i
ಹಿರಿಯೂರು ಬಿಜೆಪಿಯ ಮತ್ತೊಂದು ವಿಕೆಟ್ ಪತನ, ಜೆಡಿಎಸ್ ನತ್ತ ಮುಖ ಮಾಡಿದ ದ್ಯಾಮೇಗೌಡ!?…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಾಲಿ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಬಲಗೈ ಬಂಟ, ಹಿರಿಯೂರು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮಾಜಿ ಪ್ರಭಾರ ಅಧ್ಯಕ್ಷ, ಮಾಜಿ ಉಪಾಧ್ಯಕ್ಷ ಕೆ.ದ್ಯಾಮೇಗೌಡ ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಬಿಜೆಪಿ ಗರ್ಭಗುಡಿಯ ತತ್ವ, ಸಿದ್ಧಾಂತಗಳಿಂದ ಇರಿಸು ಮುರಿಸು ಹೊಂದು ಬಿಜೆಪಿ ಪಕ್ಷ ಹಾಗೂ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಂದ ಅಂತರ ಕಾಯ್ದುಕೊಂಡಿದ್ದ ದ್ಯಾಮಣ್ಣನವರು ತುರ್ತಾಗಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಜೆಡಿಎಸ್ ಪಕ್ಷ ಸೇರಲಿದ್ದಾರೆ ಎನ್ನಲಾಗುತ್ತಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಇಡೀ ಐಮಂಗಲ ಹೋಬಳಿಯ ಹೊಣೆ ಹೊತ್ತಿದ್ದಲ್ಲದೆ ಪೂರ್ಣಿಮಾ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚುನಾವಣೆ ಎಂದರೆ ಮೈಕೊಡವಿ ಎದ್ದೇಳುವ ಪಕ್ಷ ನಿಷ್ಠೆಯ ಕಟ್ಟಾಳು ದ್ಯಾಮಣ್ಣನವರ ನಿರೀಕ್ಷೆಯಂತೆ ಪಕ್ಷ ನಡೆಸಿಕೊಳ್ಳಲಿಲ್ಲ. ಇದರ ಜೊತೆಯಲ್ಲಿ ಶಾಸಕಿ ಪೂರ್ಣಿಮಾ ಮತ್ತು ಪತಿ ಡಿ.ಟಿ.ಶ್ರೀನಿವಾಸ್ ಅವರು ಕೂಡಾ ಇವರಿಗೆ ಸ್ಪಂದಿಸಲಿಲ್ಲ ಎನ್ನುವ ಕೊರಗು ಅವರಿಗಿತ್ತು ಎನ್ನಲಾಗಿದೆ.
ಇದರಿಂದ ಬೇಸರಗೊಂಡಿದ್ದ ಕೆ.ದ್ಯಾಮೇಗೌಡ ಕಳೆದ ಐದಾರು ದಿನಗಳಿಂದೆ ಆಪ್ತರ, ಬೆಂಬಲಿಗರ, ಹಿತೈಷಿಗಳ ಸಭೆ ಕರೆದು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಚಿಂತನೆ ಮಾಡಿದ್ದರು. ಅಂದೇ ಮಾಜಿ ಸಚಿವ ಸುಧಾಕರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದರು. ಇದಕ್ಕಾಗಿ ಎರಡು ಸಾವಿರಕ್ಕೂ ಹೆಟ್ಟಿನ ಆಪ್ತರು, ಬೆಂಗಲಿಗರು, ಹಿತೈಷಿಗಳಿಗಾಗಿ ಬಾಡೂಟದ ವ್ಯವಸ್ಥೆ ಮಾಡಿದ್ದು ಬಾಡೂಟದ ನಂತರ ಸುಧಾಕರ್ ಸಮ್ಮುಖದಲ್ಲಿ ಸುಮಾರು 2 ಸಾವಿರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆದರೆ, ದ್ಯಾಮಣ್ಣ ಕಾಂಗ್ರೆಸ್ ಸೇರುವ ವಿಷಯ ತಿಳಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ದೂರವಾಣಿ ಕರೆ ಮಾಡಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸೇರಬೇಡ, ನಾನು ಬಂದು ನಿಮ್ಮ ಜೊತೆ ಮಾತನಾಡುವ ತನಕ ದುಡಿಕಿ ನಿರ್ಧಾರ ಮಾಡಬೇಡ ಎಂದು ಮನವಿ ಮಾಡಿ ಕಾಂಗ್ರೆಸ್ ಪಕ್ಷ ಸೇರ್ಪಡೆಯನ್ನು ತಾತ್ಕಾಲಿಕವಾಗಿ ಮುಂದೂಡಿಸಿದ್ದರು ಎನ್ನುವ ಮಾತುಗಳು ಅವರ ಆಪ್ತ ವಲಯದಿಂದ ಕೇಳಿ ಬರುತ್ತಿವೆ.
ದ್ಯಾಮಣ್ಣನವರು ಕಾಂಗ್ರೆಸ್ ಪಕ್ಷಕ್ಕೆ ಹೋಗಲಿದ್ದಾರೆನ್ನುವ ವಿಷಯ ತಿಳಿಯುತ್ತಿದ್ದಂತೆ ಶಾಸಕಿ ಪೂರ್ಣಿಮಾ ಮತ್ತು ಪತಿ ಶ್ರೀನಿವಾಸ್ ಅವರು ಬಿಜೆಪಿಯಲ್ಲೇ ಇದ್ದು ಪಕ್ಷ ಮತ್ತು ತಮಗಾಗಿ ಚುನಾವಣೆ ಮಾಡುವಂತೆ ಕೋರಿಕೊಂಡರೂ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುವುದನ್ನು ಮುಂದೂಡುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಸುಧಾಕರ್ ಕೋವೇರಹಟ್ಟಿಗೆ ದೌಡಾಯಿಸಿ ಬಂದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಬೇಕು. 2013ರ ಚುನಾವಣೆಯಲ್ಲಿ ನಮ್ಮ ಜೊತೆ ಇದ್ದುದ್ದರಿಂದಾಗಿ ಅಂದು ಗೆಲುವು ಪಡೆಯಲು ಅನುಕೂಲವಾಗಿತ್ತು. 2013ರಲ್ಲಿದ್ದ ಬಿಗಿತನ ಈ ಚುನಾವಣೆಯಲ್ಲಿ ನನಗೆ ಇಲ್ಲವಾದರೂ, ನಿಮ್ಮಂತವರು ನಮ್ಮ ಜೊತೆ ಇರಬೇಕೆಂದು ಇನ್ನೊಷ್ಟು ಮತ್ತಷ್ಟು ಮನವಿ ಮಾಡಿಕೊಂಡರೂ ಕಾಂಗ್ರೆಸ್ ಸೇರ್ಪಡೆಗೆ ಅವರು ಒಲವು ತೋರಲಿಲ್ಲ. ಅಲ್ಲದೆ ಬಿಜೆಪಿ ಸಂಸದ ನಾರಾಯಣಸ್ವಾಮಿ ನನ್ನನ್ನೂ ಕಟ್ಟಿ ಹಾಕಿದ್ದು ಒಂದಿಷ್ಟು ಸಮಯ ಕೊಡಿ, ಮುಂದೆ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗೋಣ ಎಂದು ದ್ಯಾಮಣ್ಣ ತಿಳಿಸಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
2013ರ ಚುನಾವಣೆಯಲ್ಲಿ ಸುಧಾಕರ್, 2018ರ ಚುನಾವಣೆಯಲ್ಲಿ ಪೂರ್ಣಿಮಾ ಪರ ಕೆಲಸ ಮಾಡಿ ಇಬ್ಬರ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದ ದ್ಯಾಮೇಗೌಡ ಏಕೆ ಎರಡು ರಾಷ್ಟ್ರೀಯ ಪಕ್ಷಗಳಿಂದ ದೂರ ಆಗುತ್ತಿದ್ದಾರೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಲಭ್ಯ ಮಾಹಿತಿಯ ಪ್ರಕಾರ, ತಮ್ಮ ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಸಂಪುಟಕ್ಕೆ ತಂದು ಕೇಂದ್ರಕ್ಕೆ ಶಿಫಾರಸ್ಸು ಮಾಡುವಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಮೂಗಿಗೆ ತುಪ್ಪು ಸವರಿದ್ದರಿಂದ ದ್ಯಾಮಣ್ಣನವರು ಮನನೊಂದಿದ್ದರು ಎನ್ನಲಾಗಿದೆ. ಅಲ್ಲದೆ ಕೇಂದ್ರ ಸಚಿವ ನಾರಾಯಣಸ್ವಾಮಿ ಕೂಡಾ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಬಂದ ಕೂಡಲೇ ಕೇಂದ್ರದ ಒಬಿಸಿ ಮೀಸಲಾತಿಯನ್ನು ಕುಂಚಿಟಿಗ ಜನಾಂಗಕ್ಕೆ ಕೊಡಿಸುವ ಹೊಣೆಗಾರಿಕೆ ನನ್ನದು, ನೀವು ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಿಸಿ ಎಂದು ತಾಕೀತು ಮಾಡಿದ್ದು ಯಾವುದೇ ಕೆಲಸ ಆಗದಿದ್ದರಿಂದ ದ್ಯಾಮಣ್ಣ ಬೇಸರಗೊಂಡಿದ್ದರು ಎನ್ನಲಾಗಿದೆ.
ಆದರೆ ಪತ್ರಿಕೆಗೆ ಸಿಕ್ಕಿರುವ ಲಭ್ಯ ಮಾಹಿತಿ ಪ್ರಕಾರ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಚಿತ್ರದುರ್ಗ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ ಅವರು ದ್ಯಾಮಣ್ಣನವರಿಗೆ ಕರೆ ಮಾಡಿ, ಕುಮಾರಣ್ಣನವರು ನೂರಷ್ಟು ಸಿಎಂ ಆಗಲಿದ್ದಾರೆ. ಇದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ರೈತ ಪರವಾದ ಆಡಳಿತವನ್ನು ಸದಾ ನೀಡುತ್ತಿರುವ ಜೆಡಿಎಸ್ ಪಕ್ಷಕ್ಕೆ ನಿಮ್ಮ ಸೇವೆ ಅಗತ್ಯವಾಗಿದೆ. ಹಾಗಾಗಿ ನೀವು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಹಿರಿಯೂರು ಕ್ಷೇತ್ರದ ಅಭ್ಯರ್ಥಿ ಎಂ.ರವೀಂದ್ರಪ್ಪ ಇವರನ್ನು ಗೆಲ್ಲಿಸಿಕೊಳ್ಳಬೇಕೆಂದು ಮನವಿ ಮಾಡಿದ್ದರು ಎನ್ನುವ ಮಾತು ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಜೆಡಿಎಸ್ ನಾಯಕರು ಪೋನ್ ಮಾಡಿ ಪಕ್ಷ ಸೇರ್ಪಡೆ ಆಗುವಂತೆ ಮನವಿ ಮಾಡಿರುವುದು ನಿಜವೇ ಆಗಿದ್ದರೆ, ಜೆಡಿಎಸ್ ನಾಯಕರ ಕೋರಿಕೆಗೆ ಬೆಲೆ ಕೊಟ್ಟು ದ್ಯಾಮಣ್ಣ ಜೆಡಿಎಸ್ ಪಕ್ಷ ಸೇರ್ಪಡೆಯಾದರೆ ಜೆಡಿಎಸ್ ಪಕ್ಷಕ್ಕೆ ದೊಡ್ಡ ಶಕ್ತಿ ಆಗಲಿದೆ. ಅಷ್ಟೇ ಅಲ್ಲ ಐಮಂಗಲ ಹೋಬಳಿ, ಹಿರಿಯೂರು ಕಸಬಾ ಹೋಬಳಿಯಲ್ಲಿ ಹೆಚ್ಚಿನ ಹಿಡಿತ ಹೊಂದಿರುವ ದ್ಯಾಮಣ್ಣನವರ ಜೆಡಿಎಸ್ ಎಂಟ್ರಿಯಿಂದ ಈ ಭಾಗದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಅದರಲ್ಲೂ ಐಮಂಗಲ ಹೋಬಳಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಬೆಂಬಲವೂ ಇಲ್ಲ, ಇದನ್ನೆಲ್ಲ ದೂರ ಮಾಡಿ ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಸಮ ಬಲದ ಹೋರಾಟ ಮಾಡಲು ದ್ಯಾಮಣ್ಣ ದೊಡ್ಡ ಶಕ್ತಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಈ ಎಲ್ಲ ಅಂತೆ ಕಂತೆಗಳು ನಿಜವಾದರೇ ಖಂಡಿತ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳ ಮಧ್ಯ ತೀವ್ರ ಸೆಣಸಾಟ ನಡೆಯಲಿದ್ದು ತ್ರಿಕೋನ ಸ್ಪರ್ಧೆ ಉಂಟಾಗಲಿದೆ. ಐಮಂಗಲ ಹೋಬಳಿಯಲ್ಲಿ ಸಮ ಬಲದ ಬೆಂಬಲ ಸಿಕ್ಕರೆ ಜೆಡಿಎಸ್ ಗೆಲುವಿಗೆ ಮೂರು ಮೆಟ್ಟಿಲು ಮಾತ್ರ ಉಳಿಯಲಿದೆ.