i
ಆಂಜನೇಯ, ಜಿಎಸ್ಎಂ, ಸವಿತಾ ಇವರಲ್ಲಿ ಯಾರಿಗೆ ಟಿಕೆಟ್?…
ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವ ಎಚ್.ಆಂಜನೇಯ ಅವರು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಫೆ.9 ರಂದು ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಹಲವು ಸ್ವಾರಸ್ಯಕರ ಘಟನೆಗಳು ನಡೆದವು.
ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವೇದಿಕೆ ಮೇಲಿದ್ದ ಗಣ್ಯರು, ಟಿಕೆಟ್ ಆಕಾಂಕ್ಷಿಗಳಿಂದಲೇ ದೀಪ ಬೆಳಗಿಸುವ ಕಾರ್ಯ ಮಾಡಿದರು. ಆರಂಭದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮತ್ತು ಡಿಕೆಶಿ ದೀಪ ಬೆಳಗಿದರು. ಇದಾದ ಮೇಲೆ ಒಬ್ಬೊಬ್ಬರಂತೆ ಎಲ್ಲರೂ ದೀಪ ಬೆಳಗಲು ಮುಂದಾದರು.
ಮಾಜಿ ಜಿಪಂ ಸದಸ್ಯೆ ಸವಿತಾ ರಘು ದೀಪ ಬೆಳಗಲು ಮುಂದಾದರು. ಆ ಸಂದರ್ಭದಲ್ಲಿ ಆಂಜನೇಯ ಅವರು ಒಂದಿಷ್ಟು ಹಿಂದೆ ಸರಿದು ಅಂತರ ಕಾಯ್ದುಕೊಳ್ಳಲು ಯತ್ನಿಸಿದರು. ಇದನ್ನ ಗಮನಿಸಿದ ಡಿಕೆ ಶಿವಕುಮಾರ್ ಅವರು ಆಂಜನೇಯ ಅವರ ಕೈಹಿಡಿದ ಹತ್ತಿರಕ್ಕೆ ಕರೆದುಕೊಂಡು ಬಲವಂತವಾಗಿ ಸವಿತಾ ರಘು ದೀಪ ಬೆಳಗಲು ಸಹಕರಿಸುವಂತೆ ಮಾಡಿದರು.
ವೇದಿಕೆ ಸಮಾರಂಭದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡುತ್ತಾ ಹೀಗೆ ಒಂದು ಬಾಂಬ್ ಸಿಡಿಸಿದರು. ಅದು ಏನಂದರೆ, ಅರ್ಜಿ ಹಾಕಿರುವ ಎಲ್ಲರಿಗೂ ಶುಭಾಷಯಗಳನ್ನು ಕೋರುತ್ತೇನೆ. ಕಾಂಗ್ರೆಸ್ ಹೊಸ ಹೊಸ ನಾಯಕರನ್ನು ಹುಟ್ಟು ಹಾಕುವ ಕಾರ್ಖಾನೆ ಇದ್ದಂತೆ, ಪಕ್ಷ ಸಂಘಟನೆಗೆ ಪ್ರತಿಯೊಬ್ಬರೂ ದುಡಿಯಬೇಕು ಎಂದು ತಿಳಿಸಿದರು.
ಆದರೆ ಹೊಸ ನಾಯಕರನ್ನ ಹುಟ್ಟು ಹಾಕುವ ಕಾರ್ಖಾನೆ ಕಾಂಗ್ರೆಸ್ ಎಂದು ಹೇಳಿರುವುದು ಹಲವು ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆಂಜನೇಯ ಅವರು ತಾವೊಬ್ಬ ಬಲಿಷ್ಠ ಟಿಕೆಟ್ ಆಕಾಂಕ್ಷಿ. ಜೊತೆಯಲ್ಲಿ ರಾಜ್ಯ ನಾಯಕರು. ಆಂಜನೇಯ ಅವರೇಕೆ ಈ ರೀತಿ ಹೇಳಿದರು ಎನ್ನುವುದನ್ನು ನಿಗೂಢವಾಗಿದೆ. ಈಗಾಗಲೇ ಹೊಳಲ್ಕೆರೆ ಮೀಸಲು ಕ್ಷೇತ್ರಕ್ಕೆ ಹಿಂದೆಂದಿಗಿಂತಲೂ ನಾಲ್ಕು ಪಟ್ಟು ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ಪ್ರಮುಖವಾಗಿ ಮಾಜಿ ಸಚಿವ ಎಚ್.ಆಂಜನೇಯ, ಅವರ ಪುತ್ರಿ ಆರುಂಧತಿ ಆಂಜನೇಯ, ಮಾಜಿ ಜಿಪಂ ಸದಸ್ಯೆ ಸವಿತಾ ರಘು, ಅವರ ಪತಿ ರಘು, ಡಿಕೆಶಿ ಅವರ ಕಟ್ಟಾ ಶಿಷ್ಯ, ಕಾಂಗ್ರೆಸ್ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿಎಸ್ ಮಂಜುನಾಥ್, ಜೆಜೆ ಹಟ್ಟಿ ತಿಪ್ಪೇಸ್ವಾಮಿ, ಲಿಡ್ಕರ್ ನಿಗಮದ ಮಾಜಿ ಅಧ್ಯಕ್ಷ ಒ.ಶಂಕರ್, ಚಿಕ್ಕ ಕಂದವಾಡಿ ತಿಪ್ಪೇಸ್ವಾಮಿ ಮತ್ತು ಇವರ ಪುತ್ರ ಅನಿಲ್, ಲಂಬಾಣಿ ಸಮಾಜದ ಮುಖಂಡರು ಹಾಗೂ ಸಹೋದರರಾದ ವೆಂಕಟೇಶ ನಾಯ್ಕ್, ಲೋಕೇಶ್ ನಾಯ್ಕ್, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ. ಶ್ರೀರಂಗಯ್ಯ, ಡಾ.ಜೆ.ಆರ್.ಸುಜಾತ ಹೀಗೆ 14 ಮಂದಿ ಟಿಕೆಟ್ ಬಯಸಿ ಅರ್ಜಿ ಹಾಕಿದ್ದು ಅತ್ಯಂತ ಸೋಜಿಗ ಮೂಡಿಸಿದೆ.
ರಾಜ್ಯ ನಾಯಕರು, ಮಾದಿಗ ಸಮಾಜದ ಹಿರಿಯರು, ಸಿದ್ದರಾಮಯ್ಯನವರ ಬಲಗೈ ಭಂಟ ಆಂಜನೇಯ ಅವರಿಗೆ ಟಿಕೆಟ್ ಸಿಗುವುದು ಕಷ್ಟನಾ ಅಥವಾ ಅವರೇ ಬೇರೆ ಕಡೆ ಕ್ಷೇತ್ರ ನೋಡಿಕೊಂಡು ಸ್ಪರ್ಧಿಸುತ್ತರಾ, ಆ ಪರಿಸ್ಥಿತಿಯಿಂದಾಗಿಯೇ ಪುತ್ರಿ ಆರುಂಧತಿ ಆಂಜನೇಯ ಅವರಿಂದಲೂ ಅರ್ಜಿ ಹಾಕಿಸಿದ್ದರಾ, ಆಂಜನೇಯ ಅವರೇಕೆ ಮಾಯಕೊಂಡ ಕ್ಷೇತ್ರದಲ್ಲಿ ಟಿಕೆಟ್ ಬಯಸಿ ಅರ್ಜಿ ಹಾಕಿದ್ದಾರೆ, ಆಂಜನೇಯ ಅವರಿಗೆ ಹೊಳಲ್ಕೆರೆ ಕ್ಷೇತ್ರದಲ್ಲಿ ಟಿಕೆಟ್ ಸಿಗುವುದು ಕಷ್ಟಸಾಧ್ಯನಾ, ಅಥವಾ ಬೇರೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಆಂಜನೇಯ ಅವರಿಗೆ ಸೂಚನೆ ನೀಡಿದೆಯಾ ಎಂಬಿತ್ಯಾದಿ ಕಾರ್ಯಕರ್ತ ಪ್ರಶ್ನೆಗಳಿಗೆ ಸ್ವತಃ ಆಂಜನೇಯ ಅವರಿಂದಲೂ ಉತ್ತರ ಇರಲಿಕ್ಕಿಲ್ಲ.
ಒಂದು ವೇಳೆ ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸ್ಥಾನವನ್ನು ಮಹಿಳೆಯರಿಗೆ ಕಾಂಗ್ರೆಸ್ ನೀಡುವ ಮುನ್ಸೂಚನೆ ಸಿಕ್ಕು ಪುತ್ರಿ ಆರುಂಧತಿ ಅವರಿಂದ ಅರ್ಜಿ ಹಾಕಿಸಿದ್ರಾ ಎನ್ನುವ ಅನುಮಾನ ಕೂಡ ಕಾರ್ಯಕರ್ತರಲ್ಲಿ ಕಾಡತೊಡಗಿದೆ.
ಅಥವಾ ಕಾಂಗ್ರೆಸ್ ಹೊಸ ಹೊಸ ನಾಯಕರನ್ನು ಹುಟ್ಟು ಹಾಕುವ ಕಾರ್ಖಾನೆ ಇದ್ದಂತೆ ಎಂದು ಆಂಜನೇಯ ಅವರೇ ಹೇಳಿದಂತೆ ಹೊಸಬರ ಟಿಕೆಟ್ ಲಾಭಿ ಜೋರಾಗಿದೆಯಾ, ಮಹಿಳಾ ಕೋಟಾ ಬಂದಲ್ಲಿ ಜಿಪಂ ಮಾಜಿ ಸದಸ್ಯೆ ಸವಿತಾ ರಘು ಅವರಿಗೆ ಟಿಕೆಟ್ ನೀಡುವುದು ಗ್ಯಾರಂಟಿನಾ, ಅಥವಾ ಆಂಜನೇಯ ಗರಡಿಯಲ್ಲೇ ಬೆಳೆದಿರುವ ಜಿಎಸ್ಎಂ, ಶಂಕರ್ ಸೇರಿದಂತೆ ಮತ್ತಿತರರು ಟಿಕೆಟ್ ಗಾಗಿ ತೀವ್ರ ಪೈಪೋಟಿ ನೀಡಿದ್ದಾರಾ ಎನ್ನುವ ಮಾತುಗಳು ಪ್ರಜಾಧ್ವನಿ ಯಾತ್ರೆ ನಂತರ ಪ್ರತಿಧ್ವನಿಸುತ್ತಿವೆ.
ಅದೇ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಭಾಷಣದಲ್ಲಿ ಹೀಗೆ ಹೇಳುವ ಮೂಲಕ ಟಿಕೆಟ್ ಆಕಾಂಕ್ಷಿಗಳಲ್ಲಿ ನಡುಕ ಇಟ್ಟಿದ್ದಾರೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಬಹಳಷ್ಟು ಮಂದಿ ಟಿಕೆಟ್ ಅರ್ಜಿ ಹಾಕಿಕೊಂಡಿದ್ದೀರಿ, ಮುಂದೆ ನಾವು ಯಾರಿಗೆ ಟಿಕೆಟ್ ಎಂದು ಹೇಳುತ್ತೇವೆ. ಟಿಕೆಟ್ ಸಿಗದವರು ತ್ಯಾಗ ಮಾಡಬೇಕು, ಪಕ್ಷಕ್ಕಾಗಿ ದುಡಿಯಬೇಕು, ಅಭ್ಯರ್ಥಿ ಗೆಲ್ಲಿಸಿಕೊಳ್ಳಬೇಕು ಮನವಿ ಮಾಡಿಕೊಂಡಿದ್ದನ್ನು ನೋಡಿದರೆ ಇಂಥವರಿಗೆ ಟಿಕೆಟ್ ಸಿಗುತ್ತದೆ ಎಂದು ಹೇಳುವುದು ಕಷ್ಟವಾಗಿದೆ. ಆಂಜನೇಯ ಮತ್ತು ಸವಿತಾ ರಘು ಪೈಪೋಟಿ ಮಧ್ಯ ಡಿಕೆಶಿ ಶಿಷ್ಯ ಜಿ.ಎಸ್.ಮಂಜುನಾಥ್ ಟಿಕೆಟ್ ಗಿಟ್ಟಿಸುತ್ತರಾ ಅಥವಾ ರಾಹುಲ್ ಗಾಂಧಿ ಬಳಿ ಸ್ನೇಹದಿಂದಿರುವ ಜೆಜೆಹಟ್ಟಿ ತಿಪ್ಪೇಸ್ವಾಮಿ ಟಿಕೆಟ್ ಗಿಟ್ಟಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಆದರೆ ಬಲ್ಲ ಮೂಲಗಳ ಪ್ರಕಾರ ಹೊಲ್ಕೆಕೆರೆ ಕ್ಷೇತ್ರದಲ್ಲಿ ಅರ್ಜಿ ಹಾಕಿರುವವರ ಪೈಕಿ ಮಾಜಿ ಸಚಿವ ಹೆಚ್.ಆಂಜನೇಯ, ಜಿ.ಎಸ್.ಮಂಜುನಾಥ್ ಮತ್ತು ಸವಿತಾ ರಘು ಅವರ ಹೆಸರುಗಳು ಶಿಫಾರಸುಗೊಂಡು ಹೋಗಿವೆ ಎನ್ನಲಾಗುತ್ತಿದೆ. ಒಟ್ಟಾರೆ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಇವರುಗಳಲ್ಲಿ ಯಾರ ಪ್ರಭಾವ ನಡೆಯುತ್ತೋ ಅವರ ಬಣದವರಿಗೆ ಟಿಕೆಟ್ ಸಿಗುವುದು ಗ್ಯಾರಂಟಿ ಎನ್ನುವ ಮಾತು ಕೇಳಿ ಬರುತ್ತಿದ್ದು ಕಾದುನೋಡಬೇಕಿದೆ.