i
ಗೊಲ್ಲ ಜಾತಿಯ ಪೊಲೀಸರು, ಶಿಕ್ಷಕರ ವಿರುದ್ಧ ಕಾಂಗ್ರೆಸ್ ದೂರು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಗೊಲ್ಲ ಜನಾಂಗದ ಪೊಲೀಸ್ ಪೇದೆ ಮೇಲೆ ದೂರು ನೀಡಿ ಅವರ ವರ್ಗಾವಣೆಗೆ ಕಾರಣವಾದ ಕಾಂಗ್ರೆಸ್ ತನ್ನ ಸೋಲನ್ನು ಇನ್ನೊಬ್ಬರ ಹೆಗಲ ಮೇಲೆ ಹಾಕುವ ಪ್ರಯತ್ನ ಎಂಬುದು ಸಾಬೀತಾಗಿದೆ ಎಂದು ನಗರಸಭೆಯ ನಾಮ ನಿರ್ದೇಶಿತ ಸದಸ್ಯ ಕೇಶವಮೂರ್ತಿ ಆಗ್ರಹಿಸಿದ್ದಾರೆ.
ನಗರ ಹಾಗೂ ಗ್ರಾಮಾಂತರ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೊಲ್ಲ ಜನಾಂಗದ ಪೊಲೀಸ್ ಪೇದೆಗಳಾದ ತಿಮ್ಮರಾಯಪ್ಪ, ಮೌನೇಶ್, ಶಿವಮೂರ್ತಿ, ತಿಮ್ಮೇಶ್ ಇವರುಗಳ ವಿರುದ್ಧ ಕಾಂಗ್ರೆಸ್ ಪಕ್ಷ ಆಧಾರ ರಹಿತ ಆರೋಪ ಮಾಡಿ, ವರ್ಗಾವಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರಿಂದಾಗಿ ಸದರಿ ಪೊಲೀಸರ ವರ್ಗಾವಣೆಯಾಗಿದೆ, ಇದು ಸುಧಾಕರ್ ಗೊಲ್ಲ ಜನಾಂಗದವರ ಮೇಲೆ ತೋರಿಸಿರುವ ಕಾಳಜಿ ಅನಾವರಣ ಆಗಿದೆ, ಕಾಂಗ್ರೆಸ್ ಅಭ್ಯರ್ಥಿ ಸುಧಾಕರ್ ಗೊಲ್ಲರಹಟ್ಟಿಗೆ ತೆರಳಿ ಪ್ರಚಾರದ ಭಾಷಣದ ವೇಳೆ ನಾನು ಕಾಡುಗೊಲ್ಲರ ವಿರೋಧಿಯಲ್ಲ, ಸದಾ ಅವರ ಪರವಾಗಿ ಇರುತ್ತೇವೆ, ಎಂದಿರುವ ಅವರ ಈ ಡೋಂಗಿ ರಾಜಕಾರಣ ಕಾಡುಗೊಲ್ಲರನ್ನು ವರ್ಗಾವಣೆ ಮಾಡುವಲ್ಲಿ ಪ್ರದರ್ಶಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸುಧಾಕರ್ ಅವರ ಬೆಂಬಲಿಗರು ಮಟ್ಕಾ, ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದು ಇಂತವರನ್ನು ಪೊಲೀಸರು ಬಂಧಿಸಿದ್ದಕ್ಕೆ ಕಾಡುಗೊಲ್ಲ ಪೊಲೀಸರು ಕಾರಣವೇ? ಎಂದು ಕೇಶವಮೂರ್ತಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಥವಾ ಆ ಪಕ್ಷದ ಅಭ್ಯರ್ಥಿಗೆ ತಾಕತ್ತು ಇದ್ದರೆ ಅವರು ಟಾರ್ಗೆಟ್ ಮಾಡಿರುವ ಯಾವುದೇ ಸಾಕ್ಷಾಧಾರಗಳಿಲ್ಲದ ಪೊಲೀಸರ ಮೇಲೆ ನೀಡಿದ ದೂರಿನಂತೆ ಕುಮಾರಸ್ವಾಮಿ, ದೇವೇಗೌಡರ ಜಾತಿಗೆ ಸೇರಿದವರನ್ನು ವರ್ಗಾವಣೆಗೆ ದೂರು ನೀಡಿ ಒತ್ತಡ ಹೇರುವರೇ ಎಂದು ಅವರು ಪ್ರಶ್ನಿಸಿದ್ದಾರೆ. ಫಲಿತಾಂಶ ಬರುವ ಮುನ್ನವೇ ಸೋಲನ್ನು ಕೇವಲ ಪೊಲೀಸರ ಮೇಲೆ ಹೇರದೇ ಚುನಾವಣೆ ಕಣದಲ್ಲಿ ಸುಧಾಕರ್ ತಮ್ಮ ಸಾಮರ್ಥ್ಯ ತೋರಿಸಿ ಗೆದ್ದು ಬರಲಿ ಎಂದು ಬಿಜೆಪಿ ಮುಖಂಡ ಕೇಶವಮೂರ್ತಿ ಆಗ್ರಹಿಸಿದ್ದಾರೆ.