i
ಲೋಕಾಯುಕ್ತ ದಾಳಿ, 40 ಅಲ್ಲ ಶೇ.60ರಷ್ಟು ಲಂಚ ಕೇಳಿ ಜೈಲು ಪಾಲಾದ ಅರಣ್ಯಾಧಿಕಾರಿ…
ಚಂದ್ರವಳ್ಳಿ ನ್ಯೂಸ್, ಮಡಿಕೇರಿ:
ಶೇ.60ರಷ್ಟು ಲಂಚಕ್ಕೆ ಬೇಡಿಕೆ ಇಟ್ಟು ಅದರಲ್ಲಿ 50 ಸಾವಿರ ರೂ.ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ಮಾಡಿ ಅರಣ್ಯಾಧಿಕಾರಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ಮಡಿಕೇರಿಯಲ್ಲಿ ಜರುಗಿದೆ.
ಪ್ರಭಾರ ವಲಯ ಅರಣ್ಯಾಧಿಕಾರಿ ಅವರಿಂದ 50 ಸಾವಿರ ಲಂಚ ಸ್ವೀಕರಿಸಿದ ಆರೋಪದಡಿ ಲೋಕಾಯುಕ್ತ ಪೊಲೀಸರು ಡಿ.ಎಫ್.ಓ ಕು.ಪೂರ್ಣಿಮಾ ಅವರನ್ನು ಮಡಿಕೇರಿ ಅರಣ್ಯ ಭವನದ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ದೂರುದಾರ ತನ್ನ ಅಧೀನ ಅಧಿಕಾರಿ ಸಾಮಾಜಿಕ ಅರಣ್ಯ ವಲಯದ ಪ್ರಭಾರ ವಲಯ ಅರಣ್ಯಾಧಿಕಾರಿ ಮಯೂರ ಅವರು ಆರೋಪಿ ಪೂರ್ಣಿಮಾ ಅವರ ಸೂಚನೆಯಂತೆ ಅರಣ್ಯ ಭವನದ ಬಳಿ ಹಣದ ಕವರ್ ನ್ನು ಜೀಪ್ ನಲ್ಲಿ ಇಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಆರೋಪಿ ಬಂಧಿಸಿದ್ದಾರೆ.
ನರ್ಸರಿಯಲ್ಲಿ ಕರ್ತವ್ಯ ನಿರ್ವಹಿಸಲು ಓರ್ವ ವಾಚರ್ ನೇಮಿಸಿಕೊಂಡಂತೆ ಮಾಡಿ ಮಾಸಿಕ 15 ಸಾವಿರ ರೂ. ವೇತನವನ್ನು ನನಗೆ ನೀಡಬೇಕು, ಅಲ್ಲದೆ ಈಗಾಗಲೇ ಎರಡು ಕಾಮಗಾರಿಗಳನ್ನು ಮಾಡಲಾಗಿದ್ದ ಒಟ್ಟು ಮೊತ್ತ 1.60 ಲಕ್ಷ ರೂ.ಗಳಲ್ಲಿ ಶೇ.60 ರಷ್ಟನ್ನು ನೀಡುವಂತೆ ಪೂರ್ಣಿಮಾ ಒತ್ತಾಯ ಮಾಡಿದ್ದರಲ್ಲದೆ ಹಣ ನೀಡದಿದ್ದರೆ ಅಮಾನತು ಮಾಡುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಜೊತೆಗೆ ಸಾರ್ವಜನಿಕವಾಗಿ ಅಧೀನಾಧಿಕಾರಿಯನ್ನು ನಿಂದಿಸುತ್ತಿದ್ದರು. ಇದರ ವಿರುದ್ಧ ಅಧೀನಾಧಿಕಾರಿ ಮಯೂರ ಲೋಕಾಯುಕ್ತಕ್ಕೆ ನೀಡಿದ್ದು ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಆರೋಪಿ ಬಂಧಿಸಿದ್ದಾರೆ.
ಲೋಕಾಯುಕ್ತ ಅಪರ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ಕುಮಾರ್ ಠಾಕೂರ್, ಪೊಲೀಸ್ ಮಹಾನಿರೀಕ್ಷಕ ಡಾ.ಎ.ಸುಬ್ರಮಣೇಶ್ವರ ರಾವ್, ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ಬಾಬು, ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಎಂ.ಎಸ್.ಪವನ್ ಕುಮಾರ್, ಮೈಸೂರು ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ ವಿ. ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲೆಯ ಪೊಲೀಸ್ ನಿರೀಕ್ಷಕ ಲೋಕೇಶ, ಮೈಸೂರು ಜಿಲ್ಲೆಯ ಪೊಲೀಸ್ ನಿರೀಕ್ಷಕ ಜಯರತ್ನ ನೇತೃತ್ವದ ತಂಡ ಹಾಗೂ ಲೋಕಾಯುಕ್ತ ಠಾಣೆಯ ಕೊಡಗು ಜಿಲ್ಲೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ದೊಡ್ಡ ಅಧಿಕಾರಿಯನ್ನು ಖಡ್ಡಾಕ್ಕೆ ಕೆಡವಿದ್ದಾರೆ.