i
ಹಿರಿಯೂರು ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ ದಿಢೀರ್ ರಾಜೀನಾಮೆ, ಕಾಂಗ್ರೆಸ್ ಪಕ್ಷ ತಲೆದಂಡ ಪಡೆಯಿತಾ!?…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಈರಲಿಂಗೇಗೌಡ ತಮ್ಮ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಕಳೆದ ಜನವರಿ ತಿಂಗಳ 9 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿ ಜನವರಿ-13ರಂದು ರಾಜೀನಾಮೆ ಸಲ್ಲಿಸಿರುವುದಕ್ಕೆ ಸ್ಪೀಕೃತ ಪತ್ರ ಪಡೆದಿದ್ದು ಈಗ ಚಂದ್ರವಳ್ಳಿ ಪತ್ರಿಕೆಗೆ ಲಭ್ಯವಾಗಿದೆ.
ವಿಧಾನಸಭಾ ಚುನಾವಣೆಗೆ ಕೇವಲ 45 ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಅವರು ರಾಜೀನಾಮೆ ನೀಡಿರುವುದರಿಂದ ಅನೇಕಾನೇಕ ಊಹಾಪೋಹಗಳು ಹುಟ್ಟುಕೊಂಡಿವೆ.
ಹಾಗೇ ನೋಡಿದರೆ ಕಳೆದೆರಡು ತಿಂಗಳಿಂದೆ ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಮತ್ತು ಅವರ ಬೆಂಬಲಿಗರ ಮೇಲೆ ಹಲ್ಲೆ ಮಾಡಿ ಅಟ್ರಾಸಿಟಿ ಪ್ರಕರಣ ದಾಖಲಿಸಿಕೊಂಡಿದ್ದ ಈರಲಿಂಗೇಗೌಡ ಮತ್ತು ಅವರ ಸ್ನೇಹಿತರು ಕೆಲ ದಿನಗಳ ಕಾಲ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದರು. ಈ ಗಲಾಟೆಯಿಂದಾಗಿಯೇ ಈರಲಿಂಗೇಗೌಡ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಹರಡಿದ್ದು ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷರು ಅವರ ತಲೆದಂಡ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದರ ಮಧ್ಯ ಮೂಲತಃ ಈರಲಿಂಗೇಗೌಡ ಕಾಂಗ್ರೆಸ್ ಮುಖಂಡನಾಗಿದ್ದರೂ ಹಿರಿಯೂರು ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಚಿಹ್ನೆ ಅಡಿ ಗೆದ್ದು ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರಾಗಿದ್ದಾರೆ. ಆದರೂ ಅವರ ದೇಹ, ಮನಸ್ಸು ಎಲ್ಲವೂ ಕಾಂಗ್ರೆಸ್ ಮಯವಾಗಿತ್ತು. ಇದರ ಮಧ್ಯ ಅವರು ಕಾಂಗ್ರೆಸ್ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಮಾತುಗಳನ್ನ ಅಲ್ಲಗಳೆದಿರುವ ಈರಲಿಂಗೇಗೌಡರು ನನ್ನ ಹುದ್ದೆಗೂ ರಾಜೀನಾಮೆ ನೀಡಿಲ್ಲ, ನಾನು ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಚಂದ್ರವಳ್ಳಿ ಪತ್ರಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಒಂದು ವೇಳೆ ರಾಜೀನಾಮೆ ಪಡೆದಿದ್ದೇ ನಿಜವಾಗಿದ್ದರೆ ಹಿರಿಯೂರು ಕ್ಷೇತ್ರದಲ್ಲಿರುವ ಸುಮಾರು 40 ಸಾವಿರದಷ್ಟು ಕುಂಚಿಟಿಗ ಅಲಿಯಾಸ್ ಒಕ್ಕಲಿಗ ಸಮುದಾಯ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ. ಈ ವಿಚಾರ ಕುರಿತು ಮಾಜಿ ಸಚಿವ ಡಿ.ಸುಧಾಕರ್ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ ಅವರು ಪೋನ್ ರಿಸೀವ್ ಮಾಡಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ ಕ್ಷೇತ್ರದ ಮತದಾರರಲ್ಲಿ ಮತ್ತು ಕಾಂಗ್ರೆಸ್ ವಲಯದಲ್ಲೇ ಸಾಕಷ್ಟು ಗುಸುಗುಸು ಮಾತುಗಳು ಕೇಳಿ ಬರುತ್ತಿವೆ.