i
ಶೇ.40 ರಷ್ಟು ಬಿಜೆಪಿ ಸರ್ಕಾರವಾದರೆ ಹೊಳಲ್ಕೆರೆಯಲ್ಲಿ ಶೇ.90 ರಷ್ಟು ಲಂಚ ಸರ್ಕಾರವಾಗಿದೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆಯಲ್ಲಿ ಲಂಚ ಲಂಚ ಲಂಚ, ಯಾವುದೇ ಕಾಮಗಾರಿ ಲಂಚವಿಲ್ಲದೆ ಆರಂಭವಾಗುವುದೇ ಇಲ್ಲ. ರಾಜ್ಯ ಮಟ್ಟದಲ್ಲಿ ಶೇ.40 ರಷ್ಟು ಲಂಚ ಸರ್ಕಾರವಾಗಿದೆ. ಆದರೆ ಹೊಳಲ್ಕೆರೆಯಲ್ಲಿ ಶೇ.90 ರಷ್ಟು ಲಂಚ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ನಾಯಕ ಹೆಚ್.ಆಂಜನೇಯ ಹೇಳಿದರು.
ನಗರದ ಐಶ್ವರ್ಯ ಫೋರ್ಟ್ ನಲ್ಲಿ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಮಿತಿ ಮೀರಿದ ಲಂಚವಿದೆ. ಹೊಳಲ್ಕೆರೆ ಕ್ಷೇತ್ರದ ಸಣ್ಣ ನೀರಾವರಿ ಇಲಾಖೆಯಲ್ಲಿ ಶೇ.90 ರಷ್ಟು ಲಂಚ ಇದೆ. ಭಾರೀ ಭ್ರಷ್ಟಚಾರ ನಡೆಯುತ್ತಿದೆ. ಯಾವುದೇ ಕಾಮಗಾರಿ ಮಾಡದೇ ಬೋಗಾಸ್ ಬಿಲ್ ಪಡೆಯಲಾಗಿದೆ. ಮಾಹಿತಿ ಹಕ್ಕಿನಡಿ ಕೆರೆ ಕಟ್ಟೆಗಳ ದುರಸ್ತಿ ಇತ್ಯಾದಿಗಳ ಕುರಿತು ಮಾಹಿತಿ ಕೇಳಿದರೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ದೂರಿದರು. ಸಂವಿಧಾನಾತ್ಮಕವಾಗಿ ನಡೆಯುತ್ತಿದ್ದ ಸಮಿಶ್ರ ಸರ್ಕಾರವನ್ನು ಕೆಡವಿದರು. ಭ್ರಷ್ಟಾಚಾರದಿಂದ ಸಂವಿಧಾನ ವಿರುದ್ದ ರಚನೆ ಆಗಿರುವ ಸರ್ಕಾರ ಬಿಜೆಪಿ ಆಗಿದೆ. ಸದಸ್ಯರ ಖರೀದಿ ಮಾಡಿದ ಸರ್ಕಾರ ಎಂದೂ ಸಹ ಉತ್ತಮ ಸರ್ಕಾರ ನೀಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿದರು.
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ಬಿಜೆಪಿಯವರು ಸರ್ಕಾರದ ಬಿಜೆಪಿ ಯಾತ್ರೆಯನ್ನಾಗಿ ಮಾಡಿದ್ದಾರೆ. ಹೊಳಲ್ಕೆರೆಯಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಖುದ್ದು ಫಲಾನುಭವಿಗಳಿಗೆ ಆಮಿಷ ಒಡ್ಡಿ ಕಾರ್ಯಕ್ರಮಕ್ಕೆ ಕರೆ ತಂದಿದ್ದಾರೆ. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಅಧಿಕಾರಗಳೇ ಹಣ ಖರ್ಚು ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳ ಹಣದಲ್ಲಿ ಬಿಜೆಪಿ ಕಾರ್ಯಕ್ರಮ ಮಾಡಿದ್ದಾರೆ ಎಂದು ದೂರಿದರು. 300 ಕೆರೆಗಳ ಅಭಿವೃದ್ಧಿ ಮಾಡಿದ್ದೇನೆಂದು ಶಾಸಕ ಚಂದ್ರಪ್ಪ ಹೇಳಿದ್ದಾರೆ. ಕೂಡಲೇ ಅವರು ಈ ಕುರಿತು ಯಾವ ಯಾವ ಊರಿನಲ್ಲಿರುವ ಕೆರೆಗಳನ್ನು ಎಷ್ಟು ಹಣದಲ್ಲಿ ಅಭಿವೃದ್ಧಿ ಪಡಿಸಿದ್ದಾರೆಂದು ಶ್ವೇತ ಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಆಂಜನೇಯ ಆಗ್ರಹ ಮಾಡಿದರು.
300 ಕೆರೆಗಳ ಅಭಿವೃದ್ಧಿ ಕುರಿತು ಮಾಹಿತಿ ಹಕ್ಕಿನಡಿ ಕೇಳಲಾದ ಮಾಹಿತಿ ಅಧಿಕಾರಿಗಳು ಇನ್ನೂ ಮಾಹಿತಿ ನೀಡಿಲ್ಲ, ಹಾಗಾಗಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದೇನೆ. ಕೆರೆಯಲ್ಲಿ ರಸ್ತೆ ನಿರ್ಮಾಣ ಮಾಡಲು ಯಾರು ಅನುಮತಿ ನೀಡಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ ಶೇ..40 ರಷ್ಟು ಲಂಚವಲ್ಲ ಬಲಿಗೆ ಶೇ 90 ಲಂಚ ಪಡೆದಿದ್ದಾರೆಂದು ಆಂಜನೇಯ ಗಂಭೀರ ಆರೋಪ ಮಾಡಿದರು. ಎಸ್ಇಪಿ, ಟಿಎಸ್ಪಿ ಹಣವನ್ನು ಎಲ್ಲಿ ಖರ್ಚು ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಹೊಳಲ್ಕೆರೆ ನಗರದಲ್ಲಿ ಬಯಲು ರಂಗ ಮಂದಿರವನ್ನು ಯಾವ ಹಣದಲ್ಲಿ ಅಭಿವೃದ್ಧಿ ಮಾಡಿದ್ದಾರೆ ಗೊತ್ತಿಲ್ಲ. ನಮ್ಮ ಕಾಲದಲ್ಲಿ ಮಳಿಗೆಗಳ ನಿರ್ಮಾಣ ಮಾಡಲಾಗಿತ್ತು ಆದರೆ ಅವುಗಳನ್ನು ಇನ್ನು ತೆರೆಯಲಾಗಿಲ್ಲ ಎಂದು ಕಿಡಿಕಾರಿದರು.
ಭೂಮಿ ಉಳುಮೆ ಮಾಡುವವರಿಗೆ ಸಕ್ರಮಗೊಳಿಸಲು ಅವಕಾಶ ಇದೆ ಆದರೆ ಜಮೀನು ಉಳುಮೆ ಮಾಡದರಿಗೆ ಜಮೀನು ಮಂಜೂರು ಮಾಡಿಸುವ ಕೆಲಸ ಮಾಡಿದ್ದಾರೆದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ನಿಗಮಗಳಿಂದ ತಂದ ಅನುದಾನವನ್ನು ಫಲಾನುಭವಿಗಳಿಗೆ ನೀಡಿಲ್ಲ. ಬೋರ್ ವೆಲ್ ಕೊರೆಸಲು ಸಹ ಬಿಟ್ಟಿಲ್ಲ. ಎಲ್ಲಾ ಉಪಕರಣಗಳು ಸಹ ಗುಣಮಟ್ಟದಿಂದ ಕೂಡಿಲ್ಲ. ಫಲಾನುಭವಿಗಳಿಗೆ ಇಂತಿಷ್ಟ ಪ್ರಮಾಣದಲ್ಲಿ ಪಂಪ್ ಪೈಪ್ ಗಳನ್ನು ನೀಡಬೇಕೆಂದಿದೆ ಆದರೆ ನೀಡಿಲ್ಲ ಎಂದರು. ಬಿಜೆಪಿ ಶಾಸಕರ ಮಾತು ಕೇಳಿ ಬೋಗಸ್ ಬಿಲ್ ಬರೆದರೆ ನಿಮಗೆ ಒಂದು ಜೈಲು ಕಟ್ಟುತ್ತೇವೆ. ನಮ್ಮ ಸರ್ಕಾರ ಬರುವುದು ಕಾಯಂ. ಆಗ ಅಕ್ರಮ ಎಸಗಿದ ಎಲ್ಲ ಅಧಿಕಾರಿಗಳನ್ನು ಆ ಜೈಲಿನಲ್ಲೇ ಹಾಕುತ್ತೇವೆ. ತುಂಡು ಗುತ್ತಿಗೆ ಕಾಮಗಾರಿಗಳಿಗೆ ಬೋಗಸ್ ಬಿಲ್ ಬರದರೆ ನಿಮ್ಮನ್ನು ಜೈಲಿಗೆ ಕಳುಹಿಸುವ ಕೆಲಸ ನಾವು ಮಾಡುತ್ತೇವೆ. 2-3 ದಿನದಲ್ಲಿ ನೀತಿ ಸಂಹಿತೆ ಜಾರಿಗೆ ಬರುತ್ತದೆ, ಈಗ ಹೈಟೆಕ್ ಬಸ್ ನಿಲ್ದಾಣ ಮಾಡಲು ಹೊರಟಿದ್ದಾರೆ. ಇವರು ಇಷ್ಟು ದಿನಗಳ ಕಾಲ ಏನು ಮಾಡುತ್ತಿದ್ದರು ಎಂದು ಮಾಜಿ ಸಚಿವ ಆಂಜನೇಯ ಪ್ರಶ್ನಿಸಿದ್ದರು.
ಈ ಸಂದರ್ಭದಲ್ಲಿ ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಹನುಮಂತಪ್ಪ, ಭರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಎಮ್ಮೆಹಟ್ಟಿ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶಿವಮೂರ್ತಿ, ತಾಲೂಕು ಪಂಚಾಯತಿ ಮಾಜಿ ಓಂಕಾರಸ್ವಾಮಿ, ಮುಖಂಡರಾದ ಪ್ರಕಾಶ್, ಹೆಚ್.ಡಿ.ರಂಗಯ್ಯ, ಜಿಪಂ ಮಾಜಿ ಸದಸ್ಯ ಗಂಗಾಧರ್ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.