i
ಹೊಳಲ್ಕೆರೆ ಕ್ಷೇತ್ರದಲ್ಲಿ ನಡೆದಿರುವ ಬೋಗಸ್ ಕಾಮಗಾರಿ ಬಿಲ್ ಪಾವತಿ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿ ಡಿಸಿಗೆ ದೂರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಮಗಾರಿ ನಡೆಸದೆಯೇ ಅಕ್ರಮವಾಗಿ ಬಿಲ್ಗಳನ್ನು ಮಾಡಿಸಿ ಹಣ ಲಪಟಾಯಿಸಲು ಹೊರಟಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪನವರ ವಿರುದ್ದ ಮಾಜಿ ಸಚಿವ ಹೆಚ್.ಆಂಜನೇಯ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಕೆರೆಗಳಲ್ಲಿ ಸ್ವಲ್ಪ ಹೂಳೆತ್ತಿಸಿ ನಂತರ ಬಿಲ್ಗಳನ್ನು ಮಾಡಿಸಿಕೊಳ್ಳುವುದಲ್ಲದೆ ಕಳಪೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಹಣ ಲೂಟಿ ಹೊಡೆಯಲಾಗಿದೆ. ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿಯಲ್ಲಿ ಸುಮಾರು ಮೂರು ಸಾವಿರ ಎಕರೆ ಅಮೃತ ಮಹಲ್ ಕಾವಲು ಜಮೀನನ್ನು ಖಾಸಗಿಯವರಿಗೆ ಕೊಡಲು ತಂತ್ರಗಾರಿಕೆ ರೂಪಿಸಿದ್ದು, ಇದರ ಹಿಂದೆ ದೊಡ್ಡ ಹಗರಣವಿದೆ. ತಾಲ್ಲೂಕಿನಾದ್ಯಂತ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಗದರಿಸಿ ಬಿಲ್ಗಳಿಗೆ ಸಹಿ ಮಾಡಿಸಿಕೊಳ್ಳುತ್ತಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪನ ವಿರುದ್ದ ದೊಡ್ಡ ಪಟಾಲಂ ಇದೆ. ಹೊಳಲ್ಕೆರೆಯಲ್ಲಿ 19 ರಂದು ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದು, ಎಷ್ಟು ಸರಿ. ಇದೊಂದು ಪಕ್ಷದ ಕಾರ್ಯಕ್ರಮ ಎನ್ನುವುದನ್ನು ಜಿಲ್ಲಾಡಳಿತ ಮರೆತಂತಿದೆ. ತಾಲೂಕಿನಲ್ಲಿ ಎಷ್ಟೋ ಅಧಿಕಾರಿಗಳು ಶಾಸಕ ಎಂ.ಚಂದ್ರಪ್ಪನವರ ದರ್ಪಕ್ಕೆ ಹೆದರಿ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹಗರಣಗಳ ತನಿಖೆಯಾಗದೆ ಬಿಲ್ಗಳಿಗೆ ಸಹಿಯಾಗಬಾರದು ಎಂದು ಹೆಚ್.ಆಂಜನೇಯ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ, ವಕೀಲರುಗಳಾದ ಸುದರ್ಶನ್, ಬೀಸ್ನಳ್ಳಿ ಜಯಣ್ಣ, ಶರಣಪ್ಪ, ರವಿ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.