i
ಪ್ರಾಣ ಕೊಟ್ಟೇವು ಹರಿಯಬ್ಬೆ-ಹಿರಿಯೂರು ವಿದ್ಯುತ್ ಲೈನ್ ಎಳೆಯಲು ಬಿಡುವುದಿಲ್ಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಾಣ ಕೊಟ್ಟೇವು ಹರಿಯಬ್ಬೆ-ಹಿರಿಯೂರು ವಿದ್ಯುತ್ ಲೈನ್ ಎಳೆಯಲು ಬಿಡುವುದಿಲ್ಲ, ಜಿಲ್ಲಾಡಳಿತ, ಕೆಪಿಟಿಸಿಎಲ್ ಪೊಲೀಸ್ ರಕ್ಷಣೆಯೊಂದಿಗೆ ರೈತರನ್ನು ಹೆದರಿಸಿ ಬೆದರಿಸಿ ವಿದ್ಯುತ್ ಲೈನ್ ಎಳೆಯಲು ಮುಂದಾದರೆ ರೈತರ ಹೆಣಗಳ ಮೇಲೆ ಲೈನ್ ಎಳೆಯಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹಿರಿಯೂರು ತಾಲೂಕಿನ ಹರಿಯಬ್ಬೆ ಮುಂಗಸವಳ್ಳಿ ಗೂಳ್ಯ ಶಿಡ್ಲಯ್ಯನಕೋಟೆ ಸೇರಿದಂತೆ ಮತ್ತಿತರರ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ಜಿಲ್ಲಾಡಳಿತಕ್ಕೆ ಧಿಕ್ಕಾರ ಕೂಗಿದರು. ಪೊಲೀಸರ ರಕ್ಷಣೆಯೊಂದಿಗೆ ದೊಡ್ಡ ಲೈನ್ ಎಳೆಯಲು ಆಗಮಿಸಿ ರೈತರನ್ನು ಬೆದರಿಸುವ ತಂತ್ರ ಮಾಡುತ್ತಿದ್ದಾರೆ. ಇದಕ್ಕೆಲ್ಲ ರೈತರು ಸೊಪ್ಪು ಹಾಕುವುದಿಲ್ಲ, ಮಾರುಕಟ್ಟೆ ದರದಂತೆ ರೈತರು ಸೂಕ್ತ ಪರಿಹಾರ ನೀಡಲಿ, ನಂತರ ಅವರು ಲೈನ್ ಎಳೆದುಕೊಂಡು ಹೋಗಲಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
28 ಕಿಲೋ ಮೀಟರ್ ದೂರದ ಹರಿಯಬ್ಬೆ-ಹಿರಿಯೂರು ವಿದ್ಯುತ್ ಲೈನ್ ಮಾರ್ಗದಲ್ಲಿ ಬರುವ ಎಲ್ಲ ರೈತರಿಗೂ ಮೈಸೂರು ಜಿಲ್ಲಾಧಿಕಾರಿಗಳು ಅಲ್ಲಿನ ರೈತರಿಗೆ ಮಾಡಿರುವ ಆದೇಶದಂತೆ ಹಿರಿಯೂರು ತಾಲೂಕಿನ ರೈತರಿಗೂ ಪರಿಹಾರ ನೀಡಬೇಕು. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಹಲವು ಸಭೆಗಳನ್ನು ಮಾಡಲಾಗಿದೆ. ಆದರೂ ಕೆಪಿಟಿಸಿಎಲ್ ಮತ್ತು ಜಿಲ್ಲಾಡಳಿತ ಪರಿಹಾರ ನೀಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನೊಂದ ರೈತರು ಆಕ್ರೋಶ ವ್ಯಕ್ತ ಪಡಿಸಿದರು.
ಹರಿಯಬ್ಬೆಯ ಕಾಂತರಾಜ್ ಎನ್ನುವ ರೈತರ ಜಮೀನಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಗಂಧ, ಮಹಾಗನಿ, ರಕ್ತಚಂದನ, ಮಾವು, ತೆಂಗು ಸೇರಿದಂತೆ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳ ಮೇಲೆ ಪವರ್ ಗ್ರಿಡ್ ನವರು ದೊಡ್ಡ ಲೈನ್ ಎಳೆದಿದ್ದಾರೆ. ರೈತರಿಗೆ ಇಂದಿಗೂ ಪರಿಹಾರ ನೀಡಿಲ್ಲ, ಈಗಾಗಲೇ ತೋಟಕ್ಕೆ ವಿದ್ಯುತ್ ತಂತಿ ಸ್ಪರ್ಶವಾಗಿ ಹಲವು ಸಲ ಬೆಂಕಿ ಬಿದ್ದು ನಷ್ಟ ಅನುಭವಿಸಿದ್ದರೂ ಜಿಲ್ಲಾಧಿಕಾರಿಗಳಾಗಲಿ, ಪವರ್ ಗ್ರಿಡ್ ಸಂಸ್ಥೆಯವರಾಗಲಿ ರೈತರಿಗೆ ಸೂಕ್ತ ಪರಿಹಾರ ನೀಡದೆ ರೈತರ ಜೀವಕ್ಕೆ ಆಪತ್ತು ತಂದಿದೆ. ಆದ್ದರಿಂದ ಮೊದಲು ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು, ನಂತರ ಲೈನ್ ಎಳೆಯಲು ಬಿಡುತ್ತೇವೆಂದು ರೈತರು ಪಟ್ಟು ಹಿಡಿದು ಕುಳಿತು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ವಿದ್ಯುತ್ ದೊಡ್ಡ ಲೈನ್ ಹೋಗುವ ಮಾರ್ಗದ ರೈತರು ಈಗಾಗಲೇ ಕ್ಷೇತ್ರದ ಶಾಸಕಿ ಪೂರ್ಣಿಮಾ, ಜಿಲ್ಲಾಧಿಕಾರಿ, ಪೊಲೀಸ್ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ಮಾಡಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ, ಬದಲಿಗೆ ಪೊಲೀಸ್ ತಂಡದೊಂದಿಗೆ ಆಗಮಿಸಿ ರೈತರನ್ನು ಹೆದರಿಸಿ ಬೆದರಿಸುವ ಕಾರ್ಯ ಮಾಡುತ್ತಿದ್ದಾರೆ. ರೈತರಿಗೆ ಸೂಕ್ತ ಪರಿಹಾರ ನೀಡದೇ ಹೋದರೆ ರೈತರ ಜಮೀನುಗಳಿಗೆ ಯಾವುದೇ ಕಾರಣಕ್ಕೂ ವಿದ್ಯುತ್ ಲೈನ್ ಎಳೆಯಲು ಬಿಟ್ಟುಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
ಕೆಪಿಟಿಸಿಎಲ್ ಅಧಿಕಾರಿಗಳು ಯಾವುದೇ ರೈತರಿಗೆ ಇಂದಿಗೂ ನೋಟಿಸ್ ಜಾರಿ ಮಾಡಿಲ್ಲ, ಒಂದಾಣಿ ಪರಿಹಾರ ನೀಡಿಲ್ಲ, ತಹಶೀಲ್ದಾರ್ ಮೂಲಕ ನೋಟಿಸ್ ಜಾರಿ ಮಾಡಿಸುವ ಹುನ್ನಾರ ಮಾಡಿ ಪೊಲೀಸರೊಂದಿಗೆ ಆಗಮಿಸಿ ಲೈನ್ ಎಳೆಯಲು ಪದೇ ಪದೇ ಮುಂದಾಗುತ್ತಿದ್ದಾರೆ ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ, ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತ ರೈತ ವಿರೋಧಿ ನಿಲುವು ಹೊಂದಿದ್ದು ಇಂತಹ ಅಧಿಕಾರಿಗಳಿಂದ ಯಾವುದೇ ರೀತಿಯ ಸಹಾಯ ರೈತರಿಗೆ ಆಗುವುದಿಲ್ಲ ಎಂದು ವಾಗ್ದಾಳಿ ಮಾಡಿದರು.
ರೈತರಿಗೆ ಮಾರುಕಟ್ಟೆ ಬೆಲೆಯಲ್ಲಿ ಪರಿಹಾರ ನೀಡಲು 3 ಕೋಟಿ 25 ಲಕ್ಷ ರೂ.ಗಳನ್ನು ಶಾಸಕರು ಸರ್ಕಾರದಿಂದ ವಿಶೇಷ ಅನುದಾನವಾಗಿ ಬಿಡುಗಡೆ ಮಾಡಿಸಿದ್ದರೂ ಜಿಲ್ಲಾಡಳಿತ ಮಾತ್ರ ಆ ಹಣವನ್ನು ನೀಡಿಲ್ಲ ಎಂದು ದೂರಿದರು.
ಹರಿಯಬ್ಬೆಯಿಂದ ಪಿಡಿಕೋಟೆ ಮಾರ್ಗವಾಗಿ ಎಳೆದಿರುವ ಲೈನಿಗೆ ರೈತರಿಗೆ ನೀಡಿರುವ ಚೆಕ್ ಗಳು ಹಣವಿಲ್ಲದೆ ಬೌನ್ಸ್ ಆಗಿವೆ. ರೈತರು ಇಲಾಖೆಗೆ ಅಲೆಯಬೇಕಾಗಿದೆ ಎಂದು ರೈತರು ದೂರಿದರು.
ಮಾರುಕಟ್ಟೆ ಬೆಲೆಗೆ ಸಮನಾಗಿ ಭೂ ಪರಿಹಾರ, ಮೈಸೂರು ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿ ಎಕರೆಗೆ 25 ಲಕ್ಷ ರೂ.ಗಳ ಪರಿಹಾರ, ಕಾರಿಡಾರ್ ಪರಿಹಾರ, ತೋಟಗಾರಿಕೆ ಬೆಳೆಗಳ ಪರಿಹಾರ ನೀಡಿ ಯಾವುದೇ ಸಂದರ್ಭದಲ್ಲಿ ಲೈನ್ ಎಳೆಯಲು ರೈತರು ಅಡ್ಡಿ ಮಾಡುವುದಿಲ್ಲ, ಪರಿಹಾರ ನೀಡದೇ ಲೈನ್ ಎಳೆಯಲು ಮುಂದಾದರೆ ರೈತರ ಹೆಣಗಳ ಮೇಲೆ ವಿದ್ಯುತ್ ಲೈನ್ ಎಳೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರ ಮುಖಂಡರಾದ ಬಿ.ಎಸ್.ರಘುನಾಥ್, ಕೆ.ಟಿ.ತಿಪ್ಪೇಸ್ವಾಮಿ, ಹರಿಯಬ್ಬೆ ರೈತರಾದ ಶಶಿ, ಪೂಜಾರ್ ಶಿವಣ್ಣ, ಹಂಪಜ್ಜರ ಶಿವಣ್ಣ, ಕರಿಯಮ್ಮ, ಗಾಯಿತ್ರಿ, ಹನುಮಂತರಾಯ, ಗೂಳ್ಯ ತಿಪ್ಪೇಸ್ವಾಮಿ, ಚಿಕ್ಕಣ್ಣ, ಎಂ.ಮಹಾಲಿಂಗಪ್ಪ, ಶಿವಮೂರ್ತಿ, ರಾಜಣ್ಣ, ತಿಮ್ಮಣ್ಣ, ಬಂಗಾರಪ್ಪ, ಆರ್.ಚಂದ್ರಪ್ಪ, ಗುಣ್ಣಯ್ಯ, ಚಂದ್ರಗಿರಿ ಗೋವಿಂದಪ್ಪ, ಗಂಗಮ್ಮ, ಅಮ್ಮಣ್ಣಿ, ನರಸಿಂಹಮೂರ್ತಿ, ಬಂಡಿ ಉದ್ದಪ್ಪರ ಚಂದ್ರಪ್ಪ, ಗೂಳ್ಯ ಪುಟ್ಟಣ್ಣ, ಜಯಣ್ಣ ಸೇರಿದಂತೆ ಇತರೆ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.