i
ಟೈಂ ಟೇಬಲ್ ಹಾಕಿ ಬಾಲಕಿಯರನ್ನು ಸ್ವಾಮೀಜಿ ಕೊಠಡಿಗೆ ಕಳುಹಿಸಿಲ್ಲ-ವಾರ್ಡನ್ ರಶ್ಮಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ದಾಖಲಾದ 2ನೇ ಫೋಕ್ಸೋ ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಎ ತ್ತು ಬಿ ಎರಡು ವಿಭಾಗ ಮಾಡಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಎ ಮತ್ತು ಬಿ ಎರಡು ಭಾಗವಾಗಿ ಚಾರ್ಜ್ ಶೀಟ್ ಸಲ್ಲಿಸಿರುವ ತನಿಖಾಧಿಕಾರಿಗಳು ಮಠದ ಹಾಸ್ಟೆಲ್ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ದೃಢಪಟ್ಟಿದ್ದು, ಪೊಲೀಸರು 761 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಮಾತ್ರವಲ್ಲದೆ, 12 ಮತ್ತು 14 ವರ್ಷದ ಸಂತ್ರಸ್ತ ಬಾಲಕಿಯರ ಹೇಳಿಕೆಯನ್ನು ಸಿಆರ್ಪಿಸಿ 161 ಅಡಿ ದಾಖಲಿಸಿಕೊಳ್ಳಲಾಗಿದೆ. ಟಿವಿ ನೋಡುತ್ತ ರೂಮಿನಲ್ಲಿ ಕುಳಿತಾಗ ಮುರುಘಾಶ್ರೀ ರೇಪ್ ಮಾಡಿದರು ಎಂದು 12 ವರ್ಷದ ಬಾಲಕಿ ಹೇಳಿಕೆ ನೀಡಿದ್ದು, ಸ್ವಾಮೀಜಿ ನೀಡಿದ ಚಾಕ್ಲೇಟ್ ತಿಂದ ಬಳಿಕ ನಿದ್ದೆ ಬಂದು ಮಲಗಿದ್ದೆ, ಎಚ್ಚರವಾದಾಗ ಸುಸ್ತು, ಕಾಲು ತೊಡೆ ಭಾಗ ನೋವಿತ್ತು ಎಂದು 14 ವರ್ಷದ ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಮಠದ ಹಾಸ್ಟೆಲ್ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ದೃಢಪಟ್ಟಿದ್ದು, ಮಕ್ಕಳು ಮತ್ತು ಕುಟುಂಬಸ್ಥರ ಅನುಕಂಪ, ಗೌರವ ಗಳಿಸಿ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಹಾಸ್ಟೆಲ್ ವಾರ್ಡನ್ ರಶ್ಮಿ ಮೂಲಕ ಮಕ್ಕಳನ್ನು ಕೊಠಡಿಗೆ ಕರೆಸಿಕೊಂಡು ಮತ್ತು ಭರಿಸುವ ಚಾಕ್ಲೆಟ್ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಸದ್ಯ ಪೊಲೀಸರು ವಿವಿಧ ಕಲಂ ಅಡಿ ಹಾಗೂ ಧಾರ್ಮಿಕ ಕೇಂದ್ರ ದುರ್ಬಳಕೆ ಸೇರಿದಂತೆ ಸಂತ್ರಸ್ತರು ನೀಡಿದ ಹೇಳಿಕೆ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಕಲಂ 173 (8) ಸಿಆರ್ಪಿಸಿ ಅಡಿಯಲ್ಲಿ ತನಿಖೆ ಮುಂದುವರೆದಿದೆ ಎಂದು ಮಾಹಿತಿ ಲಭ್ಯವಾಗಿದೆ.
ದೂರಿನಲ್ಲಿ ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದ್ದು, ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ದೃಢಪಟ್ಟಿಲ್ಲ. ಮುರುಘಾಶ್ರೀ ವಿರುದ್ಧ ಪಿತೂರಿ ಕೇಸ್ ಕೌಂಟರ್ ಬ್ಲಾಸ್ಟ್ ಕೇಸ್ ಎಂದು ಕಂಡು ಬರುತ್ತದೆ. ಬಾಕಿ ತನಿಖೆ ಪೂರ್ಣಗೊಳಿಸಿ ಅಂತಿಮ ಚಾರ್ಜ್ ಶೀಟ್ ಸಲ್ಲಿಕೆ ಮಡಲು ಪೊಲೀಸರು ಸಜ್ಜಾಗುತ್ತಿದ್ದಾರೆ.
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ಪ್ರಕರಣ ಅಕ್ಟೋಬರ್ 13ರಂದು ದಾಖಲಾಗಿತ್ತು. ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ, ಎ3 ಮಠದ ಉತ್ತರಾಧಿಕಾರಿ (ಬಸವಾದಿತ್ಯ 17), ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರ, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಆಗಿತ್ತು. ಬಳಿಕ ಮಠದ ಅಡುಗೆ ಸಹಾಯಕಿ, ಮಠದ ಹಾಸ್ಟೆಲ್ ನಲ್ಲಿದ್ದ ತನ್ನ ಇಬ್ಬರು ಮಕ್ಕಳು, ಮತ್ತಿಬ್ಬರು ಮಕ್ಕಳು ಸೇರಿ ನಾಲ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಿಸಿದ್ದರು.
12 ವರ್ಷದ ಬಾಲಕಿ ಹೇಳಿಕೆ-
ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ಪ್ರಕರಣ ಸಂಬಂಧ 12 ವರ್ಷದ ಬಾಲಕಿಯ ಹೇಳಿಕೆಯನ್ನು ಸಿಆರ್ಪಿಸಿ 161 ಅಡಿ ದಾಖಲಿಸಿಕೊಳ್ಳಲಾಗಿದೆ. “ಒಬ್ಬರು ತಪ್ಪು ಮಾಡಿದರೆ ವಾರ್ಡನ್ ರಶ್ಮಿ ಎಲ್ಲರಿಗೂ ಹೊಡೆಯುತ್ತಿದ್ದರು. ಇಬ್ಬರಿಗೆ ಮುರುಘಾಶ್ರೀ ಬಳಿ ಹೋಗಲು ರಶ್ಮಿ ಸೂಚಿಸುತ್ತಿದ್ದರು. ನಾವು ಎಲ್ಲರೂ ಮುರುಘಾಶ್ರೀಗೆ ಅಪ್ಪಾಜಿ ಎನ್ನುತ್ತಿದ್ದೆವು. ಸಂಜೆ ವೇಳೆ ಕೆಲ ಅನಾಥ ಪುಟ್ಟ ಮಕ್ಕಳೊಂದಿಗೆ ಮುರುಘಾಶ್ರೀ ರೂಮಿಗೆ ಹೋಗಿದ್ದೆ. ಟಿವಿ ನೋಡುತ್ತ ರೂಮಿನಲ್ಲಿ ಕುಳಿತಾಗ ಮುರುಘಾಶ್ರೀ ರೇಪ್ ಮಾಡಿದರು. ಪುಟ್ಟ ಪಾಪು ರೂಮಿನಲ್ಲೇ ಆಟ ಆಡುತ್ತಿತ್ತು. ಒಂದು ದಿನ ಬಿಟ್ಟು ನಡೆದ ವಿಚಾರ ಅಮ್ಮನಿಗೆ ಹೇಳಿದೆನು. ನಾನು ಒಂದು ಸಲ ಮಾತ್ರ ಮುರುಘಾಶ್ರೀ ರೂಮಿಗೆ ಹೋಗಿದ್ದೇನೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಿನ್ನಲೆ ಹಾಸ್ಟೆಲ್ ಬಂದ್ ಮಾಡಲಾಯಿತು. ಬಳಿಕ ಪ್ರವಾಸಕ್ಕೆ ಹೋಗೋಣ ಎಂದು ಅಮ್ಮ ಕಾರ್ನಲ್ಲಿ ಮೈಸೂರಿಗೆ ಕರೆತಂದರು” ಎಂದು ಹೇಳಿಕೆ ದಾಖಲಿಸಲಾಗಿದೆ.
14ವರ್ಷದ ಸಂತ್ರಸ್ತ ಬಾಲಕಿ ಹೇಳಿಕೆ-
14ವರ್ಷದ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ಸಿಆರ್ಪಿಸಿ 161 ಅಡಿ ದಾಖಲಿಸಿಕೊಳ್ಳಲಾಗಿದೆ. “ವಾರ್ಡನ್ ರಶ್ಮಿ ಮುರುಘಾಶ್ರೀ ಬಳಿ ಹೋಗಲು ಟೈಂ ಟೇಬಲ್ ಹಾಕಿದ್ದರು. ಪ್ರತಿದಿನ ಹಾಸ್ಟೆಲ್ನ ಇಬ್ಬರು ಮಕ್ಕಳು ಮುರುಘಾಶ್ರೀ ಬಳಿ ಹೋಗಬೇಕಿತ್ತು. ದತ್ತು ಕೇಂದ್ರದ ಮಕ್ಕಳನ್ನೂ ಕರೆದುಕೊಂಡು ಹೋಗಬೇಕಿತ್ತು. ಲಾಕ್ ಡೌನ್ ವೇಳೆ ಮಕ್ಕಳೊಂದಿಗೆ ಕಾಲ ಕಳೆಯುವುದು ಮುರುಘಾಶ್ರೀಗೆ ರೂಢಿ ಆಗಿತ್ತು. ಮೊದಲ ಭಾನುವಾರ ಮುರುಘಾಶ್ರೀ ಬಳಿಗೆ ಹೋದಾಗ ಚಾಕ್ಲೇಟ್ ನೀಡಿದ್ದರು. ಮಧ್ಯಾಹ್ನದವರೆಗೆ ಮುರುಘಾಶ್ರೀ ರೂಮ್ನಲ್ಲಿದ್ದು ಬಂದಿದ್ದೆನು ಎಂದು ಹೇಳಿಕೆ ದಾಖಲಿಸಲಾಗಿದೆ.
ಪ್ರತಿ ಭಾನುವಾರ ನಾನು ಮುರುಘಾಶ್ರೀ ರೂಮ್ಗೆ ಹೋಗಬೇಕಿತ್ತು. ಸ್ವಾಮೀಜಿ ನೀಡಿದ ಚಾಕ್ಲೇಟ್ ತಿಂದ ಬಳಿಕ ನಿದ್ದೆ ಬಂದು ಮಲಗಿದ್ದೆನು. ಎಚ್ಚರವಾದಾಗ ಸುಸ್ತು, ಕಾಲು ತೊಡೆ ಭಾಗ ನೋವಿತ್ತು. ಮತ್ತೊಂದು ಭಾನುವಾರ ಹೋದಾಗ ಮತ್ತೆ ಚಾಕ್ಲೇಟ್ ನೀಡಿದರು. ಎಚ್ಚರವಾದಾಗ ಮುರುಘಾಶ್ರೀ ಏನೋ ಮಾಡಿದ್ದಾರೆ ಎಂದು ತಿಳಿಯಿತು. ಟೈಂ ಟೇಬಲ್ ಬದಲಾದ ಕಾರಣ ಸೋಮವಾರ ಹೋಗಬೇಕಾಯಿತು. ಕುರ್ಚಿ ಮೇಲೆ ಕುಳಿತಿದ್ದ ಮುರುಘಾಶ್ರೀ ಮೇಲೆ ಕುಡಿಸಿಕೊಂಡರು. ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಮಾಡಿದರು. ಮುರುಘಾಶ್ರೀ ರೂಮಿನಲ್ಲಿ 2 ಸಲ ಮಲಗಿದ್ದಾಗ ಬಳಸಿಕೊಂಡಿದ್ದಾರೆ ಅನ್ನಿಸುತ್ತಿದೆ. ಮುರುಘಾಶ್ರೀ ರೂಮ್ಗೆ ಹೋಗಿ ಬಂದಾಗಿಂದ ಸರಿಯಾಗಿ ಪಿರಿಯಡ್ಸ್ ಆಗುತ್ತಿಲ್ಲ. ವಾರ್ಡನ್ ರಶ್ಮಿ ಟೈಂ ಟೇಬಲ್ನಂತೆ ಹೋಗದಿದ್ದರೆ ಹೊಡೆಯುತ್ತಿದ್ದರು ಎಂದು ಹೇಳಿಕೆ ದಾಖಲಿಸಲಾಗಿದೆ.
ರಶ್ಮಿ ಹೇಳಿಕೆ-
ನಾನು ಈಗ 6 ವರ್ಷಗಳಿಂದ ಚಿತ್ರದುರ್ಗದ ಮುರುಘಮಠದ ಅಕ್ಕಮಹಾದೇವಿ ವಸತಿನಿಲಯದಲ್ಲಿ ವಾರ್ಡನ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ಡಾ. ಶಿವಮೂರ್ತಿ ಮುರುಘಾ ಶರಣರು ನನಗೆ ಗೊತ್ತು. ಅವರು ಮಠದ ಪೀಠಾಧ್ಯಕ್ಷರಾಗಿದ್ದಾರೆ. ಮುರುಘಾ ಶರಣರ ಮೇಲೆ ಕೇಸು ದಾಖಲಾಗಿರುವ ವಿಚಾರ ನನಗೆ ಗೊತ್ತು. ಇಬ್ಬರು ದೂರು ಕೊಟ್ಟಿದರು. ಮಠದಲ್ಲಿರುವ ಅಕ್ಕಮಹಾದೇವಿ ಹಾಸ್ಟೆಲ್ನಲ್ಲಿ ವಾರ್ಡನ್ಗೆ ಎಂದು ಒಂದು ರೂಂ ಇರುತ್ತದೆ. ನಾನು ಅದೇ ರೂಂನಲ್ಲಿ ವಾಸ ಮಾಡುವುದಿಲ್ಲ. ಸಂಜೆ ಮನೆಗೆ ಹೋಗುತ್ತೇನೆ. ಮನೆಯಲ್ಲಿ ನಾನು ಮತ್ತು ನನ್ನ ತಾಯಿ ವಾಸವಿರುತ್ತೇವೆ. ನಾನು ಡಾ. ಶಿವಮೂರ್ತಿ ಮುರುಘಾ ಶರಣರ ಖಾಸಗಿ ಕೊಠಡಿಗೆ ಹೋಗುತ್ತಿರಲಿಲ್ಲ. ನಾನು ಶಿವಮೂರ್ತಿ ಮರುಘಾ ಶರಣ ಕಳುಹಿಸಿಕೊಡುತ್ತಿರಲಿಲ್ಲ, ಮಕ್ಕಳನ್ನು ಅವರ ಬಳಿಗೆ ಕಳುಹಿಸಲು ನಾನು ಯಾವುದೇ ಟೈಂ ಟೇಬಲ್ ಮಾಡಿರಲಿಲ್ಲ. ಹಾಸ್ಟೆಲ್ನಲ್ಲಿದ್ದ ಮಕ್ಕಳನ್ನು ನಾನು ಹೊಡೆಯುತ್ತಿರಲಿಲ್ಲ, ಮಕ್ಕಳು ಯಾವುದಾದರೂ ತಪ್ಪು ಮಾಡಿದರೆ ಬುದ್ಧಿ ಮಾತು ಹೇಳಿ ಒಂದು ಎರಡು ಏಟು ಹೊಡೆಯುತ್ತಿದ್ದೆ. ಸಣ್ಣ ಕಟ್ಟಿಗೆಯ ಸ್ಕೇಲ್ನಿಂದ ಹೊಡೆಯುತ್ತಿದ್ದೆ. ನಾನು ಹೊಡೆಯುತ್ತಿದೆ ಎಂಬ ಬಗ್ಗೆ ಯಾವುದೇ ಮಕ್ಕಳು ಕಂಪ್ಲೇಂಟ್ ಮಾಡಿರಲಿಲ್ಲ ಎಂದು ರಶ್ಮಿ ಹೇಳಿಕೆ ನೀಡಿದ್ದಾರೆ.
ಡಾ. ಶಿವಮೂರ್ತಿ ಮುರುಘಾ ಶರಣರ ಖಾಸಗಿ ಕೊಠಡಿಗೆ ನಾನು ಯಾರನ್ನೂ ಕಳುಹಿಸಿಲ್ಲ. ಮುರುಘಾ ಮಠದಲ್ಲಿ ದಾಸೋಹದಲ್ಲಿ ಅಡುಗೆ ಸಹಾಯಕಿಯು ನನಗೆ ಗೊತ್ತು, ಅವರ ಇಬ್ಬರು ಮಕ್ಕಳು ಸಹ ನನಗೆ ಗೊತ್ತು. ಆ ಇಬ್ಬರೂ ಮಕ್ಕಳು ನಮ್ಮ ಹಾಸ್ಟೆಲ್ನಲ್ಲಿ ಇದ್ದರು. ನಾನು ಜಾಬ್ಗೆ ಸೇರುವ ಮೊದಲಿನಿಂದಲೂ ಸಹ ಅವರು ಹಾಸ್ಟೆಲ್ನಲ್ಲಿ ಇದ್ದರು. ಅವರು ಬಸವ ಮಕ್ಕಳು, ಅವರು 5 ಅಥವಾ 6ನೇ ರೂಂನಲ್ಲಿ ಇದಿರಬಹುದು, ಅವರ ಜತೆಯಲ್ಲಿ ಇತರೆ ಮಕ್ಕಳನ್ನು ಹಾಕಿರುತ್ತೇವೆ. ಆದರೆ, ಅವರು ಯಾರು ಎಂಬುದು ನನಗೆ ಸರಿಯಾಗಿ ನೆನಪು ಇಲ್ಲ. ಇನ್ನು ಈಗ ಸಂತ್ರಸ್ತೆಯಾಗಿರುವ ಬಾಲಕಿಯರಿಬ್ಬರಿಗೆ ನಾನು ಹೊಡೆಯುತ್ತಿರಲಿಲ್ಲ. ಅವರಿಗೆ ಅಷ್ಟೇ ಅಲ್ಲದೆ ನಾನು ಯಾವ ಮಕ್ಕಳಿಗೂ ಸಹ ಹೊಡೆಯುತ್ತಿರಲಿಲ್ಲ. ಇನ್ನು ಇಬ್ಬರು ಬಾಲಕಿಯರ ತಾಯಿಯೂ ಮಠದಲ್ಲೇ ಇರುತ್ತಿದ್ದರು. ಅವರಿಗೆ ಒಂದು ರೂಂ ಕೊಟ್ಟಿದ್ದರು. ಅವರ ಇಬ್ಬರು ಮಕ್ಕಳನ್ನು ಸ್ವಾಮೀಜಿಯವರ ಸೇವೆ ಮಾಡಲು ನಾನು ಕಳುಹಿಸಿಕೊಟ್ಟಿಲ್ಲ. ಅವರು ಸುಳ್ಳು ಹೇಳಿದ್ದಾರೆ. ಹಾಗೇ ಮತ್ತಿಬ್ಬರು ಬಾಲಕಿಯರನ್ನೂ ನಾನು ಸ್ವಾಮೀಜಿ ಕೊಠಡಿಗೆ ಕಳುಹಿಸಿಕೊಟ್ಟಿಲ್ಲ ಎಂದು ರಶ್ಮಿ ಹೇಳಿದ್ದಾರೆ.
ಪರಮಶಿವಯ್ಯ ರವರು ನನಗೆ ಗೊತ್ತು. ಮಠದಲ್ಲಿ ಸೆಕ್ರೆಟರಿ ಆಗಿರುತ್ತಾರೆ. ಸ್ವಾಮೀಜಿ ಲೈಂಗಿಕ ದೌರ್ಜನ್ಯ ಮಾಡಿದ ಬಾಲಕಿಯರನ್ನು ಪರಮಶಿವಯ್ಯ ಆಸ್ಪತ್ರೆಗೆ ಕಳುಹಿಸಿಕೊಡುತ್ತಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ಲಾಯರ್ ಗಂಗಾಧರಯ್ಯ ನನಗೆ ಗೊತ್ತು. ಅವರು ಲಾಯರ್ ಆಗಿ ಮಠದಲ್ಲಿ ಇರುತ್ತಾರೆ. ಗಂಗಾಧರಯ, ಸ್ವಾಮೀಜಿ ಲೈಂಗಿಕ ದೌರ್ಜನ್ಯ ಮಾಡಿದ ಬಾಲಕಿಯರಿಗೆ ಹೆದರಿಸುವುದು, ಬೆದರಿಸುವುದು ಮಾಡುತ್ತಿರುವ ಬಗ್ಗೆಯೂ ನನಗೆ ಗೊತ್ತಿಲ್ಲ. ಬಸವಾದಿತ್ಯ ನನಗೆ ಗೊತ್ತು, ಅವರು ಮಠದಲ್ಲಿ ಮರಿಸ್ವಾಮಿ ಆಗಿದ್ದಾರೆ. ಬಸವಾದಿತ್ಯ ಯಾವಾಗ ಮರಿಸ್ವಾಮಿ ಆದರು ಎಂಬುದೂ ನನಗೆ ಗೊತ್ತಿಲ್ಲ. ನಂತರ ಬಸವಾದಿತ್ಯರವರಿಗೆ ಮರಿಸ್ಮಾಮಿಯನ್ನಾಗಿ ಸ್ಮಾಮೀಜಿಯವರು ಮಾಡಿದ್ದಾರೆ ಅಂತಾ ಗೊತ್ತಾಯಿತು. ಬಸವಾದಿತ್ಯ ಮರಿಸ್ವಾಮಿಯಾಗುವ ಮುಂಚೆ ಎಲ್ಲಿದ್ದರೂ ಎಂದೂ ನನಗೆ ಗೊತ್ತಿಲ್ಲ. ಡಾ. ಮುರುಘಾ ಶರಣರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದಾಗ ಬಸವಾದಿತ್ಯ ಅವರಿಗೆ ಸಹಾಯ ಮಾಡುತ್ತಿದ್ದಾರಾ ಎಂಬುದೂ ನನಗೆ ಗೊತ್ತಿಲ್ಲ. ನನಗೆ ಅವರ ಪರಿಚಯವಿಲ್ಲ ಎಂದು ರಶ್ಮಿ ಹೇಳಿದ್ದಾರೆ.
ಮಹಾಲಿಂಗ ಎಂದರೆ ಗೊತ್ತು. ಅವರು ಸ್ವಾಮೀಜಿ ಜತೆ ಅಟೆಂಡರ್ ಕೆಲಸ ಮಾಡುತ್ತಿದ್ದರು. ಮುರುಘಾ ಶರಣರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಮಾಡುವಾಗ ಮಹಾಲಿಂಗ ಸಹಕರಿಸಿದರಾ ಎಂಬುದು ನನಗೆ ಗೊತ್ತಿಲ್ಲ. ಕರಿಬಸಪ್ಪ ಎಂದರೆ ಯಾರು ಎಂದು ಗೊತ್ತಿಲ್ಲ. ಇನ್ನು ಅವರು ಶ್ರೀಗಳಿಗೆ ಸಹಕರಿಸಿದ್ದರಾ ಎಂಬುದೂ ತಿಳಿದಿಲ್ಲ. ಸ್ವಾಮೀಜಿ ಚಾಕೋಕೆಟ್ ಮತ್ತು ಹಣ್ಣುಗಳನ್ನು ಹಾಲ್ನಲ್ಲಿ ಬಂದ ಭಕ್ತಾದಿಗಳಿಗೆ, ಮಕ್ಕಳಿಗೆ ಮತ್ತು ನಮ್ಮೆಲ್ಲರನ್ನೂ ಕರೆಸಿ ಕೊಡುತ್ತಿದ್ದರು. ಚಾಕೋಲೆಟ್ ಕೊಡುತ್ತಿದ್ದರು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಬರೀ ಡ್ರೈಫ್ರೂಟ್ಸ್ ಮತ್ತು ಹಣ್ಣುಗಳನ್ನು ಕೊಡುತ್ತಿದ್ದರು. ಸ್ವಾಮೀಜಿ ಕೊಡುತ್ತಿದ್ದ ಹಣ್ಣಿನಲ್ಲಿ ಅಮಲು ಭರಿಸುವ ಅಂಶ ಇರುತ್ತಿತ್ತಾ ಎಂಬುದು ನನಗೆ ಗೊತ್ತಿಲ್ಲ. ಭಕ್ತಾಧಿಗಳು ಬಂದಾಗ ನಮಗೆ ಅಲ್ಲಿಯೇ ಹಣ್ಣು, ಡ್ರೈಫ್ರೂಟ್ಸ್ ಕೊಡುತ್ತಿದ್ದರು. ನಾವು ಅವುಗಳನ್ನು ಅಲ್ಲಿಯೇ ತಿಂದು ಬರುತ್ತಿದ್ದೆವು. ಇದನ್ನು ಸ್ವಾಮೀಜಿ ದರ್ಬಾರ್ ಹಾಲ್ನಲ್ಲಿ ಕೊಡುತ್ತಿದ್ದರು.
ಸ್ವಾಮೀಜಿ ಹತ್ತಿರ ಕಳಿಸಲು ನಾನು ಟೈಂ ಟೇಬಲ್ ಮಾಡಿರಲಿಲ್ಲ. ಸ್ವಾಮೀಜಿ ಸೇವೆ ಮಾಡಲು ಕಳುಹಿಸಿಕೊಟ್ಟಿರುವುದಿಲ್ಲ. ಸ್ವಾಮೀಜಿ ರೂಂ ಒಳಗಡೆ ಬಾಲಕಿಯರು ಹೋದರೆ ಬಾಗಿಲ ಬಳಿ ಯಾರಾದರೂ ಕಾವಲು ಕಾಯುತ್ತಿದ್ದರಾ ಎಂಬುದೂ ಗೊತ್ತಿಲ್ಲ. ನನ್ನ ಹಾಲ್ನಲ್ಲಿರುವ ರೂಂನಿಂದ ಸ್ವಾಮೀಜಿ ಕೊಠಡಿಯನ್ನು ಮಕ್ಕಳಿಗೆ ತೋರಿಸಿಲ್ಲ. ನಾನು ಆ ರೂಂ ನೋಡಿಲ್ಲ. ನನ್ನನ್ನು ಕರೆದುಕೊಂಡು ಹೋದರೆ ಹಾಸ್ಟೆಲ್ನಲ್ಲಿ ನನಗೆ ಕೊಟ್ಟಿದ್ದ ವಾರ್ಡನ್ ರೂಂ ತೋರಿಸುತ್ತೇನೆ. ಅಲ್ಲಿ ಮಕ್ಕಳಿಗೆ ಹೊಡೆಯುವ ಸ್ಕೇಲ್ ಅನ್ನು ರೂಂನಲ್ಲಿಯೇ ಇಟ್ಟಿದ್ದು, ಅದನ್ನು ತೋರಿಸುತ್ತೇನೆ ಎಂದು ರಶ್ಮಿ ನೀಡಿರುವ ಹೇಳಿಕೆಯನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರ ಮಹಿಳೆ ಹೇಳಿಕೆ-
2ನೇ ಫೋಕ್ಸೋ ಪ್ರಕರಣ ಸಂಬಂಧ ಮಠದ ಅಡುಗೆ ಸಹಾಯಕಿ, ದೂರುದಾರ ಮಹಿಳೆ ಹೇಳಿಕೆ ದಾಖಲಿಸಲಾಗಿದೆ. ವಾರ್ಡನ್ ರಶ್ಮಿ ಹಾಸ್ಟೆಲ್ ಮಕ್ಕಳನ್ನು ಮುರುಘಾಶ್ರೀ ರೂಂಗೆ ಕಳಿಸುತ್ತಿದ್ದರು. ನನ್ನ ಇಬ್ಬರು ಹೆಣ್ಣು ಮಕ್ಕಳು ಸೇರಿ ಹಾಸ್ಟೆಲ್ನ ಇತರೆ ಮಕ್ಕಳ ಮೇಲೆ ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮನೆಗಳಲ್ಲಿ ಕಷ್ಟ ಇರುತ್ತದೆ, ಇಲ್ಲಿ ಇರಬೇಕೆಂದರೆ ಮುರುಘಾಶ್ರೀ ರೂಂಗೆ ಹೋಗಬೇಕಾಗುತ್ತದೆ ಹೀಗೆಂದು ಹಾಸ್ಟೆಲ್ ಮಕ್ಕಳು ನನಗೆ ಹೇಳುತ್ತಿದ್ದರು. ಯಾರ ಬಳಿಯೂ ಬಾಯಿ ಬಿಡದಂತೆ ರಶ್ಮಿ ಪ್ರಮಾಣ ಮಾಡಿಸುತ್ತಿದ್ದರಂತೆ. ರಶ್ಮಿ ಸೂಚನೆಯಂತೆ ಹೋಗದಿದ್ದರೆ ಶಿಕ್ಷೆ ವಿಧಿಸುತ್ತಿದ್ದರು. ಮಗಳು ರಾತ್ರಿ ಹೊತ್ತು ಊಟಕ್ಕೆ ಬರುತ್ತಿರಲಿಲ್ಲ, ಸುಸ್ತಾಗುತ್ತದೆ ಎಂದು ಆಗಾಗ ಹೇಳುತ್ತಿದ್ದಳು, ಆಸ್ಪತ್ರೆಗೆ ಹೋದರೆ ಏನೋ ಕೇಳುತ್ತಾರೆಂದು ಬಾಳೆಹಣ್ಣು ನೀಡುತ್ತಿದ್ದೆನು ಎಂದು ಹೇಳಿಕೆ ನೀಡಿದ್ದಾರೆ.