i
ಬಿಜೆಪಿ ಶೇ. 40 ಪರ್ಸೆಂಟ್ ಕಮಿಷನ್ ಸರ್ಕಾರ ಕಿತ್ತೊಗೆಯಬೇಕು-ಸುಧಾಕರ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶೇ. 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದು ಈ ಬಿಜೆಪಿ ಪಕ್ಷವನ್ನು ಕಿತ್ತೊಗೆಯಬೇಕು ಎಂದು ಮಾಜಿ ಸಚಿವ ಡಿ.ಸುಧಾಕರ್ ಕರೆ ನೀಡಿದರು.
ತಾಲೂಕಿನ ಹುಲಗಲಕುಂಟೆ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಧಾಕರ್ ಮಾತನಾಡಿ, ಈ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ, ದಿನನಿತ್ಯ ಬಳಸುವಂತಹ ಗ್ಯಾಸ್ ಸಿಲಿಂಡರ್ ಕರೆಂಟ್ ವಿದ್ಯುತ್, ಡಿಸೇಲ್, ಪೆಟ್ರೋಲ್, ತೊಗರಿ ಬೇಳೆ ಕಾಳುಗಳ ಬೆಲೆ ಎಲ್ಲವೂ ಗಗನಕ್ಕೆ ಏರಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರದ ಅನುದಾನದ ಅಡಿಯಲ್ಲಿ ರೇಶನ್ ಕೂಡ ತಲೆಗೆ 10 ಕೆಜಿ ಕೊಡಬೇಕೆಂದಿದ್ದೇವೆ ಆದರೆ ಬಿಜೆಪಿ ಸರ್ಕಾರ 7 ಕೆಜಿಯನ್ನ 4 ಕೆಜಿಗೆ ಇಳಿಸಿದೆ ಇವರು ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಪ್ರಚಾರ ಪ್ರಿಯರಾಗಿದ್ದಾರೆ. ಇವರ ಸರ್ಕಾರದಲ್ಲಿ ಯಾವ ಒಂದು ಕೆಲಸವೂ ಕೂಡ ಪ್ರಾಮಾಣಿಕವಾಗಿ ನಡೆಯಲಿಲ್ಲ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕೆಪಿಎಸ್ಸಿ ಉದ್ಯೋಗ ನೇಮಕಾತಿಯಲ್ಲಿ ಹಗರಣಗಳು ನೋಡುತ್ತಾ ಇದ್ದೇವೆ. ನಿರುದ್ಯೋಗದ ಸಮಸ್ಯೆ ತುಂಬಿ ತುಳುಕುತ್ತಿದೆ ಎಂದು ಹೇಳಿದರು.
ಹಿರಿಯೂರು ತಾಲೂಕಿನ ಶಾಸಕರು ಕೆಲಸ ಮಾಡಿದ್ದಕ್ಕಿಂತ ಹೆಚ್ಚಾಗಿ ಪ್ರಚಾರ ಪಡೆದುಕೊಂಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ರೂಪಾಯಿ ಕೂಡ ಅನುದಾನ ಬಿಡುಗಡೆ ಮಾಡಿಲ್ಲ ಆದರೂ ಕೂಡ ನಾನು ನೀರು ತಂದೆ ನಾನು ಇಷ್ಟು ಭೂಮಿಯನ್ನು ನೀರಾವರಿ ಮಾಡಿದೆ ಅಂತ ಸುಳ್ಳು ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಮೊದಲು ಭ್ರಷ್ಟಾಚಾರ ಸರ್ಕಾರ ತೊಲಗಿಸಿ ಪ್ರಾಮಾಣಿಕವಾದ ಸರ್ಕಾರ ತರುವುದಕ್ಕೆ ಕಾಂಗ್ರೆಸ್ಗೆ ಮತ ನೀಡಿ ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ನಾಗೇಂದ್ರ ನಾಯ್ಕ್, ಮಾಜಿ ನಗರಸಭಾ ಸದಸ್ಯ ಪ್ರೇಮ್ ಕುಮಾರ್, ಮಾಜಿ ನಗರಸಭಾ ಅಧ್ಯಕ್ಷ ಚಂದ್ರಶೇಖರ್, ಗ್ರಾಮದ ಮುಖಂಡರಾದ ರಂಗಸ್ವಾಮಿ, ತೇಜಪ್ಪ, ಸೋಮಶೇಖರ್, ಕಲ್ಪನಾ, ನರಸಿಂಹಪ್ಪ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.