i
ಆಯನೂರು ಮಂಜುನಾಥ್ ಜೆಡಿಎಸ್ ಸೇರ್ಪಡೆಯಾಗಿದ್ದು ಶಿವಮೊಗ್ಗದಿಂದ ಸ್ಪರ್ಧಿಸಲಿದ್ದಾರೆ-ಹೆಚ್ ಡಿಕೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: jds hdk
ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಪರ ಅಲೆ ಎದ್ದಿದ್ದು ಕನಿಷ್ಠ ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಅವರೊಟ್ಟಿಗೆ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿನಿತ್ಯ ಅಚ್ಚರಿಯ ಬೆಳವಣಿಗೆ ನಡೆಯುತ್ತಿವೆ. ಪಕ್ಷದಿಂದ ಪಕ್ಷಕ್ಕೆ ಜಂಪ್ ಆಗುವವರ ಸಂಖ್ಯೆ ಹೆಚ್ಚಿದೆ. ಹಿಂದೆಂದೂ ಇಷ್ಟು ದೊಡ್ಡ ಮಟ್ಟದ ಪರಿವರ್ತನೆ ಆಗಿರಲಿಲ್ಲ. ಎಲ್ಲಾ ಪಕ್ಷಗಳಲ್ಲೂ ದೊಡ್ಡ ಮಟ್ಟದ ಬದಲಾವಣೆ ಆಗಿವೆ. ಕೆಲ ಪಕ್ಷಕ್ಕೆ ಲಾಭ ಕೆಲ ಪಕ್ಷಕ್ಕೆ ನಷ್ಟ ತಂದು ಕೊಡಲಿದೆ. ಖಾಸಗಿ ಸಮೀಕ್ಷೆಗಳ ವರದಿ ಯಾವುದೂ ಕಾರ್ಯಗತವಾಗಲ್ಲ ಎಂದು ಸೂಚ್ಯವಾಗಿ ಕುಮಾರಸ್ವಾಮಿ ಹೇಳಿದರು.
ಮಂಡ್ಯದಲ್ಲಿ ನಾನು ಅಭ್ಯರ್ಥಿ ಆಗುತ್ತೇನೆಂದು ಹೇಳಿಲ್ಲ, ಆಗಲೆ ಹಲವರು ಸವಾಲು ಒಡ್ಡಿಕೊಂಡು ಹೊರಟಿದ್ದಾರೆ. ನಾನು ಯಾರಿಗೂ ಸವಾಲೊಡ್ಡುವ ಮಟ್ಟಿಗೆ ಬೆಳೆದಿಲ್ಲ, ನಮ್ಮದು ರೈತರ ಪಕ್ಷ ಸಣ್ಣ ಪಕ್ಷ ಎಂದು ಪರೋಕ್ಷವಾಗಿ ಸುಮಲತಾಗೆ ಕುಮಾರಸ್ವಾಮಿ ಟಾಂಗ್ ನೀಡಿದರು.
ಮಂಡ್ಯದಲ್ಲಿ ಜೆಡಿಎಸ್ ಮುಗಿಸುತ್ತೇನೆಂದು ಸವಾಲು ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಜನತೆಯೇ ಸವಾಲು ಸ್ವೀಕರಿಸಲಿದ್ದಾರೆ. ಮಂಡ್ಯದಿಂದ ಸ್ಪರ್ಧೆ ಮಾಡಲು ನಾನೇನು ಟೂರಿಂಗ್ ಟಾಕೀಸಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಲಾಗುತ್ತದೆ. ರಾಮನಗರ, ಚನ್ನಪಟ್ಟಣದಲ್ಲಿ ತಲೆಕೊಟ್ಟೆನು. ಮಂಡ್ಯದಲ್ಲಿ ಹಲವಾರು ಅಭ್ಯರ್ಥಿ ಆಕಾಂಕ್ಷಿಗಳಿದ್ದಾರೆ, ಸಮರ್ಥರಿದ್ದಾರೆ. ಮಂಡ್ಯ ಸ್ಟೋರಿ ಸೃಷ್ಠಿಸಿ ಯಾರನ್ನೋ ವೈಭಕರಿಸಲಾಗುತ್ತಿದೆ ಮೇಲೆಳುವುದು, ಕೆಳಗೆ ಬೀಳುವುದು ಜನ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.
ಜೆಡಿಎಸ್ 123 ಗುರಿಯೊಂದಿಗೆ ನಾನು ಹೊರಟಿದ್ದೇನೆ, ಆಯನೂರು ಮಂಜುನಾಥ್ ಜೆಡಿಎಸ್ ಸೇರ್ಪಡೆ ಆಗಿದ್ದಾರೆ. ಆಯನೂರು ಮಂಜುನಾಥ್ ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರೆ. ಇಂದು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಗುರುವಾರ ನಾಮಪತ್ರ ಸಲ್ಲಿಸುತ್ತಾರೆ ಎಂದು ಹೇಳಿದರು.