i
ಕೋಟೆನಾಡಿನ ಕಾಂಗ್ರೆಸ್ ಟಿಕೆಟ್ ಗಾಗಿ ಬಿಗ್ ಫೈಟ್, ಆಂಜನೇಯ, ಸವಿತ, ಎಸ್ಕೆಬಿ, ಆಚಾರ್, ಪಪ್ಪಿ ಯಾರಿಗೆ ಟಿಕೆಟ್?…
ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಧಾನಸಭಾ ಚುನಾವಣೆ ಫಿಕ್ಸ್ ಆಗಿದೆ. ಆದರೆ ಚಿತ್ರದುರ್ಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು ದಿನದಿಂದ ದಿನಕ್ಕೆ ಕಗ್ಗಂಟು ಆಗಿದ್ದು ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವುದು ಗೊಂದಲದ ಗೂಡಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಗಾಗಿ ಮಾಜಿ ಸಚಿವರು ಸೇರಿದಂತೆ ಹಾಲಿ ಶಾಸಕರು, ಮಾಜಿ ಶಾಸಕರುಗಳ ಮಧ್ಯ ತೀವ್ರ ಪೈಪೋಟಿ ಉಂಟಾಗಿದ್ದು ಟಿಕೆಟ್ ಸಿಗದವರು ಪರ್ಯಾಯವಾಗಿ ಚಿಂತನೆ ಮಾಡುವ ಬಗ್ಗೆ ಈಗಾಗಲೇ ಹೇಳಿಕೆಗಳನ್ನೂ ನೀಡಿ ಆಗಿದೆ.
ಚಿತ್ರದುರ್ಗದ ಆರು ಕ್ಷೇತ್ರದಲ್ಲಿ ಚಳ್ಳಕೆರೆ ಹಾಲಿ ಶಾಸಕ ಟಿ.ರಘುಮೂರ್ತಿ, ಹಿರಿಯೂರು ಮಾಜಿ ಸಚಿವ ಡಿ.ಸುಧಾಕರ್ ಮತ್ತು ಹೊಸದುರ್ಗ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಇವರುಗಳಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಫೈನಲ್ ಮಾಡಿ ಘೋಷಣೆ ಮಾಡಿದೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ-
ಆದರೆ ಸಮಾಜ ಕಲ್ಯಾಣ ಇಲಾಖೆಯಂತಹ ಬಹುದೊಡ್ಡ ಇಲಾಖೆ ನಿರ್ವಹಿಸಿದ, ಮಾದಿಗ ಸಮಾಜದಲ್ಲಿ ದೊಡ್ಡ ನಾಯಕರಾಗಿ ಬೆಳೆದಿರುವ ಮಾಜಿ ಸಚಿವ ಎಚ್.ಆಂಜನೇಯ ಅವರು ಸ್ಪರ್ಧಿಸುವ ಆಕಾಂಕ್ಷಿಗಳಾಗಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ದೂರದ ಬಂಧು ರಘು ಅವರು ಕೂಡಾ ಟಿಕೆಟ್ ಆಕಾಂಕ್ಷಿಯಾಗಿ ಬಹುದೊಡ್ಡ ಫೈಟ್ ನೀಡಿದ್ದಾರೆ.
ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ಹಾಗೂ ಎಐಸಿಸಿ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಆಗಿರುವ ಮಯೂರ್ ಜಯಕುಮಾರ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್ ಸೇರಿದಂತೆ ಹಲವರು ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು ಕ್ಷೇತ್ರಗಳ ಟಿಕೆಟ್ ಫೈನಲ್ ಮಾಡಲು ಸಾಕಷ್ಟು ಸರ್ಕಸ್ ಮಾಡಿದರೂ ಸಾಧ್ಯವಾಗಿಲ್ಲ.
ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ಟಿಕೆಟ್ ತಪ್ಪಿಸಲು ಯಾವುದೇ ಸಕಾರಣಗಳಿಲ್ಲ, ಆದರೆ ರಘು ಅಥವಾ ಅವರ ಪತ್ನಿ ಸವಿತಾ ರಘು ಅವರು ಯುವ ಕಾಂಗ್ರೆಸ್ ಕೋಟಾದಡಿ ಟಿಕೆಟ್ ಕೇಳುತ್ತಿದ್ದು ಇಡೀ ರಾಜ್ಯದಲ್ಲಿ ಕೇವಲ ಮೂರು ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯ ಕಾಂಗ್ರೆಸ್ ಯುವ ಘಟಕ ಬೇಡಿಕೆ ಇಟ್ಟಿದ್ದು ಅದರಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರವೂ ಒಂದಾಗಿದೆ. ಈಗಾಗಿ ಕಾಂಗ್ರೆಸ್ ಪಕ್ಷಕ್ಕೆ ಟಿಕೆಟ್ ಫೈನಲ್ ಮಾಡಲು ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.
ಇದರ ಮಧ್ಯ ಮಾಜಿ ಸಚಿವ ಆಂಜನೇಯರೊಂದಿಗೆ ಡಿಕೆಶಿ, ಸಿದ್ದರಾಮಯ್ಯ ಸಂಧಾನ ಮಾಡಿ ಟಿಕೆಟ್ ಬಿಡುವಂತೆ ಕೋರಿದ್ದರು. ನೀವು ಸ್ಪರ್ಧಿಸದಿದ್ದರೆ ಮುಂದೆ ಕಾಂಗ್ರೆಸ್ ಸರ್ಕಾರ ಬರಲಿದ್ದು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡಲಾಗುತ್ತದೆ, ಇದಕ್ಕೆ ಯಾವುದೇ ಅನುಮಾನ ಬೇಡ, ಟಿಕೆಟ್ ತ್ಯಾಗ ಮಾಡುವಂತೆ ಆಂಜನೇಯ ಅವರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಇನ್ನೊಂದೆಡೆ ರಘು ಅವರ ಬೆನ್ನಿಗೆ ಕೇಂದ್ರ ಮತ್ತು ರಾಜ್ಯ ವರಿಷ್ಠರು ಇದ್ದು ಬಹುತೇಕ ಅವರಿಗೆ ಟಿಕೆಟ್ ಅಂತಿಮ ಮಾಡಲಾಗುತ್ತದೆಂಬ ಮಾಹಿತಿ ಲಭ್ಯವಾಗಿದೆ.
ಚಿತ್ರದುರ್ಗ ಕ್ಷೇತ್ರ- ಮಾಜಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್, ವೀರೇಂದ್ರ ಪಪ್ಪಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಇವರುಗಳ ಮಧ್ಯ ಟಿಕೆಟ್ ಗಾಗಿ ಫೈಟ್ ನಡೆದಿದ್ದು ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ಎನ್ನುವುದು ಕಗ್ಗಂಟಾಗಿದೆ.
ವೀರೇಂದ್ರ ಪಪ್ಪಿ ಜೆಡಿಎಸ್ ಪಕ್ಷದಲ್ಲಿದ್ದು ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ರಘು ಆಚಾರ್ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಬಯಸಿಯೇ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ, ಹಾಗಾಗಿ ನನಗೇ ಟಿಕೆಟ್ ನೀಡಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ಇವರಿಬ್ಬರ ಮಧ್ಯ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಕೂಡಾ ಟಿಕೆಟ್ ಗಾಗಿ ತೀವ್ರ ಪ್ರಯತ್ನ ಮಾಡುತ್ತಿದ್ದು ಕೆಲ ವರಿಷ್ಠರು ಇವರ ಬೆನ್ನಿಗೆ ಇದ್ದು ಟಿಕೆಟ್ ಇವರಿಗೆ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಆದರೆ ಏ.4 ರಂದು ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಸಮಿತಿ ಸಭೆಗೆ ರಘು ಆಚಾರ್ ಮತ್ತು ವೀರೇಂದ್ರ ಪಪ್ಪಿ ಅವರಿಬ್ಬರ ಹೆಸರುಗಳು ಮಾತ್ರ ರವಾನೆ ಆಗಿವೆ ಎನ್ನಲಾಗಿದೆ. ಆದರೂ ಬಸವರಾಜನ್ ಅವರು ತನ್ನದೇ ಆದ ವಲಯದ ಮೂಲಕ ಟಿಕೆಟ್ ಪಡೆದೇ ಬರುತ್ತಾರೆಂದು ಅವರ ಬಹುತೇಕ ಅಭಿಮಾನಿಗಳು ಹೇಳುತ್ತಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರ-
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿ ಡಾ.ಯೋಗೇಶ್ ಬಾಬು ಮತ್ತು ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಇಬ್ಬರಿದ್ದರು. ಆದರೆ ಇತ್ತೀಚೆಗೆ ನೇರ್ಲಗುಂಟೆ ತಿಪ್ಪೇಸ್ವಾಮಿ ದಿಢೀರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದರಿಂದ ನಿಟ್ಟುಸಿರು ಬಿಟ್ಟಿದ್ದ ಯೋಗೇಶ್ ಬಾಬು ಅವರ ನಿದ್ದೆಗೆಡಿಸುವಂತೆ ಹಾಲಿ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ದಿಢೀರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಘಟಾನುಟಿ ನಾಯಕರ ದಂಡೇ ಗೋಪಾಲಕೃಷ್ಣ ಅವರ ಬೆನ್ನಿಗಿದ್ದು ಈಗಾಗಲೇ ಟಿಕೆಟ್ ಕೈ ತಪ್ಪುವ ಆತಂಕದಲ್ಲಿ ಯೋಗೇಶ್ ಬಾಬು ಇದ್ದು ಟಿಕೆಟ್ ಗಾಗಿ ಶಕ್ತಿಪ್ರದರ್ಶನ ಕೂಡಾ ಮಾಡುತ್ತಿದ್ದಾರೆ.
ಆದರೆ ರಾಜ್ಯ ಕಾಂಗ್ರೆಸ್ ನಾಯಕರುಗಳಿಗೆ ಚಿತ್ರದುರ್ಗದ ಈ ಮೂರು ಕ್ಷೇತ್ರಗಳ ಟಿಕೆಟ್ ಫೈನಲ್ ಮಾಡಲು ಕಗ್ಗಂಟಾಗಿದ್ದರಿಂದಾಗಿ ಕೇಂದ್ರದ ವರಿಷ್ಠರ ಅಂಗಳಕ್ಕೆ ಚೆಂಡ್ ಎಸೆದಿದ್ದಾರೆ. ರಾಜ್ಯ ಕಾಂಗ್ರೆಸ್ ಸಮಿತಿ ಇಬ್ಬಿಬ್ಬರ ಹೆಸರುಗಳನ್ನೊಳಗೊಂಡ ಪಟ್ಟಿಯನ್ನು ಕೇಂದ್ರ ಸಮಿತಿಗೆ ರವಾನೆ ಮಾಡಿದೆ. ಚಿತ್ರದುರ್ಗ- ವೀರೇಂದ್ರ, ರಘು ಆಚಾರ್, ಮೊಳಕಾಲ್ಮೂರು ಡಾ.ಯೋಗೀಶ್ ಬಾಬು, ಎನ್ ವೈ. ಗೋಪಾಲಕೃಷ್ಣ ಹಾಗೂ ಹೊಳಲ್ಕೆರೆ- ಎಚ್. ಆಂಜನೇಯ, ಸವಿತಾ ರಘು ಇವರುಗಳ ಹೆಸರು ಫೈನಲ್ ಮಾಡಿ ಕೇಂದ್ರ ವರಿಷ್ಠರೇ ತೀರ್ಮಾನ ಮಾಡಲಿ ಎಂದು ಪಟ್ಟಿಯನ್ನು ಹೊತ್ತಾಕಿದ್ದಾರೆ. ಇದರಿಂದಾಗಿ ದೆಹಲಿ ಮಟ್ಟದಲ್ಲಿ ಟಿಕೆಟ್ ಲಾಬಿ ಮಾಡಲು ಟಿಕೆಟ್ ಆಕಾಂಕ್ಷಿಗಳು ಪ್ರಯತ್ನ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್ ಪಕ್ಷ ಆಕಾಂಕ್ಷಿಗಳಿಗೆ ಟಿಕೆಟ್ ಫೈನಲ್ ಮಾಡದಿದ್ದರೆ ಕಾರ್ಯಕರ್ತರು, ಮುಖಂಡರು ಅನ್ಯ ಪಕ್ಷಗಳತ್ತ ಮುಖ ಮಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹಾಗಾಗಿ ಏ.6ರೊಳಗೆ ಕಾಂಗ್ರೆಸ್ ವರಿಷ್ಠರು ಈ ಮೂರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ ಇನ್ನೂಳಿದ 97 ಕ್ಷೇತ್ರಗಳಿಗೂ ಫೈನಲ್ ಮಾಡಲಿದ್ದಾರೆ. ಅಲ್ಲಿಯ ತನಕ ಟಿಕೆಟ್ ಆಕಾಂಕ್ಷಿಗಳ ಪ್ರಯತ್ನ ಮುಂದುವರೆಯಲಿದೆ.