i
ಹಿರಿಯೂರು ಜೆಡಿಎಸ್ ಟಿಕೆಟ್ ಫೈನಲ್, ಮಾರ್ಚ್-8 ರಂದು ಅಭ್ಯರ್ಥಿ ಘೋಷಣೆ…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ ಮತ್ತು ಎಂ.ಎಲ್.ಗಿರಿಧರ ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯೂರು ಜೆಡಿಎಸ್ ಟಿಕೆಟ್ ಅಂತಿಮವಾಗಿರುವ ಇಂಚಿಂಚು ಮಾಹಿತಿ ಚಂದ್ರವಳ್ಳಿ ದಿನ ಪತ್ರಿಕೆಗೆ ಲಭ್ಯವಾಗಿದ್ದು ಓದುಗರಿಗಾಗಿ ನೀಡಿದ್ದೇವೆ.
ಹಿರಿಯೂರು ಜೆಡಿಎಸ್ ಟಿಕೆಟ್ ಬಹುತೇಕ ಫೈನಲ್ ಆಗಿದ್ದು, ಮಾರ್ಚ್-8 ರಂದು ಅಭ್ಯರ್ಥಿ ಘೋಷಣೆ ಮಾಡಿ ಏಪ್ರಿಲ್-8 ರಂದು ಪಂಚರತ್ನ ರಥ ಯಾತ್ರೆ ಮಾಡಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಮಾರ್ಚ್-4 ರಂದು ಬೆಂಗಳೂರಿನಲ್ಲಿ ಕರೆಯಲಾಗಿದ್ದ ಹಿರಿಯೂರು ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಕುಮಾರಸ್ವಾಮಿ ಅವರು ಮಾತನಾಡಿದರು. ನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳನ್ನು ವೈಯಕ್ತಿಕವಾಗಿ ಅಭಿಪ್ರಾಯಗಳನ್ನು ಆಲಿಸಿದ ಕುಮಾರಸ್ವಾಮಿ ಅವರು ಕೊನೆಯದಾಗಿ ಮಾರ್ಚ್-8 ರಂದು ಅಭ್ಯರ್ಥಿ ಯಾರೆಂದು ಮಾಹಿತಿ ನೀಡಲಾಗುತ್ತದೆ. ಜೊತೆಯಲ್ಲಿ ಏಪ್ರಿಲ್-8 ರಂದು ಪಂಚರತ್ನ ರಥ ಯಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು, ಪಕ್ಷ ಘೋಷಣೆ ಮಾಡುವ ಅಭ್ಯರ್ಥಿ ಪರವಾಗಿ ಉಳಿದ ಮೂರು ಮಂದಿ ಆಕಾಂಕ್ಷಿಗಳು ಪ್ರಮಾಣಿಕವಾಗಿ ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಹಿರಿಯೂರು ಕ್ಷೇತ್ರ ಸೇರಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಕನಿಷ್ಠ ಮೂರು ಸ್ಥಾನಗಳನ್ನು ಗೆದ್ದು ಕೊಡುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು ಎನ್ನಲಾಗಿದೆ.
ಸಭೆ ಆರಂಭವಾಗುತ್ತಿದ್ದಂತೆ ಕುಮಾರಸ್ವಾಮಿ ಅವರು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ ಅವರ ಅಭಿಪ್ರಾಯ ಕೇಳಿದಾಗ, ನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳಲ್ಲಿ ನೀವು ಯಾರಿಗೆ ಟಿಕೆಟ್ ನೀಡಿದರೂ ಅತ್ಯಂತ ಬದ್ಧತೆ, ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ಒಗ್ಗಟ್ಟಿನಿಂದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ನನ್ನ ಮತ್ತು ಕಾರ್ಯಕರ್ತರ ಮೇಲಿದೆ, ಇದಕ್ಕೆ ಯಾವುದೇ ಅನುಮಾನ ಬೇಡ, ದಯವಿಟ್ಟು ಕೂಡಲೇ ಅಭ್ಯರ್ಥಿ ಯಾರೆಂದು ಘೋಷಣೆ ಮಾಡುವಂತೆ ಮನವಿ ಮಾಡಿ ತಮ್ಮ ಮನದಾಳದ ಅಭಿಪ್ರಾಯವನ್ನು ತಿಳಿಸಿದರು.
ಇವರ ನಂತರ ಪ್ರಬಲ ಟಿಕೆಟ್ ಆಕರಾಂಕ್ಷಿಯಾಗಿದ್ದ ಕುಂದಲಗುರು ಗ್ರಾಮದ ಕೆ.ಜಿ.ಮೂಡಲಗರಿಯಪ್ಪನವರ ರಾಜೀನಾಮೆ ಕುರಿತು ಕುಮಾರಸ್ವಾಮಿ ಪ್ರಶ್ನಿಸಿ ರಾಜೀನಾಮೆ ಅಂಗೀಕಾರವಾಯಿತೇ ಎಂದು ಕೇಳಿದಾಗ, ನನ್ನ ರಾಜೀನಾಮೆ ಅಂಗೀಕಾರವಾಗಿಲ್ಲ, ನೀವು ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಮುಂದೆ ಅವಕಾಶಗಳು ಒದಗಿ ಬಂದಾಗ ನನ್ನನ್ನು ಗಣನೆಗೆ ತೆಗೆದುಕೊಂಡರೆ ಸಾಕು ಎಂದು ಕುಮಾರಸ್ವಾಮಿ ಬಳಿ ಮನವಿ ಮಾಡಿಕೊಂಡರು ಎನ್ನಲಾಗಿದೆ.
ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಶ್ರವಣಗೆರೆ ಶಿವಪ್ರಸಾದ್ ಅವರನ್ನು ಕುಮಾರಸ್ವಾಮಿ ಪ್ರಶ್ನಿಸಿದಾಗ, ಅವರು ನೀವು ಕೊಟ್ಟ ಗಡುವಿನೊಳಗೆ ಆರ್ಥಿಕ ಶಕ್ತಿ ಕ್ರೋಢೀಕರಣ ಆಗಲಿಲ್ಲ, ಹಾಗಾಗಿ ನನಗೇನು ಟಿಕೆಟ್ ಬೇಡ, ನೀವು ಯಾರಿಗೆ ಟಿಕೆಟ್ ಕೊಟ್ಟರೂ ಖಂಡಿತವಾಗಿ ನಾನೇ ಸ್ಪರ್ಧಿಸಿದ್ದೇನೆಂದು ಕೆಲಸ ಮಾಡುತ್ತೇನೆ ಎಂದು ತಮ್ಮ ಅಭಿಪ್ರಾಯಗಳನ್ನು ಕುಮಾರಸ್ವಾಮಿ ಅವರಿಗೆ ತಿಳಿಸಿದರು ಎನ್ನಲಾಗಿದೆ.
ಪ್ರಬಲ ಟಿಕೆಟ್ ಆಕಾಂಕ್ಷಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ ಅವರ ಅಭಿಪ್ರಾಯ ಕೇಳಿದಾಗ, ನನ್ನ ರಾಜಕೀಯ ಜೀವನ 35-40 ವರ್ಷ ಸವೆದಿದೆ. 17 ವರ್ಷಗಳ ಕಾಲ ಜೆಡಿಎಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದು ಹಲವು ಸಲ ಹಿರಿಯೂರಿನಲ್ಲಿ ಜೆಡಿಎಸ್ ಗೆಲುವಿಗೆ ಕಾರಣ ಆಗಿದ್ದೇನೆ. ನನಗೂ 64 ವರ್ಷ ಆಯಿತು. ಮುಂದೆ ನನಗೆ ಅವಕಾಶಗಳು ಕೂಡಿ ಬರುವುದಿಲ್ಲ, ನನ್ನ ಸೇವೆ ಪರಿಗಣಿಸಬೇಕು. ಅಲ್ಲದೆ ವೈಯಕ್ತಿಕವಾಗಿ ನೀವು ಸೇರಿದಂತೆ ದೇವೇಗೌಡರ ಕುಟುಂಬ ನನಗೆ ಆಶೀರ್ವಾದ ಮಾಡಬೇಕು, ಅದೇ ರೀತಿ ಒಂದಿಷ್ಟು ಸಹಾಯವನ್ನು ಮಾಡಬೇಕು, ನಾನೂ ಕೂಡಾ ಈಗಾಗಲೇ ನೀವು ತಿಳಿಸಿದಷ್ಟು ಸಂಪನ್ಮೂಲ ಕ್ರೋಢೀಕರಣ ಮಾಡಿರುವೆ. ಇದಕ್ಕೆ ಅನುಮಾನ ಬೇಡ, ಸ್ಥಳೀಯರಿಗೆ ಟಿಕೆಟ್ ನೀಡುವುದರಿಂದ ಪಕ್ಷಕ್ಕೆ ಭಾರೀ ಲಾಭವಾಗಲಿದೆ. ಹಾಗಾಗಿ ನನಗೆ ಟಿಕೆಟ್ ನೀಡುವಂತೆ ಮನವಿ ಮಾಡಿದರು ಎಂದು ತಿಳಿದು ಬಂದಿದೆ.
ಜಯಣ್ಣನವರ ಅಭಿಪ್ರಾಯ ಆಲಿಸಿದ ಕುಮಾರಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಅವರು, ನಿಮಗೆ ಸಾಕಷ್ಟು ಅವಕಾಶ ನೀಡಲಾಯಿತು. ಆದರೂ ನೀವು ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದಿದ್ದೀರಿ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಮಾಡು ಇಲ್ಲವೇ ಮಡಿ ಲೆಕ್ಕದಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ. ನಮಗೆ ಗೆಲ್ಲುವಂತ ಕ್ಷೇತ್ರಗಳ ಒಂದೊಂದು ಸೀಟು ಬಹಳ ಮುಖ್ಯ, ನೀವು ಪಕ್ಷದ ಸಂಘಟನೆ ಮಾಡಲಿಲ್ಲ, ಇದರಿಂದ ಕೆಲವರು ಪಕ್ಷ ಬಿಟ್ಟು ಬೇರೆ ಕಡೆ ಹೋಗಿರುವ ಸಾಧ್ಯತೆ ಇದೆ ಎಂದು ಕುಮಾರಸ್ವಾಮಿ ಹೇಳಿದರು ಎನ್ನಲಾಗಿದೆ.
ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ್ಯಾರು ಪಕ್ಷದಿಂದ ಹೊರ ಹೋಗಿಲ್ಲ, ನಾಳೆಯಿಂದಲೇ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ. ಯಾವುದೇ ಕಾರಣಕ್ಕೂ ಒಂದು ಹೆಜ್ಜೆ ಹಿಂದೆ ಹಿಡುವುದಿಲ್ಲ, ದಯವಿಟ್ಟು ನನಗೇ ಟಿಕೆಟ್ ನೀಡುವಂತೆ ಮತ್ತೊಮ್ಮೆ ಜಯಣ್ಣನವರು ಕುಮಾರಸ್ವಾಮಿ ಬಳಿ ಮನವಿ ಮಾಡಿದರು ಎಂದು ತಿಳಿದು ಬಂದಿದೆ.
ಕೊನೆಯದಾಗಿ ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪನವರ ಅಭಿಪ್ರಾಯವನ್ನು ಕುಮಾರಸ್ವಾಮಿ ಕೇಳಿದಾಗ, ಚುನಾವಣೆಗೆ ಸ್ಪರ್ಧಿಸಲು ನಾನು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇನೆ. ತಾವುಗಳು ಟಿಕೆಟ್ ಕೊಟ್ಟರೆ ಖಂಡಿತ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ನೀಡದಿದ್ದರೆ ತಾವು ಯಾರನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತೀರೋ ಅವರ ಗೆಲುವಿಗೆ ಹಗಲಿರುಳು ದುಡಿಯುವುದಾಗಿ ರವೀಂದ್ರಪ್ಪ ತಿಳಿಸಿದರೆಂದು ತಿಳಿದು ಬಂದಿದೆ.
ಟಿಕೆಟ್ ಆಕಾಂಕ್ಷಿಗಳ ಜೊತೆಯಲ್ಲಿ ತೆರಳಿದ್ದ ಜೆಡಿಎಸ್ ಮುಖಂಡರುಗಳಾದ ಕೆ.ಶಂಕರಮೂರ್ತಿ, ಬಿದರೆಕೆರೆ ಚಿದಾನಂದ, ಎಪಿ ಚಂದ್ರು, ಚಿಲ್ಲಹಳ್ಳಿ ಶಿವಣ್ಣ ಮತ್ತಿತರರ ಅಭಿಪ್ರಾಯಗಳನ್ನು ಕೇಳಿದ ಕುಮಾರಸ್ವಾಮಿ ಅವರು, ಬಹುತೇಕ ಎಲ್ಲರೂ ಪಿಲಾಜನಹಳ್ಳಿ ಎಂ.ಜಯಣ್ಣನವರಿಗೆ ಟಿಕೆಟ್ ನೀಡಿದರೆ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದರು ಎನ್ನಲಾಗಿದೆ.
ಅಂತಿಮವಾಗಿ ಪಿಲಾಜನಹಳ್ಳಿ ಎಂ.ಜಯಣ್ಣನವರಿಗೆ ಬಹುತೇಕ ಜೆಡಿಎಸ್ ಟಿಕೆಟ್ ಫೈನಲ್ ಆಗುವ ಸಾಧ್ಯತೆ ಇದ್ದು ಜೆಡಿಎಸ್ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಎರಡು ದಿನ ಕಾಯಬೇಕಾಗಿದೆ.