i
- ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲ ಟಿಕೆಟ್ ಆಕಾಂಕ್ಷಿಗಳು ದುಡಿದು ಎಚ್ಡಿಕೆ ಸಿಎಂ ಆಗಲು ಕೊಡುಗೆ ನೀಡುತ್ತೇವೆ- ಜಯಣ್ಣ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು: jds party jayanna
ನಾನು ಸೇರಿದಂತೆ ನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದೇವು, ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ, ಹಾಗಾಗಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿ ಎಂಬ ಉದ್ದೇಶದಿಂದ ನಾಲ್ಕು ಮಂದಿ ಟಿಕೆಟ್ ತ್ಯಾಗ ಮಾಡಿದ್ದೇವೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ ಜಯಣ್ಣ ಹೇಳಿದರು.
ನಗರದ ಹುಳಿಯಾರು ರಸ್ತೆಯ ಎಂ. ಜಯಣ್ಣನವರ ತೋಟದ ಮನೆಯಲ್ಲಿ ಕರೆದಿದ್ದ ಕಾರ್ಯಕರ್ತರ ಸಭೆ ಮತ್ತು ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ನಾನು, ಶಿವಪ್ರಸಾದ್ ಗೌಡ ಇಬ್ಬರೂ ಪಕ್ಷದ ಟಿಕೆಟ್ ಆಕಾoಕ್ಷಿಗಳಾಗಿದ್ದೆವು. ಆದರೆ ಇದೀಗ ರವೀಂದ್ರಪ್ಪನವರು ಅಧಿಕೃತ ಅಭ್ಯರ್ಥಿಯಾದ ಮೇಲೆ ನಾವೆಲ್ಲಾ ಪಕ್ಷ ಗೆಲ್ಲಿಸುವ ಉದ್ದೇಶದಿಂದ ಒಗ್ಗೂಡಿ ಕೆಲಸ ಮಾಡುತ್ತೇವೆ. ನಮ್ಮೆಲ್ಲಾ ಕಾರ್ಯಕರ್ತರನ್ನು, ಮುಖಂಡರನ್ನು ಕರೆದು ಮಾತಾಡಿದ್ದೇವೆ. ಈ ತಾಲೂಕಿನಲ್ಲಿ ಪಕ್ಷಕ್ಕೆ ಒಂದು ನೆಲೆ, ಬೆಲೆ ಇದೆ. ಇಲ್ಲಿ ಗೆದ್ದವರ ಪಕ್ಷ ರಾಜ್ಯದಲ್ಲೂ ಅಧಿಕಾರ ಹಿಡಿಯುವುದು ಮಾಮೂಲಾಗಿದೆ. ಹಾಗಾಗಿ ಇಲ್ಲಿ ಪಕ್ಷ ಗೆಲ್ಲಲೇಬೇಕು. ಪಕ್ಷ ಬಿಟ್ಟು ಹೋದ ಎಲ್ಲ ವರ್ಗದವರನ್ನು ಮತ್ತೆ ಕರೆ ತರುತ್ತೇವೆ. ಮೊದಲು ನಮ್ಮ ಸಮಾಜದ ಮುಖಂಡರನ್ನು ಒಗ್ಗೂಡಿಸಿ ಮಾಡು ಇಲ್ಲವೇ ಮಡಿ ರೀತಿಯಲ್ಲಿ ಹೋರಾಟ ಮಾಡಿ ನಮ್ಮ ಅಭ್ಯರ್ಥಿ ರವೀಂದ್ರಪ್ಪನವರನ್ನು ಗೆಲ್ಲಿಸುತ್ತೇವೆ. ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ನಮ್ಮೆಲ್ಲರ ಗುರಿಯಗಬೇಕೆಂದು ಅವರು ಕರೆ ನೀಡಿದರು.
ಏ.19 ರಂದು ಬುಧವಾರ ಸಾವಿರಾರು ನಿಷ್ಠಾವಂತ ಕಾರ್ಯಕರ್ತರು, ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಾಗುವುದು. ಈ ಬಾರಿ ನಮ್ಮ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಮಾತನಾಡಿ, ನನಗೆ ಇದು ಸುದಿನ. ನಮ್ಮ ಪಕ್ಷದ ಘಟಾನುಘಟಿ ಮುಖಂಡರೆಲ್ಲಾ ಮುನಿಸು ಮರೆತು ಒಂದಾಗಿದ್ದಾರೆ. ಇವರೆಲ್ಲಾ ನನ್ನ ಬೆಂಬಲಕ್ಕೆ ನಿಂತದ್ದು ನನಗೆ ಆನೆ ಬಲ ಬಂದಂತಾಗಿದೆ. ಪಕ್ಷ ಗೆಲ್ಲುವ ಸೂಚನೆ ಸಿಗುತ್ತಿದೆ. ತಾಲೂಕಲ್ಲಿ ಪಕ್ಷ ಗೆದ್ದರೆ ಅದು ನನ್ನೊಬ್ಬನ ಗೆಲುವಾಗಲಾರದು. ಎಲ್ಲಾ ಮುಖಂಡರ, ಕಾರ್ಯಕರ್ತರ ಗೆಲುವಾಗಲಿದೆ. ನಮ್ಮೆಲ್ಲರ ಗುರಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಯಾವುದಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ. ಉಳಿದ ಪಕ್ಷಗಳಿಗಿಂತ ನಾವು ಯಾವುದರಲ್ಲೂ ಕಡಿಮೆ ಇಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಶಿವಪ್ರಸಾದ್ ಗೌಡ, ದೊಡ್ಡಯ್ಯ, ರಾಮಸ್ವಾಮಿ, ಎಂ ಡಿ ರವಿ, ಮಂಜುನಾಥ್, ಶಿವಣ್ಣ, ಹೆಚ್.ಆರ್.ತಿಮ್ಮಯ್ಯ ಮುಂತಾದವರು ಹಾಜರಿದ್ದರು.