i
ಇದು ನನ್ನ ಕೊನೆ ಎಲೆಕ್ಷನ್, ಶಿರಾ ಜಿಲ್ಲಾ ಕೇಂದ್ರವಾಗಿಸುವುದು ನನ್ನ ಸಂಕಲ್ಪ-ಟಿಬಿಜೆ…
ಚಂದ್ರವಳ್ಳಿ ನ್ಯೂಸ್, ಶಿರಾ:
ಇದು ನನ್ನ ಕೊನೆ ಚುನಾವಣೆ, ಆಗಿರುವ ಸಣ್ಣಪುಟ್ಟ ತಪ್ಪುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಡಿ, ನನ್ನ ಜಯಕ್ಕಾಗಿ ಶ್ರಮಿಸಬೇಕು, ನಾನು ಇಡೀ ಕ್ಷೇತ್ರದ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲುತ್ತೇನೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಭರವಸೆ ನೀಡಿದರು.
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಉದ್ದರಾಮನಹಳ್ಳಿ ಗೇಟ್ ಬಳಿ ತಾಲೂಕು ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಹೆಂದೊರೆ, ನಾದೂರು, ಹೊಸಹಳ್ಳಿ, ಮೇಲ್ಕುಂಟೆ ಮತ್ತು ಬಂದಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭದ್ರಾ-ಎತ್ತಿನಹೊಳೆ ಸೇರಿದಂತೆ ಮತ್ತಿತರ ಯೋಜನೆಗಳಲ್ಲಿ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದೇನೆ, ಶಿರಾ ಕೇಂದ್ರವನ್ನು ಜಿಲ್ಲಾ ಕೇಂದ್ರ ಮಾಡುವುದು ಬಾಕಿ ಇದ್ದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಶಿರಾ ನಗರವನ್ನು ಜಿಲ್ಲಾ ಕೇಂದ್ರವಾಗಿಸುವುದು ನನ್ನ ಸಂಕಲ್ಪ ಆ ನಿಟ್ಟಿನಲ್ಲಿ ನನ್ನ ಅಧಿಕಾರಾವಧಿಯಲ್ಲಿ 3250 ಕೋಟಿ ರೂ. ಅನುದಾನ ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಮಾಡಿದ್ದೇನೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಮಾಡಬೇಕು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯ. ಬೆಲೆ ಏರಿಕೆ ಮಾಡುವ ಮೂಲಕ ಬಡ ಕುಟುಂಬಗಳಿಗೆ ಸಂಕಷ್ಟತಂದೊಡ್ಡಿರುವ ಭ್ರಷ್ಟಬಿಜೆಪಿ ಸರಕಾರ ತೊಲಗಿಸುವ ಸಂಕಲ್ಪ ಪ್ರತಿಯೊಬ್ಬ ಮತದಾರರು ಮಾಡಬೇಕಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಕುಟುಂಬದ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತ ಜೊತೆಗೆ ಗೃಹಲಕ್ಷ್ಮೀ ಯೋಜನೆ ಇಡೀ ಕುಟುಂಬ ನಿರ್ವಹಣೆ ಮಾಡುವ ಮಹಿಳೆಗೆ 2 ಸಾವಿರ ರೂಪಾಯಿ ಮಾಸಿಕ ವೇತನ ನೀಡುವ ಮೂಲಕ ಬಡ ಕುಟುಂಬಗಳ ಆರ್ಥಿಕ ಸುಭದ್ರತೆಗೆ ಸಂಕಲ್ಪ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ನೀಡುವ ಮೂಲಕ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನ ಮೇಲಿದೆ ಎಂದರು.
ಮಾಜಿ ಜಿ.ಪಂ ಸದಸ್ಯ ಸಿ.ಆರ್.ಉಮೇಶ್ ಮಾತನಾಡಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಏಕೆಂದರೆ ಅವರು ನನಗೆ ಜಡಿಎಸ್ನಲ್ಲಿ ಟಿಕೇಟ್ ನೀಡಿದ್ದರೆ ನನ್ನ ರಾಜಕೀಯ ಗುರುಗಳಾದ ಟಿ.ಬಿ.ಜಯಚಂದ್ರ ಅವರ ಸೇವೆ ಮಾಡಲು ಆಗುತ್ತಿರಲಿಲ್ಲ. 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಮುಂದಿನ ದಿನಗಳಲ್ಲಿ ನಮಗೆ ಟಿಕೆಟ್ ಕೊಡುವುದಾಗಿ ಹೇಳಿದ್ದರು. ಆದರೆ ಟಿಕೇಟ್ ನೀಡಲಿಲ್ಲ. ಅದರಿಂದ ನನಗೆ ಬೇಸರವಿಲ್ಲ. ಟಿಬಿ ಜಯಚಂದ್ರ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ ಮತ್ತೊಮ್ಮೆ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು.
ಕಾಂಗ್ರೆಸ್ ಸೇರ್ಪಡೆಗೊಂಡು ಮಾತನಾಡಿದ ಬೆಸ್ಕಾಂ ನಿವೃತ್ತ ತಾಂತ್ರಿಕ ನಿರ್ದೇಶಕ ಹುಲಿಕುಂಟೆ ಶ್ರೀರಾಮೇಗೌಡ ಮದಲೂರು ಕೆರೆಗೆ ಕಾಲುವೆ ನಿರ್ಮಾಣ ಮಾಡಿ ಹೇಮಾವತಿ ನೀರು ಹರಿಸುವ ಮೂಲಕ ರೈತರ ಬದುಕನ್ನು ಹಸನು ಮಾಡಿ, ಶಿರಾ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಮಾಡಿದ ಮಾಜಿ ಸಚಿವ ಜಯಚಂದ್ರ ರವರ ಅಭಿವೃದ್ಧಿ ಕಾಮಗಾರಿಗಳು ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದೇನೆ. ಟಿ.ಬಿ.ಜಯಚಂದ್ರ ಅವರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಆರ್ ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಗೌಡ, ಮುಖಂಡ ಗುಳಿಗೇನಹಳ್ಳಿ ನಾಗರಾಜ್, ಶಶಿಧರ್ ಗೌಡ, ಭೂವನಹಳ್ಳಿ ಸತ್ಯನಾರಾಯಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿಲ್ಲಾ ಜಿಎಸ್ ರವಿ, ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರೂಪೇಶ್ ಕೃಷ್ಣಯ್ಯ, ಲಿಂಗದಹಳ್ಳಿ ಸುಧಾಕರ್ ಗೌಡ, ಹೊಸಹಳ್ಳಿ ರಾಮಚಂದ್ರಪ್ಪ, ಬರಗೂರು ಮುದ್ದುಕೃಷ್ಣೇಗೌಡ, ಸಿಗಲಹಳ್ಳಿ ವಿರೇಂದ್ರ, ಶಿವಕುಮಾರ್ ಚಿನ್ನಿ, ಗಿರೀಶ್ ಎಚ್.ಎಲ್, ವೀರಭೊಮ್ಮನಹಳ್ಳಿ ಜಯಣ್ಣ, ಆರ್.ಕೆ.ಮಾರುತಿ ರಂಗಾಪುರ ಸೇರಿದಂತೆ ಹಲವರು ಹಾಜರಿದ್ದರು.