i
9 ವರ್ಷದಲ್ಲಿ 102 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿ ದೊಡ್ಡ ಸಾಧನೆ-ಸಿದ್ದು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರ 9 ವರ್ಷದಲ್ಲಿ 102 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿ ಅವರ ದೊಡ್ಡ ಸಾಧನೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.
ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕರ್ನಾಟಕದಿಂದ ಸುಮಾರು 4 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಭಾರತದ ಮೇಲಿನ ಸಾಲ 52,11,000 ಕೋಟಿ ರೂ. ಇತ್ತು. ಈಗ ದೇಶದ ಮೇಲಿನ ಸಾಲ 155 ಲಕ್ಷ ಕೋಟಿ ರೂ.ಆಗಿದೆ. ಕಳೆದ 9 ವರ್ಷದಲ್ಲಿ 102 ಲಕ್ಷ ಕೋಟಿ ಸಾಲ ಮಾಡಲಾಗಿದೆ. 2018ರ ನಮ್ಮ ಸರ್ಕಾರದ ಅವಧಿಯವರೆಗೆ ರಾಜ್ಯದ ಮೇಲೆ 2,42,000 ಕೋಟಿ ಸಾಲ ಇತ್ತು. ಈಗ 2023-24ರಲ್ಲಿ ತಿಳಿಸಿರುವಂತೆ 5,64,000 ಕೋಟಿ ಸಾಲ ರಾಜ್ಯದ ಮೇಲಿದೆ. ಅಂದರೆ ಅವರ ಅವಧಿಯಲ್ಲಿ 3,22,000 ಕೋಟಿ ಸಾಲ ಪಡೆದಿದ್ದಾರೆ. ಈ ರೀತಿಯ ಆರ್ಥಿಕ ಪರಿಸ್ಥಿತಿ ರಾಜ್ಯದಲ್ಲಿದೆ. ನಮ್ಮ ಸರ್ಕಾರ ಆರ್ಥಿಕ ದಿವಾಳಿಯಾಗಲು ಬಿಡದಂತೆ, ಜನರಿಗೆ ನೀಡಿರುವ ಗ್ಯಾರೆಂಟಿಗಳನ್ನು ಈಡೇರಿಸುತ್ತೇವೆ ಎಂದು ತಿಳಿಸಿದರು. “ನಮ್ಮದು ನುಡಿದಂತೆ ನಡೆಯುವ ಸರ್ಕಾರ, ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಗಳನ್ನು ಉಚಿತವಾಗಿ ನೀಡಲು ಮಾಹೆಯಾನ 1200 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. ಪ್ರತಿ ಮನೆಯ ಒಡತಿಗೆ ಮಾಸಿಕ 2000 ರೂ., ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ, ಈ ವರ್ಷ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳವರೆಗೆ 3,000 ರೂ.ಗಳನ್ನು ಹಾಗೂ ಡಿಪ್ಲೋಮಾ ಪಾಸಾದವರಿಗೆ 1500 ರೂ.ಗಳನ್ನು ಯುವನಿಧಿಯಡಿ ನೀಡಲಾಗುವುದು. ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಇವುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಸ್ತೃತ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಗಳ ಮಾಹಿತಿಯನ್ನೂ ಪಡೆಯಲಾಗುತ್ತಿದ್ದು, ಇವುಗಳನ್ನು ಪುನರಾಂಭಿಸಲಾಗುವುದು. ಇದೇ 22 ರಿಂದ 24 ರವರೆಗೆ ಮೂರು ದಿನಗಳ ಕಾಲ ಅಧಿವೇಶನವನ್ನು ಕರೆಯಲಾಗುವುದು, ಜುಲೈ ಮಾಹೆಯಲ್ಲಿ ಆಯವ್ಯಯ ಮಂಡಿಸಲಾಗುವುದು. ಹಿಂದಿನ ಅವಧಿಯಲ್ಲಿ ನಮ್ಮ ಸರ್ಕಾರ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿತ್ತು. ನಾವು ಕೊಟ್ಟ ಮಾತಿನಂತೆಯೇ ನಡೆದಿದ್ದೇವೆ. ನಾವು ನೀಡಿದ ಭರವಸೆಗಳನ್ನು ಈಡೇರಿಸುವ ಜೊತೆಗೆ ಇಂದಿರಾ ಕ್ಯಾಟೀನ್, ಸಾಲಮನ್ನಾ, ವಿದ್ಯಾಸಿರಿ, ಶೂ ಭಾಗ್ಯ, ಪಶು ಭಾಗ್ಯ ಸೇರಿದಂತೆ ಹೊಸ 30 ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ನಾವು ಈಗ ನೀಡಿರುವ ಗ್ಯಾರಂಟಿ ಭರವಸೆಗಳು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತದೆ ಎಂದು ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ, ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ, ರಾಜ್ಯವನ್ನು ಸಾಲಗಾರ ಮಾಡಲಾಗುವುದೆಂದು ಪ್ರಧಾನ ಮಂತ್ರಿಗಳು ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ, ಗ್ಯಾರೆಂಟಿಗಳನ್ನು ಈಡೇರಿಸಲು ತಕ್ಷಣದ ಲೆಕ್ಕಾಚಾರದ ಪ್ರಕಾರ 50 ಸಾವಿರ ಕೋಟಿ ಬೇಕಾಗುತ್ತದೆ. ನಮ್ಮ ರಾಜ್ಯದ ಆಯವ್ಯಯದ ಒಟ್ಟು ಗಾತ್ರ 3.10 ಲಕ್ಷ ಕೋಟಿ ರೂ. ಪ್ರತಿ ವರ್ಷ ಇದರ ಗಾತ್ರ ಶೇ. 10 ರಷ್ಟು ಹೆಚ್ಚುತ್ತದೆ. ತೆರಿಗೆಯ ವಸೂಲಾತಿಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಜಿಎಸ್ ಟಿ ಮೊತ್ತ ರಾಜ್ಯಕ್ಕೆ ನೀಡುವುದು ಕೇಂದ್ರ ಸರ್ಕಾರದ ತೀರ್ಮಾನ. ರಾಜ್ಯಕ್ಕೆ ಪೆಟ್ರೋಲ್ ಡೀಸೆಲ್, ಅಬಕಾರಿ, ಮೋಟರು ವಾಹನಗಳ ತೆರಿಗೆ, ಸ್ಟ್ಯಾಂಪ್ ಮತ್ತು ರಿಜಿಸ್ಟ್ರೇಷನ್ ಗಳಿಂದ ರಾಜ್ಯಕ್ಕೆ ಪ್ರಮುಖವಾಗಿ ಆದಾಯ ಸಂಗ್ರಹವಾಗುತ್ತದೆ. ಈ ಸಾಲಿನ ಬಜೆಟ್ ನಲ್ಲಿ ರಾಜ್ಯಕ್ಕೆ 15ನೇ ಹಣಕಾಸು ಆಯೋಗದಿಂದ ಕೇವಲ 50 ಸಾವಿರ ಕೋಟಿ ಬರುವುದಾಗಿ ಹೇಳಲಾಗಿದೆ. ಕರ್ನಾಟಕಕ್ಕೆ 1 ಲಕ್ಷ ಕೋಟಿ ರೂ.ಗಳು ಬರಬೇಕಿತ್ತು. ಕೇಂದ್ರದಿಂದ ರಾಜ್ಯಕ್ಕೆ ಬರುವ ಪಾಲನ್ನು ದೊರಕಿಸಿಕೊಳ್ಳುವಲ್ಲಿ ಹಿಂದಿನ ಸರ್ಕಾರ ಬೇಜವಾಬ್ದಾರಿತನ ತೋರಿದೆ ಎಂದು ವಾಗ್ದಾಳಿ ಮಾಡಿದರು. 2023-24ರಲ್ಲಿ ಸಾಲದ ಮೇಲಿನ ಬಡ್ಡಿ ಹಾಗೂ ಅಸಲು ತೀರಿಸಲು 56 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ತೆರಿಗೆ ಸಂಗ್ರಹ, ಅನಗತ್ಯ ವೆಚ್ಚಗಳ ನಿಯಂತ್ರಣ, ಬಡ್ಡಿಯನ್ನು ಕಡಿಮೆ ಮಾಡುವುದು, ಸಾಲ ತೆಗೆದುಕೊಳ್ಳದೇ ಇರುವುದು, ಇನ್ನೂ ಹೆಚ್ಚಿನ ಕ್ರಮಗಳ ಮೂಲಕ ವರ್ಷಕ್ಕೆ 15,000 ಕೋಟಿ ರೂ.ಗಳನ್ನು ಗಳಿಸಬಹುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.