i
ರಘು ಆಚಾರ್-ಪಪ್ಪಿ ಸಂಧಾನ ವಿಫಲ ಬೆನ್ನಲ್ಲೇ ಜೆಡಿಎಸ್ ಸೇರ್ಪಡೆಗೆ ಮುಂದಾದ ರಘು ಆಚಾರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ex mlc jds join
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಮಾಜಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಜೊತೆ ವೀರೇಂದ್ರ ಪಪ್ಪಿ ನಡೆಸಿದ ಸಂಧಾನ ಮಾತುಕತೆ ವಿಫಲವಾದ ಬೆನ್ನಲ್ಲೇ ರಘು ಆಚಾರ್ ಅವರು ಜೆಡಿಎಸ್ ಸೇರ್ಪಡೆ ಆಗುವ ಕುರಿತು ಚಿಂತನೆ ಮಾಡಿದ್ದಾರೆ.
ವೀರೇಂದ್ರ ಪಪ್ಪಿ ಮುಂದೆಯೇ ನಾನು ನಾಮಪತ್ರ ಸಲ್ಲಿಕೆ ಮಾಡುವೆ ಎಂದು ರಘು ಆಚಾರ್ ಸವಾಲ್ ಹಾಕಿದ್ದಲ್ಲದೆ ವೀರೇಂದ್ರ ಪಪ್ಪಿ ಅವರು ಕಾಂಗ್ರೆಸ್ ಅಭ್ಯರ್ಥಿ ಅವರಿಗೂ ಒಳ್ಳೆಯದು ಆಗಲಿ, ನಾವಿಬ್ಬರೂ ಆತ್ಮೀಯ ಸ್ನೇಹಿತರು, ಆದರೆ ಚುನಾವಣೆಯಲ್ಲಿ ನಾವು ಕಟ್ಟಾ ಎದುರಾಳಿಗಳು, ನಾನು ನಾಮಪತ್ರ ಸಲ್ಲಿಕೆ ಮಾಡುವುದು ಪಕ್ಕಾ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಎಲೆಕ್ಷನ್ ಟಿಪ್ಸ್ ಮಾತ್ರ ಪಪ್ಪಿಗೆ ನೀಡಿದ್ದೇನೆ ಎಂದು ತಿಳಿಸಿದರು.
ರಘು ಆಚಾರ್ ಅವರನ್ನು ವೀರೇಂದ್ರ ಪಪ್ಪಿ ಭೇಟಿ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿ, ರಘು ಆಚಾರ್ ರಾಜ್ಯ ಮಟ್ಟದ ನಾಯಕರು, ನಾನು ಹೀಗಾಗಿ ಅವರ ಭೇಟಿಗೆ ಬಂದಿದ್ದೇನೆ, ಅವರು ಕೂಡಾ ಕೆಲವೊಂದು ಸಲಹೆ ಸೂಚನೆ ನೀಡಿದ್ದಾರೆ, ಅವರು ಕೂಡಾ ನನಗೆ ಬೆಂಬಲ ನೀಡುತ್ತಾರೆ, ಇದೇ ರೀತಿಯಲ್ಲಿ ನಾನು ಎಲ್ಲಾ ನಾಯಕರ ಮನೆಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಸೇರ್ಪಡೆ-ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಘು ಆಚಾರ್ ತಮಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬೆಂಬಲಿಗರ ಜೊತೆ ಚರ್ಚೆ ನಡೆಸಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಇದೇ ಏಪ್ರಿಲ್ 14ರಂದು ಜೆಡಿಎಸ್ ಸೇರ್ಪಡೆಗೆ ನಿರ್ಧರಿಸಿದ್ದು, ಎಚ್.ಡಿ. ಕುಮಾರಸ್ವಾಮಿಯವರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಚಿತ್ರದುರ್ಗ ಕ್ಷೇತ್ರದ ಜೆಡಿಎಸ್ ಟಿಕೆಟ್ ಬಹುತೇಕ ಅವರಿಗೇ ಸಿಗುವ ಸಾಧ್ಯತೆ ಇದೆ. ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಘು ಆಚಾರ್, ಕಳೆದ ಒಂದು ವರ್ಷದಿಂದಲೂ ಕ್ಷೇತ್ರದಲ್ಲಿ ಮತದಾರರ ಜೊತೆ ಸಂಪರ್ಕದಲ್ಲಿದ್ದರು. ಆದರೆ ಇತ್ತೀಚೆಗಷ್ಟೇ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದಿರುವ ವೀರೇಂದ್ರ ಅವರಿಗೆ ಟಿಕೆಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ರಘು ಆಚಾರ್ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಮುಖಂಡರ ಭೇಟಿ-ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ, ವಿಧಾನ ಪರಿಷತ್ ಸದಸ್ಯ ಶರವಣ ಮತ್ತಿತರರು ರಘು ಆಚಾರ್ ಅವರ ಮನೆಗೆ ಭೇಟಿ ನೀಡಿ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಈ ಆಹ್ವಾನ ಕೂಡಾ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮೇರೆಗೆ ಮಾಡಲಾಗಿದ್ದು ಮಹತ್ವ ರಾಜಕೀಯ ಬೆಳವಣಿಗೆಗಳು ನಡೆದಿದೆ. ಇದರ ಮಧ್ಯ ರಘು ಆಚಾರ್ ಅವರು ಜೆಡಿಎಸ್ ಮುಖಂಡರಿಗೆ ಊಟ ಮಾಡಿಸಿ ಕಳುಹಿಸಿದ್ದು ಕೂಡಾ ಶುಭ ಸೂಚನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಮಾಜಿ ವಿಧಾನ ಪರಿಷತ್ ರಘು ಆಚಾರ್ ಅವರು ಈಗಾಗಲೇ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರ ನಡೆ ಅತ್ಯಂತ ನಿಗೂಢವಾಗಿದ್ದು ಅವರು ಚುನಾವಣೆಯಲ್ಲೇ ಸ್ಪರ್ಧಿಸುವ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ ಎನ್ನಲಾಗುತ್ತಿದೆ. ಇದರ ಮಧ್ಯ ಸೌಭಾಗ್ಯ ಬಸವರಾಜನ್ ಅವರು ಶುಕ್ರವಾರ ಶಿವಮೊಗ್ಗಕ್ಕೆ ತೆರಳಿದ್ದು ಅಲ್ಲಿ ಯಾರನ್ನು ಭೇಟಿ ಮಾಡಲಿದ್ದಾರೆ ಎನ್ನುವ ಮಾತುಗಳು ಚರ್ಚೆಯಲ್ಲಿವೆ. ಹಾಗಾಗಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಚಿತ್ರಣ ಇನ್ನೂ ಎರಡು ಮೂರು ದಿನಗಳು ಏನೂ ಹೇಳಲು ಸಾಧ್ಯವಿಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.