i
ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರಪ್ಪಗೆ ಜೆಡಿಎಸ್ ಟಿಕೆಟ್ – ಜಿಲ್ಲಾಧ್ಯಕ್ಷ ಡಿ. ಯಶೋಧರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜೆಡಿಎಸ್ ಟಿಕೆಟ್ ಗಾಗಿ ಐದು ಜನರು ಬಾರಿ ಪೈಪೋಟಿ ನಡೆಸಿದ್ದ ಗೊಂದಲಕ್ಕೆ ತೆರೆ ಬಿದ್ದಿದ್ದು, ಇದೀಗ ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರಪ್ಪಗೆ ಟಿಕೆಟ್ ನೀಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ಯಶೋಧರ ಹೇಳಿದರು. ಅವಧಾನಿ ನಗರದಲ್ಲಿ ನೂತನವಾಗಿ ಪ್ರಾರಂಭಿಸಿರುವ ಜೆಡಿಎಸ್ ಪಕ್ಷದ ಕಛೇರಿಯನ್ನು ಉದ್ಘಾಟಿಸಿದ ಮಾತನಾಡಿದರು. ಜೆಡಿಎಸ್ ಎರಡನೇ ಹಂತದ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಲಿದೆ. ಹಿರಿಯೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದಿದ್ದು ಸತ್ಯ. ಕಳೆದ ಎರಡು ವರ್ಷಗಳಿಂದ ಅನೇಕ ರೀತಿ ಹೂವಪೋವಗಳಿಗೆ ತೆರೆ ಎಳೆದು ಇಂದು ನಮ್ಮ ಪಕ್ಷದ ವರಿಷ್ಠರು ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರಪ್ಪ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಅಧಿಕೃತ ಅಭ್ಯರ್ಥಿ ಎಂದು ಮೌಖಿಕವಾಗಿ ಕುಮಾರಸ್ವಾಮಿ ಅವರು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಮೇ 10 ರಂದು ನಡೆಯಲಿರುವ ಚುನಾವಣೆ ಮಹತ್ವಪೂರ್ಣ ಹಾಗೂ ಜೆಡಿಎಸ್ ಪಕ್ಷಕ್ಕೆ ಅಷ್ಟೇ ಪ್ರತಿಷ್ಠಿತವಾದ ಚುನಾವಣೆಯೆಂದು ಭಾವಿಸಲಾಗಿದೆ. ದೇಶಕ್ಕೆ ಸಮರ್ಥವಾದ ನಾಯಕತ್ವ ನೀಡಿದ ಮಾಜಿ ಪ್ರಧಾನಿ ದೇವೇಗೌಡ ಅವರು ಹಾಗೂ ಪಕ್ಷದ ನಾಯಕರಾದ ಕುಮಾರಣ್ಣನವರು ನೇತೃತ್ವದಲ್ಲಿ ನಡೆಯುವ ಈ ಎಲೆಕ್ಷನ್ ನಲ್ಲಿ ಜೆಡಿಎಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪಂಚರತ್ನ ಯಾತ್ರೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬರುವ ಚುನಾವಣೆಯಲ್ಲಿ ಮತದಾರರು ಹೊಸ ಭಾಷೆಯನ್ನು ಬರೆಯುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಪಕ್ಷಗಳ ಅಬ್ಬರ ಎಷ್ಟೇ ಜೋರಗಿದ್ದರು ಸಹ ಈ ರಾಜ್ಯದಲ್ಲಿ ಮತ್ತು ನಮ್ಮ ತಾಲೂಕಿನ ಮತದಾರರಲ್ಲಿ ಗಂಭೀರವಾದ ಚಿಂತನೆ ನಡೆಯುತ್ತಿದೆ ಅದನ್ನು ನಾವು ಗಮನಿಸಿದ್ದೇವೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳಲ್ಲಿ ಒಂದು ಪಕ್ಷದ ಅಭ್ಯರ್ಥಿ ಆಗಿರುವಂಥವರು ಎರಡು ಬಾರಿ ಆಯ್ಕೆಯಾಗಿದ್ದಾರೆ. ಹಾಗೆಯೇ ಮತ್ತೊಬ್ಬರು ಜನತಾ ಪಕ್ಷದ ಅಭ್ಯರ್ಥಿ ಆಯ್ಕೆಯಾಗಲಿದ್ದಾರೆ. ಈ ಎರಡು ಪಕ್ಷಗಳ ಅಭ್ಯರ್ಥಿಗಳನ್ನು ಮತದಾರರು ನೋಡಿದ್ದಾರೆ.
ರಾಜ್ಯದ ಮತದಾರರು ಈ ಬಾರಿ ಚುನಾವಣೆಯಲ್ಲಿ ಎರಡು ಪಕ್ಷಗಳನ್ನು ಧಿಕ್ಕರಿಸಿ ಪ್ರಾದೇಶಿಕತೆಯ ಸೊಗಡನ್ನು ಮೈಗೂಡಿಸಿಕೊಂಡಿದ್ದಾರೆ.
ಗ್ರಾಮೀಣ ಜನರ ಒಡನಾಡಿಯಾದ ನಮ್ಮ ಪಕ್ಷ ಇಂದು ಅಧಿಕಾರಕ್ಕೆ ಬರಬೇಕು ಎನ್ನುವ ದೃಷ್ಟಿಯಿಂದ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗುವ ಕನಸನ್ನ ನಮ್ಮ ಕ್ಷೇತ್ರ ಸೇರಿದಂತೆ ರಾಜ್ಯದ ಜನರ ಸದಾ ಕಾಯುತ್ತಿದ್ದಾರೆ ಎಂದರು.
ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಮಾಡುವ ತಂತ್ರಕ್ಕೆ ನಮ್ಮ ಪಕ್ಷ ಪ್ರತಿ ತಂತ್ರವನ್ನು ರೂಪಿಸಿ, ನಮ್ಮ ಕಾರ್ಯಕರ್ತರೆಲ್ಲರು ಸೇರಿಕೊಂಡು ಮತದಾರರನ್ನು ಕಾಲು ಹಿಡಿದು ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ನಾಡಿನಲ್ಲಿ ಕುಮಾರಣ್ಣನವರು ಅಧಿಕಾರ ಸ್ವೀಕರಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ, ಅವರು ಸಿಎಂ ಆಗುವುದಕ್ಕೆ ಮತದಾರರು ಈ ಕ್ಷೇತ್ರದ ಅಭ್ಯರ್ಥಿಯ ಗೆಲ್ಲಿಸುವ ಮುಖಾಂತರ ಮೇ 13 ಕ್ಕೆ ಸಾಕ್ಷಿಯಾಗಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಪಕ್ಷಗಳು ಎಷ್ಟೇ ಅಬ್ಬರ, ಆರ್ಭಟ ನಡೆಸಿದರೂ ಅದನ್ನು ಕೊಚ್ಚಿ ಹಾಕುವ ಶಕ್ತಿ ಜೆಡಿಎಸ್ ಕಾರ್ಯಕರ್ತರಲ್ಲಿ ಇದೆ. ಆ ಗುಪ್ತ ಗಾಮಿನಿಯಲ್ಲಿ ಅಡಗಿರುವ ಶಕ್ತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಏ.10ರಂದು ಪಂಚರತ್ನ ಯಾತ್ರೆ: ಏಪ್ರಿಲ್ 10ರಂದು ನಗರಕ್ಕೆ ಪಂಚರತ್ನ ಯಾತ್ರೆ ಆಗಮಿಸಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ಯಶೋಧರ ಮನವಿ ಮಾಡಿದರು.
ಪಂಚರತ್ನ ಯಾತ್ರೆ ನಗರದ ರಂಜಿತಾ ಹೋಟೆಲ್ ನಿಂದ ಎಪಿಎಂಸಿ ಆವರಣದವರೆಗೆ ಮೆರವಣಿಗೆ ಮುಗಿದ ನಂತರ ಸಾರ್ವಜನಿಕ ಸಭೆ ನಡೆಯಲಿದೆ. ಈ ಕಾರ್ಯಕ್ರಮ ಇಡೀ ರಾಜ್ಯವೇ ಬೆರಗಾಗುವಂತೆ ಈ ಕ್ಷೇತ್ರ ಸಾಕ್ಷಿಯಾಗಲಿದೆ. ಈ ಸಮಾವೇಶಕ್ಕೆ ರಾಷ್ಟ್ರೀಯ ಪಕ್ಷಗಳ ಅಬ್ಬರ ಸದ್ದು ಅಡಗಲಿದೆ ಎಂದು ತಿಳಿಸಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹನುಮಂತರಾಯ, ಜೆಜಿ ಹಳ್ಳಿ ಮಂಜುನಾಥ್, ಟಿ. ಬಸವರಾಜ್ ಮಾತಾಡಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಎಂ ರವೀಂದ್ರಪ್ಪ, ವಕೀಲ ಕೂಡ್ಲಹಳ್ಳಿ ಶಿವಶಂಕರ್ ರಾಮಮೂರ್ತಿ, ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.