i
ಐಟಿ ದಾಳಿಗೆ ಕಾಂಗ್ರೆಸ್-ಬಿಜೆಪಿ ನೇರ ಕಾರಣ, ಮತದಾರರು ತಕ್ಕ ಪಾಠ ಕಲಿಸುತ್ತಾರೆ-ಯಶೋಧರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪನವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಈ ದಾಳಿಯ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಕೈವಾಡ ಇದೆ ಎಂದು ಜೆಡಿಎಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡಿ ಯೋಶೋಧರ ಗಂಭೀರ ಆರೋಪ ಮಾಡಿದರು.
ಹಿರಿಯೂರಿನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಐಟ ಅಧಿಕಾರಿಗಳ ದಾಳಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ಪಕ್ಷಗಳ ಕುಮಕ್ಕು ಇದೆ. ಖಾಸಗೀ ಹೋಟಲ್ ಹೊಂದರಲ್ಲಿ ಐಟ ಅಧಿಕಾರಿಗಳು ಮೋಜು ಮಸ್ತ್ ಮಾಡುತ್ತಾ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆಂದು ಆರೋಪಿಸಿದರು.
ಆದರೆ ನಮ್ಮ ಜೆಡಿಎಸ್ ಅಭ್ಯರ್ಥಿ ಐಟಿ ದಾಳಿಗೆ ಕುಗ್ಗದೆ ಪ್ರಚಾರದಲ್ಲಿ ತೊಡಗಿದ್ದಾರೆ. ರವೀಂದ್ರಪ್ಪ ಕಳೆದ ಎರಡು ವಷಗಳಿಂದ ನಿವೃತ್ತಿರಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದಾ ಐಟಿ ದಾಳಿ ಆಗಲಿಲ್ಲ, ಈಗ ಐಟಿ ದಾಳಿ ಮಾಡಲಾಗಿದ್ದು ಜನ ವಿರೋಧಿ ಕೃತ್ಯವಾಗಿದೆ ಎಂದು ಕಿಡಿ ಕಾರಿದರು.
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಸೇರಿದ್ದ ಜನ ಸಾಗರ ನೋಡಿ ಪಕ್ಷದ ಕಾರ್ಯಕರ್ತರ, ಮುಖಂಡರ ಆತ್ಮ ಸ್ಥೈರ್ಯ ಕುಗ್ಗಿಸಲು ನಾಮಪತ್ರ ಸಲ್ಲಿಸಿದ 24ಗಂಟೆಯಲ್ಲಿ ಐಟಿ ದಾಳಿ ಮಾಡಿಸುತ್ತಾರೆ. ಆದರೆ ಕಾರ್ಯಕರ್ತರು ಹಾಗೂ ಮತದಾರರು ಇದಕ್ಕೆ ಕುಗ್ಗುವುದಿಲ್ಲ, ಬದಲಿಗೆ ಮೇ 10ನೇ ತಾರೀಕು ಸೂಕ್ತ ಉತ್ತರ ನೀಡಲಿದ್ದಾರೆಂದು ಹೇಳಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ ಮಾತನಾಡಿ, ಜೆಡಿಎಸ್ ಪ್ರಬಲವಾಗಿರುವುದನ್ನು ನೋಡಿ ಬಿಜೆಪಿ ಕಾಂಗ್ರೆಸ್ ಎರಡು ಪಕ್ಷಗಳು ಐಟಿ ದಾಳಿ ಮಾಡಿಸಿವೆ. ನಾಮಪತ್ರ ಸಲ್ಲಿಸುವುದಕ್ಕೆ ಬಂದಿದ್ದ ಜನಸಾಗರ ನೋಡಿ ತಡೆಯಲಾರದೆ ಈ ರೀತಿ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಈ ಡಬಲ್ ಇಂಜಿನ್ ಸರ್ಕಾರ ಐಟಿ ದಾಳಿ ಮಾಡಿದೆ. ಶೇ 40 ರಷ್ಟು ಕಮಿಷನ್ ಪಡೆದಿರುವ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಐಟಿ ಅಧಿಕಾರಿಗಳಿಗೆ ತಾಕತ್ತು ಇದ್ದರೆ ದಾಳಿ ಮಾಡಲಿ ಎಂದು ಸವಾಲ್ ಹಾಕಿದರು. ಬಡ ಪಕ್ಷದ ಮೇಲೆ ಆಡಳಿತ ರೂಢ ಪಕ್ಷದವರು ದಾಳಿ ಮಾಡುತ್ತಾರೆ. ಈ ಹಿಂದೆ 2013ರಲ್ಲಿ ಎ.ಕೃಷ್ಣಪ್ಪ ಸ್ಪರ್ಧಿಸಿದ್ದಾಗ ಅವರ ಗೆಲುವು ನಿಶ್ಚಿತ ಎಂದು ಅರಿತ ಕಾಂಗ್ರೆಸ್ಸಿಗರು ಅಂದು ಐಟಿ ದಾಳಿ ಮಾಡಿಸಿ ವಾಮ ಮಾರ್ಗ ಹಿಡಿದಿದ್ದರು. ಈಗ ಮತ್ತೇ ಅದೇ ಕೆಲಸವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಸೇರಿ ಮಾಡಿಸಿವೆ. ಇದಕ್ಕೆ ಬಿಜೆಪಿ ಸರ್ಕಾರ ಬೆಂಬಲವನ್ನು ನೀಡಿದೆ. ಕ್ಷೇತ್ರದ ಮತದಾರರು ಒಂದು ತೀರ್ಮಾನಕ್ಕೆ ಬಂದಿದ್ದು ಈಗಾಗಲೇ ಸುಧಾಕರ್ ಮತ್ತು ಪೂರ್ಣಿಮಾ ಇಬ್ಬರನ್ನೂ ನೋಡಿದ್ದೇವೆ, ಒಂದು ಸಲ ಜೆಡಿಎಸ್ ಪಕ್ಷಕ್ಕೂ ಮತ ನೀಡಬೇಕೆಂದು ತೀರ್ಮಾನಿಸಿದ್ದರಿಂದಲೇ ನಾಮಪತ್ರ ಸಲ್ಲಿಕೆಗೆ ಜನ ಸಾಗರದಂತೆ ಹರಿದು ಬಂದಿದ್ದರು. ಆ ಜನ ಸಾಗರ ನೋಡಿ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನಡುಕ ಉಂಟಾಗಿದೆ. ಹಾಗಾಗಿ ಇಂತಹ ಸಣ್ಣತನಕ್ಕೆ ಕೈ ಹಾಕಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು.
ಕಾಡುಗೊಲ್ಲ ಸಮಾಜದ ಮುಖಂಡ ಹಾಗೂ ವಕೀಲ ಶಿವಶಂಕರ್ ಮಾತನಾಡಿ, ಐಟಿ ಅಧಿಕಾರಿಗಳು ಖಾಸಗೀ ಹೋಟಲ್ ಹೊಂದರಲ್ಲಿದ್ದುಕೊಂಡೇ ಐಟಿ ದಾಳಿ ಮಾಡಿದ್ದಾರೆ. ಐಟಿ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡಗಳಿಗೆ ಏನು ಸಂಬಂಧ ಇದೆ ಎಂದು ಅವರು ಪ್ರಶ್ನಿಸಿದರು.
ಜೆಡಿಎಸ್ ಅಭ್ಯರ್ಥಿಯ ಮೇಲೆ ನಡೆದಿರುವ ದಾಳಿಯ ಹೊಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹೊರಬೇಕು ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ದ್ಯಾಮೇಗೌಡ ಮಾತನಾಡಿ, ಐಟಿ ದಾಳಿಯನ್ನು ಕಾಂಗ್ರೆಸ್ ನಾಯಕರೇ ಮಾಡಿಸಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕಾಂಗ್ರೆಸ್ ಪಕ್ಷದವರ ತಂತ್ರ ಕುತಂತ್ರಗಳೇನು ಎನ್ನುವುದು ಇಡೀ ಕ್ಷೇತ್ರದ ಜನರಿಗೆ ತಿಳಿದಿದೆ ಎಂದು ನೇರ ಆರೋಪ ಮಾಡಿದರು.
ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದವರು ಯಾರೇ ಐಟಿ ದಾಳಿ ಮಾಡಿಸಿರಲಿ, ಮತದಾರ ಮಾತ್ರ ಪ್ರಜ್ಞಾವಂತರಿದ್ದು ಈ ಸಲ ಜೆಡಿಎಸ್ ಅಭ್ಯರ್ಥಿಯ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಇಡೀ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಅಲೆ ಎದ್ದಿದ್ದು ಇದರಿಂದ ಬೆಚ್ಚಿರುವ ವಿರೋಧಿಗಳು ಈ ರೀತಿಯ ಕೃತ್ಯಕ್ಕೆ ಕೈ ಹಾಕಿದ್ದಾರೆಂದು ಗುಡುಗಿದರು.
ತಾಲ್ಲೂಕು ಅಧ್ಯಕ್ಷ ಹನುಮಂತರಾಯ್ಯ, ಯಾದವ ಸಮಾಜದ ಜೆಜಿಹಳ್ಳಿ ಮಂಜುನಾಥ್, ಕುರುಬ ಸಮಾಜ ಮುಖಂಡ ಹಾಗೂ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಂದಿಹಳ್ಳಿ ಗಿರಿಜಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಣ್ಣ, ದಲಿತ ನಾಯಕ ಎಂ.ಡಿ.ರವಿ, ಮಾಜಿ ತಾಲ್ಲೂಕು ಅಧ್ಯಕ್ಷ ಶಿವಪ್ರಸಾದ್ ಗೌಡ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ರತ್ನಮ್ಮ, ಪರಮೇಶ್ ಗೂಳ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.