i
ಶಕ್ತಿ ಕೇಂದ್ರ ವಿಧಾನಸೌಧ ಕದ ತಟ್ಟಿದ ಹೊಸಮುಖಗಳು…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ಜಿಲ್ಲೆಯಲ್ಲಿ ಮೂವರು ಹೊಸಬರು ಬೆಂಗಳೂರಿನ ಶಕ್ತಿ ಕೇಂದ್ರದ ಕದ ತಟ್ಟಿದ್ದಾರೆ. ಮಾಯಕೊಂಡದ ಬಸವಂತಪ್ಪ, ಚನ್ನಗಿರಿಯ ಶಿವಗಂಗಾ ಬಸವರಾಜ್, ಜಗಳೂರಿನ ದೇವೇಂದ್ರಪ್ಪ ವಿಧಾನಸೌಧ ಹತ್ತಿದ ಹೊಸ ಶಾಸಕರು.
ಮಾಯಕೊಂಡದಲ್ಲಿ 2018ರಲ್ಲಿ ಬಸವಂತಪ್ಪ ಕಡಿಮೆ ಅಂತರಗಳಿಂದ ಸೋತಿದ್ದರು. ತದ ನಂತರ ಜನರ ಬಳಿ ಒಡನಾಟ ನಡೆಸಿದ್ದರು. ಮಾಯಕೊಂಡ ಹಿಂದುಳಿದ ಊರಾಗಿದ್ದು, ಎಸ್ಸಿ ಮೀಸಲು ಕ್ಷೇತ್ರವಾಗಿದೆ. ಕಳೆದ ಬಾರಿ ಲಿಂಗಣ್ಣ ಇವರನ್ನು ಸೋಲಿಸಿದ್ದರು. ಬಳಿಕ ಬಸವಂತಪ್ಪ ಜನರಿಗೆ ಹತ್ತಿರವಾಗಿದ್ದರು. ಕೊರೊನಾ ಸಮಯದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದರು. ಸಿಜೆ ಆಸ್ಪತ್ರೆಯಲ್ಲಿ ಮೃತರಾದವರಿಗೆ ಆ್ಯಂಬುಲೇನ್ಸ್ ಸೇರಿದಂತೆ ಇನ್ನಿತರ ಕೆಲಸ ಮಾಡುವಲ್ಲಿ ಬಸವಂತಪ್ಪ ಮುಂಚೂಣಿಯಲ್ಲಿದ್ದರು. ವಿಧಾನ ಸಭಾ ಚುನಾವಣಾ ಬಳಿಕ ಮಾಯಕೊಂಡಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಸವಿತಾಬಾಯಿ, ಬಸವಂತಪ್ಪ ನಡುವೆ ನೇರ ಪೈಪೋಟಿ ಇತ್ತು. ಅಂತಿಮವಾಗಿ ಬಸವಂತಪ್ಪರಿಗೆ ಟಿಕೆಟ್ ಸಿಕ್ಕಿತ್ತು. ಇದಾದ ನಂತರ ಬೇಡಜಂಗಮ ಸರ್ಟೀಫಿಕೇಟ್ ಪಡೆದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಗೀಶ್ ಸ್ವಾಮಿ ಪುಷ್ಪಾವಾಗೀಶ್ ಸ್ವಾಮಿ ಕಣಕ್ಕೆ ಇಳಿದಿದ್ದರು. ಈ ಬಗ್ಗೆ ದಲಿತರ ವಿರೋಧ ಇದ್ದರೂ, ಬಸವಂತಪ್ಪ ಈ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲ. ಇದು ಬಸವಂತಪ್ಪಗೆ ಪ್ಲಸ್ ಆಯಿತು. ಹಾಗೆಯೇ ದುಗುಡವೂ ಇತ್ತು. ಅಂತಿಮವಾಗಿ ಲಿಂಗಾಯಿತ ಪ್ರಾಬಲ್ಯವಿರುವ ಈ ಊರಿನಲ್ಲಿ ಲಿಂಗಾಯಿತರು ಬಸವಂತಪ್ಪ ಕೈ ಹಿಡಿದರು. ಇವರ ಪ್ರತಿ ಸ್ಪರ್ಧಿ ಪುಷ್ಪಾ ವಾಗೀಶ್ಸ್ವಾಮಿ ವಿರುದ್ಧ 32 ಸಾವಿರದ 915 ಲೀಡ್ನಲ್ಲಿ ಗೆದ್ದು, ವಿಧಾನಸೌಧದ ರಂಗ ಪ್ರವೇಶಿಸಿದ್ದಾರೆ.
ಚನ್ನಗಿರಿಯ ಶಿವಗಂಗಾ ಬಸವರಾಜ್ ಶಾಮನೂರು ಮನೆತನದ ಆಪ್ತನಾಗಿದ್ದು, ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷರಾಗಿದ್ದರು. ಬೆಲೆ ಏರಿಕೆ, ರೈತ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅಲ್ಲದೇ ಚನ್ನಗಿರಿ ಕ್ಷೇತ್ರದಲ್ಲಿಯೇ ಇದ್ದು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಸಹಜವಾಗಿಯೇ ಚನ್ನಗಿರಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಇದ್ದು, ರೈತ ಮುಖಂಡ ತೇಜಸ್ವಿ ಪಟೇಲ್, ಜೆಡಿಎಸ್ನಿಂದ ಬಂದ ಹೊದಿಗೆರೆ ರಮೇಶ್ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಶಾಮನೂರು ಆಪ್ತ ಶಿವಗಂಗಾ ಬಸವರಾಜ್ಗೆ ಟಿಕೆಟ್ ನೀಡಿತ್ತು. ಇಲ್ಲಿ ಶಾಸಕರಾಗಿದ್ದ ಮಾಡಾಳ್ವಿರೂಪಾಕ್ಷಾಪ್ಪ ಮಗ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲುತ್ತಾರೆ ಎಂಬ ಬಲವಾದ ನಂಬಿಕೆ ಇತ್ತು. ಆದರೆ ಮತದಾರ ಶಿವಗಂಗಾ ಬಸವರಾಜ್ 16435 ಅಂತರದಿಂದ ಸಮೀಪದ ಸ್ಪರ್ಧಿ ಮಾಡಾಳ್ ಮಲ್ಲಿಕಾರ್ಜುನ್ ರನ್ನು ಸೋಲಿಸಿ ಶಕ್ತಿ ಸೌಧ ತಲುಪಿದ್ದಾರೆ.
ಜಗಳೂರಿನ ದೇವೇಂದ್ರಪ್ಪ ಗೆ ಮೊದಲಿನಿಂದಲೂ ಶಾಸಕರಾಗುವ ಆಸೆಯಿದ್ದು, ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದಿದ್ದರು. ಅಲ್ಲದೇ ಕಾಂಗ್ರೆಸ್ಗೆ ಬರುವ ವೇಳೆ ಬೆಂಗಳೂರಿನಲ್ಲಿ ತಮ್ಮದೇ ಆದ ಶಕ್ತಿ ಪ್ರದರ್ಶನವನ್ನು ಕಾಂಗ್ರೆಸ್ ನಾಯಕರಿಗೆ ತೋರಿಸಿದ್ದರು. ಮಗ ವಾಣಿಜ್ಯ ತೆರಿಗೆ ಅಧಿಕಾರಿಯಾಗಿದ್ದು, ದೇವೇಂದ್ರಪ್ಪಗೆ ಪ್ಲಸ್ ಆಗಿದೆ. ಇಲ್ಲಿಯೂ ಸಹ ಮಾಜಿ ಶಾಸಕ ರಾಜೇಶ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಕೈ ಟಿಕೆಟ್ಪಡೆಯುವಲ್ಲಿ ದೇವೇಂದ್ರಪ್ಪ ಯಶಸ್ವಿಯಾದರು. ನಂತರ ಹಾಲಿ ಶಾಸಕ ಎಸ್.ವಿ.ರಾಮಚಂದ್ರಪ್ಪ, ಪಕ್ಷೇತರ ಅಭ್ಯ ರ್ಥಿಯಾಗಿ ಸ್ಪರ್ಧೆಮಾಡಿದ್ದ ರಾಜೇಶ್ಗೆ ಸೆಡ್ಡು ಹೊಡೆದು ಹಾಲಿ ಶಾಸಕ ಎಸ್.ವಿ.ರಾಮಚಂದ್ರ ವಿರುದ್ಧ 872 ಮತಗಳ ಅಂತರದಿಂದ ಕಷ್ಟಪಟ್ಟು ಗೆದ್ದರು. ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಮಾಜಿ ಶಾಸಕ ಎಚ್.ಪಿ.ರಾಜೇಶ್ 49442 ಮತಗಳನ್ನು ಪಡೆದರೆ, ಬಿಜೆಪಿಯ ಎಸ್ವಿ ರಾಮಚಂದ್ರ 48891 ಮತಗಳನ್ನು ಪಡೆದರು. ಜಯಶಾಲಿಯಾಗಿರುವ ದೇವೇಂದ್ರಪ್ಪ 50765 ಮತಗಳನ್ನು ಪಡೆಯುವ ಮೂಲಕ ವಿಧಾನಸೌಧಕ್ಕೆ ಎಂಟ್ರಿಕೊಟ್ಟಿದ್ದಾರೆ.