i
ನನ್ನ ಸೋಲಿಸಿ ಕಣ್ಣೀರಿಗೆ ಕಾರಣದವರಿಗೆ ಕಣ್ಣೀರು ಹಾಕಿಸಿದರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ-ದೇವೇಗೌಡ…
ಚಂದ್ರವಳ್ಳಿ ನ್ಯೂಸ್, ಮಧುಗಿರಿ:
ಲೋಕಸಭೆಯಲ್ಲಿ ನನ್ನ ಸೋಲಿಸಿ ಕಣ್ಣೀರಿಗೆ ಕಾರಣದವರಿಗೆ ಕಣ್ಣೀರು ಹಾಕಿಸಿದರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತದಾರರಲ್ಲಿ ಮನವಿ ಮಾಡಿದರು.
ತಾಲೂಕಿನ ಡಿ.ಕೈಮರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಗೌಡರು, ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರ ಸೋಲಿಗೆ ಕರೆ ನೀಡಿ, 1994ರಲ್ಲಿ ನಾನು ಸಿಎಂ ಆದಾಗ ಜಿಲ್ಲೆಯಿಂದ 9 ಸ್ಥಾನ ಕೊಟ್ಟ ಜಿಲ್ಲೆ ಇದು. ಈಗ ನಾಡಿನ ಅಭಿವೃದ್ಧಿ ಬಯಸಿ ಪಂಚರತ್ನ ಯೋಜನೆ ಜಾರಿಗೆ ಮುಂದಾಗಿರುವ ಕುಮಾರಸ್ವಾಮಿ ಸಿಎಂ ಆಗಲಿದ್ದು ಜಿಲ್ಲೆಯಿಂದ ಕನಿಷ್ಟ 10 ಸ್ಥಾನಗಳನ್ನು ಜನತೆ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಬಿಜೆಪಿಯವರು ಜೆಡಿಎಸ್ ಕೇವಲ 20 ಸ್ಥಾನಗಳನ್ನು ಮಾತ್ರ ಪಡೆಯಲಿದೆ ಎನ್ನುತ್ತಿದ್ದಾರೆ. ಆದರೆ ಅದಕ್ಕೆ ಉತ್ತರ ಮಧುಗಿರಿಯಿಂದಲೇ ಮತದಾರರು ಕೊಡಬೇಕು ಎಂದು ಗೌಡರು ಮನವಿ ಮಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಕೇಳಿದ್ದ ಕೆ.ಎನ್.ರಾಜಣ್ಣ ನಿಗೆ ಯಾವ ತತ್ವವಿದೆ ಎಂದು ಪ್ರಶ್ನಿಸಿದ ಇಬ್ರಾಹಿಂ ನಾಯಕ ಸಮಾಜಕ್ಕೆ ಮೀಸಲಾತಿ ಕಲ್ಪಿಸಿದ ದೇವೇಗೌಡರನ್ನು ನೀನೆ ಸ್ವಾಗತಿಸಬೇಕಿತ್ತು. ಮುಸ್ಲಿಂ, ಯಾದವ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಲು ಗೌಡರು ಕಾರಣರಾಗಿದ್ದಾರೆ. ಅಂತಹ ಗೌಡರಿಗೆ ಲೋಕಸಭೆಯ ಚುನಾವಣೆಯಲ್ಲಿ ವಿಷವಿಕ್ಕಿದಿರಿ. ಇದಕ್ಕೆ ಉತ್ತರ ಮಧುಗಿರಿ ಜನತೆ ಈ ಬಾರಿ ಕೊಡುತ್ತಾರೆ. ಶಾಸಕ ವೀರಭದ್ರಯ್ಯ ಶಾಸಕ ಮಾತ್ರವಲ್ಲ ಮಂತ್ರಿಯಾಗುವ ಯೋಗವಿದೆ ಎಂದಿದ್ದು, ಈ ಬಾರಿ ಶೇ.90 ರಷ್ಟು ಮುಸ್ಲಿಮರು ಜೆಡಿಎಸ್ ಪರವಾಗಿ ನಿಲ್ಲಲಿದ್ದಾರೆ ಎಂದು ಹೇಳಿದರು. ವೇದಿಕೆಯಲ್ಲಿ ಶಾಸಕ ವೀರಭದ್ರಯ್ಯ ಸೇರಿದಂತೆ ಇತರೆ ಜೆಡಿಎಸ್ ಮುಖಂಡರು ಇದ್ದರು.