಮೈಲಾರಪ್ಪ, ಎಚ್.ಅಂಜಿನಪ್ಪ, ವೆಂಕಟೇಶ್, ಮಮತ, ತಿಪ್ಪೇಸ್ವಾಮಿ, ಶೇಷಣ್ಣ, ಮಂಜಣ್ಣ, ಷಫೀವುಲ್ಲಾ, ರಾಜಣ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.