i
ಮುಂದಿನ ಐದು ದಿನ ಭಾರೀ ಮಳೆ, 23 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹವಾಮಾನ ವೈಪರಿತ್ಯ ಪರಿಣಾಮವಾಗಿ ಕರ್ನಾಟಕದಲ್ಲಿ ಮುಂದಿನ ಐದು ದಿನಗಳಲ್ಲಿ ಬೇರೆ ಬೇರೆ ದಿವಸ ಒಟ್ಟು 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರ್ನಾಟಕ ಕರಾವಳಿಯ ಸಮುದ್ರ ಮೇಲ್ಮೈನಲ್ಲಿನ ಸೃಷ್ಟಿಯಾಗಿದ್ದ 1.5 ಕಿಲೋ ಮೀಟರ್ ಎತ್ತರದ ಸೈಕ್ಲೋನ್(ಸ್ಟ್ರಫ್) ಉತ್ತರ ಒಳನಾಡು ಮಾರ್ಗವಾಗಿ ದಕ್ಷಿಣ ಒಳನಾಡಿನತ್ತ ಹಾದು ಹೋಗಿದೆ. ಇದರ ಪ್ರಭಾವದಿಂದ ಏಪ್ರಿಲ್ 27ರಿಂದ 05 ದಿನ ಭಾರೀ ಮಳೆ ನಿರೀಕ್ಷೆ ಇದೆ ಹವಾಮಾನ ಇಲಾಖೆ ಸ್ಪಷ್ಟ ಪಡಿಸಿದೆ.
ಮುಂದಿನ ಮೂರು ದಿನ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಬಿದ್ದರೆ, ಉತ್ತರ ಒಳನಾಡಿನ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನಲ್ಲೂ ಮುಂದಿನ ಮೂರು ದಿನ ಉತ್ತಮವಾಗಿ ಮಳೆ ಆಗಲಿದ್ದು ಏಪ್ರಿಲ್ 30 ಮತ್ತು 31 ರಂದು ತುಮಕೂರು, ಶಿವಮೊಗ್ಗ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ವಿಜ್ಞಾನಿ ಡಾ.ಪ್ರಸಾದ್ ಮಾಹಿತಿ ನೀಡಿದರು.