i
ರೈತ, ಮಹಿಳಾ ಸಂಘಗಳ ಸಾಲ ಮನ್ನಾ, ಗ್ಯಾಸ್ ಸಿಲಿಂಡರ್ ಉಚಿತ, 5 ಸಾವಿರ ಪಿಂಚಣಿ ನೀಡುವ ಜೆಡಿಎಸ್ ಪಕ್ಷಕ್ಕೆ ನಿಮ್ಮ ಮತ ಹಾಕಿ….
ಚಂದ್ರವಳ್ಳಿ ನ್ಯೂಸ್, ಧರ್ಮಪುರ:
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸದಾ ರೈತರು, ಬಡವರ ಪರವಾದ ಆಡಳಿತ ಮಾಡಿದ್ದಾರೆ. ರೈತರ ಮತ್ತು ಮಹಿಳಾ ಸಂಘಗಳ ಸಂಪೂರ್ಣ ಸಾಲ ಮನ್ನಾ, ಪ್ರತಿ ವರ್ಷ 5 ಗ್ಯಾಸ್ ಸಿಲಿಂಡರ್ ಉಚಿತ, ವಯೋವೃದ್ಧರಿಗೆ ಪ್ರತಿ ತಿಂಗಳು 5 ಸಾವಿರ ಪಿಂಚಣಿ, ವಿಧವೆಯರು ವಿಕಲಚೇತನರಿಗೆ ಎರಡೂವರೆ ಸಾವಿರ ಸೇರಿದಂತೆ ಹಲವು ಯೋಜನೆಗಳನ್ನು ಬಡವರಿಗಾಗಿ ನೀಡುವ ಜೆಡಿಎಸ್ ಪಕ್ಷಕ್ಕೆ ನಿಮ್ಮ ಮತ ಹಾಕಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನನ್ನನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಮನವಿ ಮಾಡಿದರು.
ಹಿರಿಯೂರು ತಾಲೂಕಿನ ಧರ್ಮಪುರದಲ್ಲಿ ಜೆಡಿಎಸ್ ಪಕ್ಷದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿವೆ. ಒಂದು ಪಕ್ಷ ಶೇ.10ರಷ್ಟು ಭ್ರಷ್ಟ ಪಕ್ಷವಾದರೆ ಮತ್ತೊಂದು ಶೇ,40ರಷ್ಟು ಭ್ರಷ್ಟ ಪಕ್ಷವಾಗಿವೆ. ಎರಡು ಪಕ್ಷಗಳ ಭಾರೀ ಭ್ರಷ್ಟಾಚಾರದಿಂದಾಗಿ ದೇಶದ, ರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ಕುಸಿದಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನಿಂದ ಮಾತ್ರ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ, ಜೆಡಿಎಸ್ ಪಕ್ಷ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬಡವರ ಕಲ್ಯಾಣಕ್ಕಾಗಿ ಅನೇಕ ಜನಪರ ಕಾರ್ಯಕ್ರಮಗಳು ಜಾರಿಯಾದವು. ಸಾಲ ಮನ್ನಾ ಮಾಡುವುದರ ಮೂಲಕ ಜನತೆಯ ಆಶೋತ್ತರಗಳನ್ನು ಈಡೇರಿಸಿದರು. ಈಗಲೂ ಜನರ ಕಲ್ಯಾಣಕ್ಕಾಗಿ ಪಂಚರತ್ನ ಯೋಜನೆಗಳ ಪ್ರಣಾಳಿಕೆಯನ್ನು ಹೊಂದಿದ್ದು, ಜೆಡಿಎಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಂತಾಗಲು ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಹಿರಿಯೂರು ಜೆಡಿಎಸ್ ಭದ್ರ ಕೋಟೆಯಾಗಿದ್ದು ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಬ್ಬರ ಆರ್ಭಟಕ್ಕೆ ಎದೆಗುಂದಬೇಕಿಲ್ಲ, ಆ ಎರಡು ಪಕ್ಷಗಳು ಕ್ಷೇತ್ರದ ಅಭಿವೃದ್ಧಿ ಮರೆತಿವೆ. ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ವಾಣಿ ಸಕ್ಕರೆ ಕಾರ್ಖಾನೆ ಪುನರಾರಂಭವಾಗಬೇಕು. ವಾಣಿ ವಿಲಾಸ ಸಾಗರಕ್ಕೆ ಐದು ಟಿಎಂಸಿ ನೀರು ಸಂಗ್ರಹವಾಗಬೇಕು. ಜಿಲ್ಲೆಯಲ್ಲಿ ಕನಿಷ್ಟ ಒಂದು ಲಕ್ಷ ಉದ್ಯೋಗ ಸೃಷ್ಠಿಯಾಗಲು ಗಾರ್ಮೆಂಟ್ಸ್ ಮತ್ತು ಕೌಶಲ್ಯಾಧಾರಿತ ತರಬೇತಿ ಸಂಸ್ಥೆಗಳು ಸ್ಥಾಪನೆಯಾಗಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಧರ್ಮಪುರ ತಾಲ್ಲೂಕು ಕೇಂದ್ರ: ಬಹುತೇಕ ಸಮಿತಿಗಳು ಧರ್ಮಪುರ ಕೇಂದ್ರವನ್ನು ತಾಲೂಕು ಕೇಂದ್ರ ಮಾಡುವಂತೆ ಶಿಫಾರಸ್ಸು ಮಾಡಿವೆ. ಆದರೂ ಇಚ್ಛಾಶಕ್ತಿ ಇಲ್ಲದ ಕಾರಣ ಕೈ ತಪ್ಪಿ ಹೋಗಿದೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಧರ್ಮಪುರ ನೂತನ ತಾಲ್ಲೂಕು ರಚನೆ ಮತ್ತು ಐತಿಹಾಸಿಕ ಧರ್ಮಪುರ ಕೆರೆಯಿಂದ ಹೋಬಳಿಯ ಉಳಿದ ಕೆರೆಗಳಿಗೂ ಹಾಗೂ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನೀರು ಪೂರೈಕೆ ಮಾಡುವುದರ ಮೂಲಕ ಜೆಡಿಎಸ್ ಜನರ ಸರ್ಕಾರ ಎಂಬುದಾಗಿ ಸಾಬೀತು ಪಡಿಸಲಾಗುವುದು. ಆದ್ದರಿಂದಲೇ ನಾನು ಸಣ್ಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಆಗಿದ್ದಾಗ ವೇದಾವತಿ ನದಿಗೆ ಕೂನಿಕೆರೆಯಿಂದ ಬೊಂಬೇರಹಳ್ಳಿಯವರೆಗೂ 14 ಚೆಕ್ ಡ್ಯಾಂ ಮತ್ತು ಬ್ಯಾರೇಜ್ ನಿರ್ಮಿಸಿ ನೀರು ಸಂಗ್ರಹ ಮಾಡಲಾಯಿತು. ಈಗ ಹೊಸಹಳ್ಳಿ ಬ್ಯಾರೇಜ್ ನಿಂದ ಧರ್ಮಪುರ ಕೆರೆಗೆ ನೀರು ಬರಲು ಸಾಧ್ಯವಾಯಿತು ಎಂದು ತಿಳಿಸಿದರು.
ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎನ್.ಹನುಮಂತರಾಯ ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರಗಳು ಮತ್ತು ಅನೇಕ ವರ್ಷಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ ಬರೀ ಆಶ್ವಾಸನೆಗಳಲ್ಲಿಯೇ ಜನರಿಗೆ ಮೋಸ ಮಾಡಿದವು. ಈಗ ಮತ್ತೆ ಚುನಾವಣಾ ಪ್ರಣಾಳಿಕೆಯಲ್ಲಿ ಅದೇ ಕೆಲಸವನ್ನು ಮಾಡಿವೆ. ಅದಕ್ಕಾಗಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಮಣೆ ಹಾಕದೆ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಿ ಎಂದು ತಿಳಿಸಿದರು.
ನಿವೃತ್ತ ಸಹಾಯಕ ಇಂಜಿನಿಯರ್ ಹೆಂಜಾರಪ್ಪ, ಎನ್.ಎಂ.ಕೃಷ್ಭಮೂರ್ತಿ, ದೊಡ್ಡಯ್ಯ, ಹಾರ್ಡ್ ವೇರ್ ಶಿವಣ್ಣ, ಟಿ.ರಂಗಸ್ವಾಮಿ, ರಮೇಶ್ ಗೌಡ, ರಂಗೇಗೌಡ, ಸಕ್ಕರ ಗಿರಿ, ನಾಗರಾಜ್, ಮಂಜುನಾಥ್, ಬರಗೂರು ಬಿ.ಮರಿಯಪ್ಪ, ಕರಿಯಣ್ಣ, ಪಾಂಡು, ಪ್ರಸನ್ನಕುಮಾರ್, ರಮೇಶ್, ಯೋಗೇಂದ್ರಪ್ಪ, ರಾಮಮೂರ್ತಿ, ಎಚ್.ಆರ್.ತಿಮ್ಮಯ್ಯ, ಹನುಮಂತಪ್ಪ, ಸತ್ಯ, ಮೂರ್ತಿ, ಸಣ್ಣೀರಪ್ಪ, ರಘು ಸೇರಿದಂತೆ ಧರ್ಮಪುರ ಹೋಬಳಿಯಾದ್ಯಂತ ಆಗಮಿಸಿದ್ದ ನೂರಾರು ಮಂದಿ ಉಪಸ್ಥಿತರಿದ್ದರು.