i
ಎಸ್ಎಸ್ಎಲ್ ಸಿ-ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲು ನಿರ್ಧಾರ…
ಚಂದ್ರರ್ವಳ್ಳಿ ನ್ಯೂಸ್, ಬೆಂಗಳೂರು:
ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲೂ ಕೃಪಾಂಕ ನೀಡಲಾಗುತ್ತದೆ. ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಕೃಪಾಂಕ ನೀಡಲಾಗಿತ್ತು. ಈ ವರ್ಷ ಕೂಡಾ ಕನಿಷ್ಠ ಅಂಕ ಗಳಿಸುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಕೃಪಾಂಕ ನೀಡಲು ನಿರ್ಧರಿಸಲಾಗಿದೆ.
ಕೋವಿಡ್ ಕಾರಣದಿಂದ ಕಲಿಕೆ ಮೇಲೆ ಉಂಟಾಗಿರುವ ಪರಿಣಾಮದಿಂದ ಮಕ್ಕಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೊರಬಂದಿಲ್ಲ. ಚೇತರಿಕೆ ಕಂಡಿರದ ಕಾರಣ ಕೃಪಾಂಕ ನೀಡಲಾಗುತ್ತಿದೆ. ಎಸ್ ಎಸ್ ಎಲ್ ಸಿಯ 6 ವಿಷಯಗಳ ಪೈಕಿ 3 ವಿಷಯಗಳಲ್ಲಿ ಉತ್ತೀರ್ಣರಾಗಿ, ಉಳಿದ 3 ವಿಷಯಗಳಲ್ಲಿ ಗರಿಷ್ಠ 26 ಅಂಕಗಳು ದೊರೆಯಲಿವೆ. ಅದೇ ರೀತಿ ಪಿಯುಸಿಯಲ್ಲಿ ಕನಿಷ್ಠ 210 ಅಂಕ ಪಡೆದವರಿಗೆ 2 ವಿಷಯಗಳಲ್ಲಿ ಶೇ.5ರಂತೆ ಅಂದರೇ ತಲಾ 5 ಅಂಕಗಳು ಸೇರಿ ಗರಿಷ್ಠ 10 ಅಂಕ ಪಡೆಯಬಹುದಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 9ರಿಂದ ಆರಂಭಗೊಂಡು, ಮಾರ್ಚ್ 29ಕ್ಕೆ ಮುಗಿಯಲಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.