i
ಜೆಡಿಎಸ್ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಸೋಮಶೇಖರ್ ಅಭಿಮಾನಿಗಳ ಒತ್ತಡ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈತಪ್ಪಿ ಹೋಗಿದ್ದು ಬೆಂಬಲಿಗರು ಜೆಡಿಎಸ್ ಅಥವಾ ಪಕ್ಷೇತರರಾಗಿ ಕಣಕ್ಕೆ ಇಳಿಯುವಂತೆ ಸೋಮಶೇಖರ್ ಮೇಲೆ ಅಭಿಮಾನಿಗಳು ತೀವ್ರ ಒತ್ತಡ ಹೇರುತ್ತಿದ್ದಾರೆ.
ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದಲ್ಲಿ ಏರ್ಪಡಿಸಿದ್ದ ಬಾಡೂಟ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಪಾಲ್ಗೊಂಡು ಸೋಮಶೇಖರ್ ಅವರಿಗೆ ಉತ್ತೇಜನ ನೀಡಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದರು. ಒಂದು ಕಡೆ ಕ್ಷೇತ್ರದ ಜನರ ಪ್ರೀತಿಗಳಿಸುತ್ತಿರುವ ಸೋಮಶೇಖರ್ ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಅವರಿಗೆ ಮಾಡಿರುವ ದ್ರೋಹದ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದರು. ಇಂದರಿಂದಾಗಿ ಹಿರಿಯೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಮತ್ತೆ ದೃಢವಾಗುತ್ತಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸೋಮಶೇಖರ್ ಅವರ ಮೇಲೆ ಡಿ.ಸುಧಾಕರ್ ಬೆಂಬಲಿಗರು ಧರ್ಮಪುರದಲ್ಲಿ ಹಲ್ಲೆ ಮಾಡಿದಾಗ ಕ್ಷೇತ್ರದ ಜನತೆಯ ಅನುಕಂಪ ಸೋಮಶೇಖರ್ ಮೇಲೆ ಹೆಚ್ಚಿತು.
ಭವಿಷ್ಯದಲ್ಲಿ ಕೈಗೊಳ್ಳಬೇಕಿರುವ ರಾಜಕೀಯ ನಿರ್ಧಾರ ಕುರಿತು ಚರ್ಚಿಸಲು ಬಾಡೂಟದ ಹೆಸರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ 6 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ. ಪಕ್ಷೇತರರಾಗಿ ಸ್ಪರ್ಧಿಸುವ ಬದಲು ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿಯುವಂತೆ ಸೋಮಶೇಖರ್ ಬೆಂಬಲಿಗರು ಒತ್ತಾಯಿಸಿದರು.
ಸೋಮಶೇಖರ್ ಮಾಧ್ಯಮಗಳೊಂದಿಗೆ ಮಾತನಾಡಿ ಸದ್ಯಕ್ಕೆ ಕಾಂಗ್ರೆಸ್ ಬಿಡುವ ಯೋಚನೆ ಇಲ್ಲ. ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನಷ್ಟೇ ಬಿಡುಗಡೆ ಮಾಡಲಾಗಿದೆ. ಇನ್ನೂ ಯಾರಿಗೂ ಬಿ ಫಾರಂ ಕೊಟ್ಟಿಲ್ಲ. ಯಾವಾಗ ಬೇಕಾದರೂ ಬದಲಾವಣೆ ಆಗಬಹುದು. ಅವಸರ ಬೇಡ ಎಂದು ಅಭಿಮಾನಿಗಳನ್ನು ಸಮಾಧಾನ ಪಡಿಸಿದರು.
ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಸಿಗಬೇಕು, ಹಾಗೆಯೇ ಕುಂಚಿಟಿಗ ಮತ್ತು ಕುರುಬರು ಹಾಗೂ ಕಾಡುಗೊಲ್ಲರು ಒಂದೇ ಕಳ್ಳುಬಳ್ಳಿಗಳಾಗಿದ್ದು ಈ ಮೂರು ಜಾತಿಗಳು ಹಿಂದುಳಿದಿದ್ದು ಈ ಜಾತಿಗಳಿಗೆ ಸೂಕ್ತ ಸ್ಥಾನಮಾನಗಳು, ಮೀಸಲಾತಿ ದೊರೆಯಲು ತಾವು ಕೊನೆ ಉಸಿರಿರುವ ತನಕ ಹೋರಾಟ ಮಾಡುವೆ ಎಂದು ಸೋಮಶೇಖರ್ ಹೇಳಿದರು.
ಕಾಂಗ್ರೆಸ್ ಪಕ್ಷ ಸದಾ ಒತ್ತಡದಲ್ಲಿ ಮುಳುಗಿಸುತ್ತದೆ, ನಿಮಗೆ ಕಾಂಗ್ರೆಸ್ ಪಕ್ಷದ ಸಹವಾಸವೇ ಬೇಡ. ಜೆಡಿಎಸ್ನಿಂದ ಟಿಕೆಟ್ ತರುವ ಹೊಣೆ ನಮಗೆ ಬಿಡಿ. ಸ್ಪರ್ಧೆಗೆ ಒಪ್ಪಿಕೊಳ್ಳಿ ಎಂದು ಕೆಲ ಮುಖಂಡರು ಹಠ ಹಿಡಿದರು.
ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಕರೆತಂದು ಟಿಕೆಟ್ ನೀಡಲಿದೆ ಎಂಬ ಸುದ್ದಿ ಕೆಲವು ದಿನ ಕ್ಷೇತ್ರದಲ್ಲಿ ಹರಿದಾಡಿ ಅಭ್ಯರ್ಥಿ ಡಿ.ಸುಧಾಕರ್ ಅವರ ನೆಮ್ಮದಿ ಕೆಡಿಸಿತ್ತು. ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗಿದೆ. ನೆಮ್ಮದಿಯಿಂದ ಪ್ರಚಾರದಲ್ಲಿ ತೊಡಗೋಣ ಎಂಬ ಉಮೇದಿನಲ್ಲಿದ್ದ ಸುಧಾಕರ್ಗೆ ಆದಿವಾಲ ಗ್ರಾಮದಲ್ಲಿನ ಬೆಳವಣಿಗೆ ಮತ್ತೆ ನಿದ್ದೆಗೆಡಿಸಿದ್ದು ಹಿರಿಯೂರು ಕ್ಷೇತ್ರದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಸಂದೇಶವನ್ನು ಅಭಿಮಾನಿಗಳು ರವಾನೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಸೋಮಶೇಖರ್ ಧರ್ಮಪುರದಲ್ಲಿ ಸುಧಾಕರ್ ಬೆಂಬಲಿಗರು ನಡೆಸಿದ ದಾಂಧಲೆಯಿಂದ ಕೋಪಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿದ್ದ ಅವರು ಪಕ್ಷ ಬಿಟ್ಟು ಜೆಡಿಎಸ್ ಸೇರುತ್ತಾರೆಯೇ ಎಂಬುದು ಕುತೂಹಲವಾಗಿದೆ.
ಸಭೆಯಲ್ಲಿ ಎಸ್ಸಿ ಸಮುದಾಯ ಎಡ ಮತ್ತು ಬಲ ವರ್ಗದವರು, ಲಿಂಗಾಯತರು ಕಾಡುಗೊಲ್ಲರು, ಕುಂಚಿಟಿಗ, ಕುರುಬ, ಲಂಬಾಣಿ, ಭೋವಿ ಸೇರಿದಂತೆ ವಿವಿಧ ಜಾತಿ-ಧರ್ಮದವರು ಪಾಲ್ಗೊಂಡಿದ್ದರು.